ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ. ನಮ್ಮ ಸುತ್ತಲಿನ ಪರಿಸರವನ್ನು ನಾವೇ ಹದಗೆಡಿಸಿ, ಆರೋಗ್ಯಕ್ಕಾಗಿ ಪರದಾಡುವುದು ಬೇಡ. ಇನ್ನು ಮಳೆಗಾಲ ಆರಂಭಗೊಳ್ಳುತ್ತಿದ್ದು, ನಾಗರಿಕರು, ತಮ್ಮ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕಾರ ನೀಡಬೇಕು ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮನವಿ ಮಾಡಿದರು.

ಬಿಟಿಡಿಎದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 20 ದಿನಗಳ ಸ್ವಚ್ಛತಾ ಅಭಿಯಾನದ ವೇಳೆ ಸೆಕ್ಟರ್ ನಂ.34ರಲ್ಲಿ ನಾಗರಿಕರು ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನವನಗರದ ಜನತೆಗೆ ಸ್ವಚ್ಛತೆ, ಕುಡಿಯುವ ನೀರು, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಬಿಟಿಡಿಎ ತನ್ನದೇ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದೆ. ಪ್ರತಿಯೊಂದು ಸೆಕ್ಟರ್‌ ಗಳಲ್ಲೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಬಿಟಿಡಿಎ ಅಧಿಕಾರಿಗಳು, ಸ್ವಚ್ಛತೆ ಜವಾಬ್ದಾರಿ ಹೊತ್ತ ಗುತ್ತೆಗೆದಾರರು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಜನರ ಸಹಕಾರ ಮುಖ್ಯವಾಗಿದೆ ಎಂದರು.

ಸಂತ್ರಸ್ತರ ಸಮಸ್ಯೆ ಆಲಿಕೆ: ನಾನು ಪ್ರತಿದಿನ ಬಿಟಿಡಿಎ ಅಧ್ಯಕ್ಷರ ಕಚೇರಿಯಲ್ಲಿ ಲಭ್ಯ ಇರುತ್ತೇನೆ. ಸಂತ್ರಸ್ತರು ತಮ್ಮ ಯಾವುದೇ ಸಮಸ್ಯೆ ಇದ್ದರೂ, ನೇರವಾಗಿ ಭೇಟಿ ಮಾಡಬೇಕು. ಬಿಟಿಡಿಎ ಪುನರ್ವಸತಿ ಕಚೇರಿಯಲ್ಲಿ ಇ-ಸ್ವತ್ತು ಸಮಸ್ಯೆ ಬಹಳ ದಿನಗಳಿಂದ ಇತ್ತು. ಅದನ್ನು ಬಹುತೇಕ ಬಗೆಹರಿಸಲಾಗಿದೆ. ಈ ವರೆಗೆ ಬಾಕಿ ಇದ್ದ ಎಲ್ಲ ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಇ-ಸ್ವತ್ತು ದಾಖಲೆ ಪರಿಶೀಲಿಸಿ, ಉತಾರ ನೀಡಲು ಸಮಯಾವಕಾಶ ಬೇಕಾಗುತ್ತದೆ. ಇದಕ್ಕೆ ಸಂತ್ರಸ್ತರೂ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಟಿಡಿಎದಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನ, ಪ್ರತಿ ಸೆಕ್ಟರನಲ್ಲೂ ನಡೆದಿದೆ. ಇದಕ್ಕೆ ನಾಗರಿಕರೂ ಸ್ಪಂದಿಸುತ್ತಿದ್ದಾರೆ. ಬಿಟಿಡಿಎ ವಿಭಾಗ-2ರಿಂದ ನಾಗರಿಕರು ಹಸಿ ಕಸ, ಒಣ ಕಸ ಬೇರ್ಪಡಿಸಿ ಹೇಗೆ ನೀಡಬೇಕು, ಸ್ವಚ್ಛತೆ ಇಲ್ಲದಿದ್ದರೆ ಆಗುವ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸುವ ಕರಪತ್ರಗಳನ್ನು ಪರತಿಯೊಂದು ಮನೆಗೂ ಹಂಚಲಾಗಿದೆ. ಓದಿ, ಸುಮ್ಮನೇ ಬೀಸಾಕದೇ ಅವುಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಹೊಸ ಹೊಸ ಕಾರ್ಯಕ್ಕೆ ಸನ್ಮಾನ: ಪ್ರಕಾಶ ತಪಶೆಟ್ಟಿ ಅವರು, ಬಿಟಿಡಿಎ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸಾಕಷ್ಟು ಬದಲಾವಣೆ ತರುತ್ತಿದ್ದಾರೆ. ಅಧಿಕಾರಿಗಳೂ ಕ್ರಿಯಾಶೀಲರಾಗುವಂತೆ ಮಾಡಿದ್ದಾರೆ. ಮುಖ್ಯವಾಗಿ ಪ್ರತಿ ಸೆಕ್ಟರನಲ್ಲಿ ಸ್ವಚ್ಛತಾ ಅಭಿಯಾನ ನಡೆಸುತ್ತಿರುವುದು ಸ್ವಾಗತಾರ್ಹ ಎಂದು ಸೆಕ್ಟರ್ ನಂ.34ರ ನಿವಾಸಿಗಳು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಸೆಕ್ಟರ್ ನಂ.34ರ ವಕೀಲ ರಮೇಶ ಹೂಗಾರ, ನೂರಂದಪ್ಪ ಮುಂಡೇವಾಡಿ, ಮುತ್ತಣ್ಣ ಕಟ್ಟಿಮನಿ, ಹೀರಾಲಾ ಅಷ್ಟಕರ, ಶಂಕರ ಮಗಜಿ ಮುಂತಾದವರು ತಪಶೆಟ್ಟಿ ಅವರನ್ನು ಸನ್ಮಾನಿಸಿದರು.

ಬಿಟಿಡಿಎ ವಿಭಾಗ-2ರ ಕಾರ್ಯನಿರ್ವಾಹಕ ಎಂಜಿನಿಯರ್ ವೈ.ಬಿ.ಪಾತ್ರೋಟಿ, ಅಧಿಕಾರಿಗಳಾದ ಸುರೇಶ ತೆಗ್ಗಿ, ಶ್ರೀಕಾಂತ ಹಿರೇಗೌಡರ, ರವಿ ಅಂತರಗೊಂಡ, ಹಾಲವರ, ಪ್ರಮುಖರಾದ ಶಿವಕುಮಾರ ನಂದಿಕೋಲಮಠ, ಶಂಕರ ತಪಶೆಟ್ಟಿ, ರಾಮು ರಾಕುಂಪಿ, ಲಕ್ಷ್ಮಣ ತಾಳಿಕೋಟಿ, ರಾಜು ಹುಲ್ಯಾಳ, ಸಂಜೀವ ವಾಡ್ಕರ ಮುಂತಾದವರು ಉಪಸ್ಥಿತರಿದ್ದರು.

ಸ್ವಚ್ಛತೆ ಎಂಬುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ನವನಗರದಲ್ಲಿ ಸ್ವಚ್ಛತೆ ಬಗ್ಗೆ ಬಹಳಷ್ಟು ಆರೋಪ ಕೇಳಿ ಬಂದಿದ್ದವು. ಹೀಗಾಗಿ ನಾನು ಅಧಿಕಾರ ವಹಿಸಿಕೊಂಡ ಬಳಿಕ, ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಬಿಟಿಡಿಎ ವಿಭಾಗ-1 ಮತ್ತು 2ರಿಂದ ಸ್ವಚ್ಛತಾ ಸಪ್ತಾಹ ನಡೆಸಿದ್ದೇವೆ. ಇಡೀ ನವನಗರ ಒಂದು ವಾರದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲ್ಲ. ಹೀಗಾಗಿ ಒಟ್ಟು 20 ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ಏಕಕಾಲಕ್ಕೆ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.

-ಪ್ರಕಾಶ ತಪಶೆಟ್ಟಿ, ಅಧ್ಯಕ್ಷರು, ಬಿಟಿಡಿಎ, ಬಾಗಲಕೋಟೆ