ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಹಲವು ವರ್ಷಗಳಿಂದ ರೋಗಗಳ ತಾಣವಾಗಿದ್ದ ನಾಲ್ಕನೇ ವಾರ್ಡಿನಲ್ಲಿರುವ ತ್ಯಾಜ್ಯದ ರಾಶಿಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ತೆರವುಗೊಳಿಸಲಾಯಿತು.ಸುಮಾರು ಎರಡು ಗುಂಟೆ ಖಾಲಿ ಜಾಗದಲ್ಲಿ ಬೃಹತ್ ಗುಡ್ಡೆ ಬೆಳೆದು ಹಾವು, ಕ್ರಿಮಿಕೀಟಗಳು ಮತ್ತು ಸೊಳ್ಳೆಗಳ ತಾಣವಾಗಿತ್ತು. ಅಕ್ಕಪಕ್ಕ ವಾಸದ ಮನೆಗಳಿದ್ದರಿಂದ ಆಗಾಗ ರೋಗರುಜಿನಗಳು ಎದುರಾಗುತ್ತಿತ್ತು. ಜಾಗವನ್ನು ಶುಚಿಗೊಳಿಸಲು ಮುಂದಾದ ಸಂದರ್ಭದಲ್ಲಿ ಮಾಲೀಕರು, ಜಾಗದ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಶುಚಿಗೊಳಿಸಲು ಅವಕಾಶ ಮಾಡುತ್ತಿರಲಿಲ್ಲ.ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ ಮೌಖಿಕ ಸೂಚನೆ ನೀಡಿದರೂ ಮಾಲೀಕರು ಅವಕಾಶ ಕೊಡುತ್ತಿರಲಿಲ್ಲ. ಇತ್ತೀಚೆಗೆ ನಾಲ್ಕನೇ ವಾರ್ಡಿನಲ್ಲಿ ಡೆಂಘೀ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಶುಚಿಗೊಳಿಸಬೇಕೆಂದು ಪತ್ರಿಕೆ ಮತ್ತು ಸ್ಥಳೀಯರು ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದರು.ಕೂಡಲೇ ಮನವಿಗೆ ಸ್ಪಂದಿಸಿ ಪ್ರಕರಣದ ಬಗ್ಗೆ ಎಚ್ಚೆತ್ತ ಅಧ್ಯಕ್ಷೆ ತಾಹಿರಾ ಬೇಗಂ ಮತ್ತು ಮುಖ್ಯಾಧಿಕಾರಿ ಸ್ಟೀಫನ್ ಪ್ರಕಾಶ್ ಮತ್ತು ಮೇಲ್ವಿಚಾರಕಿ ಸುಬ್ಬಮ್ಮರವರು ಸ್ಥಳದಲ್ಲಿ ಹಾಜರಿದ್ದು ಜೆಸಿಬಿ ಯಂತ್ರ ಬಳಸಿ ಕೊಳಚೆ ಗುಡ್ಡೆಯನ್ನು ಶುಚಿಗೊಳಿಸಿದರು. ಸ್ಥಳೀಯರು ಇವರ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.