ಸಾರಾಂಶ
ಹೊಸನಗರ ತಾಲೂಕಿನ ಕಸಬಾ ಹೋಬಳಿಯ ದೊಂಬೆಕೊಪ್ಪ ಗ್ರಾಮದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸಿದರು.
ಕನ್ನಡಪ್ರಭ ವಾರ್ತೆ ಹೊಸನಗರ
2021-22ರ ಅರಣ್ಯ ಪ್ರದೇಶ ಒತ್ತುವರಿ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ತಾಲೂಕಿನ ಕಸಬಾ ಹೋಬಳಿಗೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಶುಕ್ರವಾರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಸುಮಾರು 4 ಎಕರೆ ಅರಣ್ಯ ಪ್ರದೇಶದ ಒತ್ತುವರಿ ತೆರವುಗೊಳಿಸಿದ್ದಾರೆ.ತಾಲೂಕಿನ ಕಸಬಾ ಹೋಬಳಿ ಹರಿದ್ರಾವತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಂಬೆಕೊಪ್ಪ ಗ್ರಾಮದ ಸ.ನಂ.39, ಶುಂಠಿಕೊಪ್ಪ ಗ್ರಾಮದ ಸ.ನಂ.33ರ ಅಲಗೇರಿಮಂಡ್ರಿ ಮೀಸಲು ಅರಣ್ಯದಲ್ಲಿ ಎರಡು ಎಕರೆ ಹಾಗೂ ಹಿರೇಮೈಥಿ ಗ್ರಾಮದ ಸ.ನಂ.1ರ ಹರಿದ್ರಾವತಿ ರಾಜ್ಯ ಅರಣ್ಯ ಪ್ರದೇಶದ ಎರಡು ಎಕರೆ ಅರಣ್ಯ ಭೂ ಪ್ರದೇಶದ ಒತ್ತುವರಿ ತೆರವುಗೊಳಿಸಿ ಸಸಿ ನೆಟ್ಟ ಸಿಬ್ಬಂದಿ ಈ ಮೂಲಕ ಹಸಿರೀಕರಣ ಮಾಡಿದ್ದಾರೆ.
ಒಟ್ಟಾರೆ 4 ಎಕರೆ ಅರಣ್ಯ ಪ್ರದೇಶ ಒತ್ತುವರಿ ತೆರವುಗೊಳಿಸಲಾಗಿದೆ. ರಾಜ್ಯ ಸರ್ಕಾರ ಅರಣ್ಯ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸಲು ಸೂಚಿಸಿದ ಬೆನ್ನಲ್ಲೆ ತೆರವು ಕಾರ್ಯವನ್ನು ಇಲಾಖೆ ಚುರುಕುಗೊಳಿಸಿದೆ.ಈ ತೆರವು ಕಾರ್ಯವು ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹೊಸನಗರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ನಡೆದಿದೆ.