ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹಣಕಾಸು ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ, ನಷ್ಟದ ಕುರಿತು 16ನೇ ಹಣಕಾಸು ಆಯೋಗದ ಎದುರು ಪ್ರಶ್ನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಎಂ.ಎಸ್.ರಾಮಯ್ಯ ಆನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ‘ವಿತ್ತೀಯ ಒಕ್ಕೂಟ: 16ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
15ನೇ ಹಣಕಾಸು ಆಯೋಗದ ಶಿಫಾರಸ್ಸುಗಳಿಂದಾಗಿ ಕರ್ನಾಟಕ ಭಾರಿ ನಷ್ಟವನ್ನು ಅನುಭವಿಸುತ್ತಿದೆ. ಕರ್ನಾಟಕಕ್ಕೆ 5 ವರ್ಷಗಳ ಅವಧಿಯಲ್ಲಿ 62,000 ಕೋಟಿ ನಷ್ಟ ಆಗಲಿದೆ. ರಾಜ್ಯವು ದೇಶಕ್ಕೆ ಸಂಗ್ರಹಿಸಿಕೊಡುವ ಪ್ರತಿ 100 ರುಪಾಯಿಗೆ 12.50 ರು. ಮಾತ್ರ ರಾಜ್ಯಕ್ಕೆ ಮರಳಿ ಬರುತ್ತಿದೆ.
ಕರ್ನಾಟಕದಿಂದ ವಾರ್ಷಿಕ ₹4 ಲಕ್ಷ ಕೋಟಿ ಆದಾಯ ಗಳಿಕೆಯಾದರೆ ಇದಕ್ಕೆ ಪ್ರತಿಯಾಗಿ ಕೇಂದ್ರದಿಂದ ನಮಗೆ ಬರುವುದು ಸುಮಾರು ₹50000 ಕೋಟಿ. ಈ ವಿಚಾರವನ್ನು 16ನೇ ಹಣಕಾಸು ಆಯೋಗದ ಎದುರು ಪ್ರಶ್ನಿಸಬೇಕಿದೆ.
14ನೇ ಹಣಕಾಸು ಆಯೋಗ ಮತ್ತು 15ನೇ ಹಣಕಾಸು ಆಯೋಗದ ನಡುವೆ ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆಯು ಶೇ.4.713ರಿಂದ ಶೇ.3.647 ಕ್ಕೆ ಇಳಿದಿದೆ.
ದೇಶದ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಗರಿಷ್ಠ ಪ್ರಮಾಣದ ಕಡಿತ (ಶೇ.1.066) ಮಾಡಲಾಗಿದೆ. ಈ ಕಾರಣದಿಂದ ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಿಂದ ಪಾವತಿಯಾಗುವ ತೆರಿಗೆ ಪೈಕಿ ಸಿಂಹಪಾಲು ಬೆಂಗಳೂರು ನಗರದ್ದಾಗಿದೆ. ರಾಜ್ಯದ ನಗರಗಳ ನಡುವೆ ನಾಗರಿಕರ ತಲಾದಾಯದಲ್ಲೂ ವ್ಯತ್ಯಾಸವಿದೆ.
ಬೆಂಗಳೂರು ತಲಾದಾಯ 6,21,131 ರು. ಇದ್ದರೆ, ಕಲಬುರಗಿಯ ತಲಾದಾಯ 1,24,998 ರು. ಇದೆ. ರಾಜ್ಯದೊಳಗೆ ಅಭಿವೃದ್ಧಿ ಮತ್ತು ತಲಾದಾಯದಲ್ಲಿ ವ್ಯತ್ಯಾಸವಿದೆ ಎನ್ನುವುದನ್ನು ಹಣಕಾಸು ಆಯೋಗ ಪರಿಗಣಿಬೇಕು.
ಬೆಂಗಳೂರು ಆಧಾರದ ಮೇಲೆ ರಾಜ್ಯದ ಆರ್ಥಿಕ ಸ್ಥಿತಿ ಎಂದು ಪರಿಗಣಿಸಿದರೆ ರಾಜ್ಯಕ್ಕೆ ಅತಿ ದೊಡ್ಡ ಅನ್ಯಾಯ ಮಾಡಿದಂತಾಗುತ್ತದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಹಣಕಾಸು ಆಯೋಗವು ತೆರಿಗೆ ಹಂಚಿಕೆ ಶಿಫಾರಸು ಮಾಡುವಾಗ ರಾಜ್ಯದೊಳಗಿನ ನಗರಗಳ ನಡುವಿನ ತಲಾದಾಯ, ಅಭಿವೃದ್ಧಿ ವಿಚಾರಗಳನ್ನು ಪರಿಗಣಿಸಬೇಕು.
ದೇಶಕ್ಕೆ ಗರಿಷ್ಠ ತೆರಿಗೆ ನೀಡುವ ರಾಜ್ಯಕ್ಕೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ. ವಿತ್ತೀಯ ಶಿಸ್ತು, ಕಾರ್ಯಕ್ಷಮತೆ, ಉತ್ತಮ ತೆರಿಗೆ ಸಂಗ್ರಹಿಸುವ ರಾಜ್ಯಗಳಿಗೆ ಅನುದಾನ ಹಂಚಿಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಆರ್ಥಿಕ ಹಾಗೂ ಮಾನವ ಸಂಪನ್ಮೂಲ, ಮೂಲಸೌಕರ್ಯಗಳ ಅಭಿವೃದ್ಧಿಗೆ ದೊಡ್ಡ ಹೂಡಿಕೆಯ ಅಗತ್ಯವಿದೆ. ಸ್ವಂತ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರದರ್ಶನವನ್ನು ಸಾಧಿಸಿದ್ದರೂ, 2032ರ ವೇಳೆಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಜಿಎಸ್ಡಿಪಿ ಸಾಧಿಸಲು ಸಂಪನ್ಮೂಲಗಳು ಸಾಕಾಗುತ್ತಿಲ್ಲ.
ರಾಜ್ಯದ ಆದಾಯದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ನಗರೀಕರಣ, ವಲಸೆ, ಬೆಂಗಳೂರಿನ ಮೂಲಸೌಕರ್ಯಅಭಿವೃದ್ಧಿ ಅತ್ಯವಶ್ಯವಾಗಿದೆ. ಸುಸ್ಥಿರ ಬೆಳವಣಿಗೆಗೆ ಸೂಕ್ತ ಸಹಕಾರವನ್ನು ಹಣಕಾಸು ಆಯೋಗದಿಂದ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದರು.
14ನೇ ಹಣಕಾಸು ಆಯೋಗದ ಸದಸ್ಯ ಡಾ.ಎಂ.ಗೋವಿಂದ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರದಿಂದ ಕರ್ನಾಟಕ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಪ್ರಶ್ನಿಸಲು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವ ಮಾತುಗಳು ಕೇಳಿ ಬಂದಿವೆ.
‘ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮಗೊಳಿಸುವಲ್ಲಿ ಕರ್ನಾಟಕವು ಸದಾ ಮಹತ್ವದ ಪಾತ್ರ ವಹಿಸಿದೆ. ಹಣಕಾಸು ಹಂಚಿಕೆಯ ಕುರಿತು ಕೇಂದ್ರದಿಂದ ಉತ್ತರ ಪಡೆದುಕೊಳ್ಳಲು ಮುಖ್ಯಮಂತ್ರಿಗಳ ಸಭೆ ಆಯೋಜಿಸಲಾಗುತ್ತಿದೆ ಎಂದು ಕೇಳಿದ್ದೇನೆ.
ಸಭೆ ನಡೆಸುವಂತೆ ನಾನೂ ಕೋರುತ್ತೇನೆ’ ಎಂದು 13ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ವಿಜಯ್ ಕೇಲ್ಕರ್ ಹೇಳಿದರು.