ಕನ್ನಡಪ್ರಭ ವಾರ್ತೆ ಮಡಿಕೇರಿ
ಲೇಖಕ ಹೇಮಂತ್ ಪಾರೇರ ರಚಿಸಿರುವ ‘ಶಕುನದ ಹಕ್ಕಿ’ ಕಾದಂಬರಿ ನಗರದಲ್ಲಿ ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಕಾದಂಬರಿ ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, ಗ್ರಾಮೀಣ ಸೊಗಡನ್ನು ಪ್ರೀತಿಸುವ ಕಾದಂಬರಿಗಳು ಹೆಚ್ಚು ಹೆಚ್ಚು ಬರಬೇಕು ಎಂದರು.
ಹಿರಿಯ ಸಾಹಿತಿ ಭಾರದ್ವಾಜ ಕೆ. ಆನಂದ ತೀರ್ಥ ಅವರು ಮಾತನಾಡಿ, ಕಾದಂಬರಿಯನ್ನು ಓದುಗರ ವಿಮರ್ಶೆಗೆ ಬಿಡಬೇಕು. ಓದುಗರು ಅದನ್ನು ಯಾವ ಕೋನದಿಂದ ನೋಡುತ್ತಾರೆ ಎಂಬುವುದು ಮುಖ್ಯ ಎಂದರು.ಜಾನಪದ ಪರಿಷತ್ ನ ಮಡಿಕೇರಿ ತಾಲೂಕು ಅಧ್ಯಕ್ಷ ಹಾಗೂ ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಾಹಿತಿಗಳ ಹಾಗೂ ಬರಹಗಾರರ ಕೊರತೆ ಇದೆ ಎಂಬ ಆರೋಪಗಳಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯಾಸಕ್ತರ ಹಾಗೂ ಬರಹಗಾರರ ಸಂಖ್ಯೆ ಹೆಚ್ಚಾಗಿದೆ ಎಂದರು.
ಸಾಹಿತಿ ಸಂಗೀತ ರವಿರಾಜ್ ಮಾತನಾಡಿ, ಕಾದಂಬರಿ ಓದುಗರನ್ನು ಕೊನೆಯವರೆಗೂ ಸೆಳೆಯುತ್ತದೆ ಎಂದರು.
‘ಶಕುನದ ಹಕ್ಕಿ’ ರಚನೆಕಾರ ಹೇಮಂತ್ ಪಾರೇರ ಅವರು ಮಾತನಾಡಿ, ತಮ್ಮ ಕಣ್ಣ ಮುಂದೆಯೇ ಗ್ರಾಮೀಣ ಭಾಗದಲ್ಲಿ ನಡೆದ ಜೂಜಾಟದ ನೈಜ ಘಟನೆಯನ್ನು ವಸ್ತು ವಿಷಯನ್ನಾಗಿಸಿಕೊಂಡು ಈ ಕಾದಂಬರಿ ರಚನೆಯಾಗಿದೆ ಎಂದು ವಿವರಿಸಿದರು.
ಈ ಕಾದಂಬರಿಯನ್ನು ತಮ್ಮ ಸಾಹಿತ್ಯ ಗುರುಗಳಾದ ಬಿ.ಜಿ. ಅನಂತಶಯನ ಹಾಗೂ ಭಾರದ್ವಾಜ ಕೆ. ಆನಂದ ತೀರ್ಥ ಕಣಿವೆ ಅವರಿಗೆ ಅರ್ಪಿಸುವುದಾಗಿ ಹೇಳಿದರು.