ಸೆ. 25ರಿಂದ 28ರ ವರೆಗೆ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ರೈತರ ಜಾತ್ರೆ ಎಂದೇ ಹೆಸರು ಪಡೆದಿರುವ ಕೃಷಿ ಮೇಳವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸಲಿದ್ದಾರೆ.
ಧಾರವಾಡ:
ಸೆ. 25ರಿಂದ 28ರ ವರೆಗೆ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿರುವ ರೈತರ ಜಾತ್ರೆ ಎಂದೇ ಹೆಸರು ಪಡೆದಿರುವ ಕೃಷಿ ಮೇಳವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸಲಿದ್ದಾರೆ ಎಂದು ಕೃಷಿ ವಿವಿ ಕುಲಪತಿ ಡಾ. ಎನ್.ಬಿ. ಪ್ರಕಾಶ ಹೇಳಿದರು.ಕೃಷಿ ಮೇಳದ ಯಶಸ್ವಿಗಾಗಿ ಬುಧವಾರ ವಿವಿಯಲ್ಲಿ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ಕೃಷಿಕ ಸಮಾಜ, ವಿವಿಧ ಇಲಾಖೆಯ ಅಧಿಕಾರಿಗಳು, ಪೋಲಿಸ್ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಿವಿಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಮುಖ್ಯಮಂತ್ರಿ ಮೇಳವನ್ನು ಉದ್ಘಾಟಿಸಲಿದ್ದು ಅಗತ್ಯ ಸಿದ್ಧತೆ ಕೈಗೊಳ್ಳಬೇಕಿದೆ ಎಂದರು.
ಕೃಷಿಮೇಳಕ್ಕೆ ನಾಲ್ಕು ದಿವಸಗಳ ವರೆಗೆ ಭೇಟಿ ನೀಡುವ ಲಕ್ಷಾಂತರ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ವ್ಯವಸ್ಥಿತವಾಗಿ ಪ್ರಾತ್ಯಕ್ಷಿಕೆ ಮತ್ತು ವಸ್ತು ಪ್ರದರ್ಶನ ತಾಣದ ಎಲ್ಲ ಮಳಿಗೆಗಳನ್ನು ವೀಕ್ಷಿಸಲು ಮಾರ್ಗ ನಕ್ಷೆ ರೂಪಿಸಲು ಹಾಗೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮಾಡಲು ಸಹಕಾರ ನೀಡುವುದಾಗಿ ಪೊಲೀಸ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಮೇಳದಲ್ಲಿ ಉಂಟಾಗುವ ಜನದಟ್ಟಣೆ ನಿಯಂತ್ರಿಸಲು ಸೂಕ್ತ ಸ್ಥಳಗಳನ್ನು ಗುರುತಿಸಿ ಬ್ಯಾರಿಕೇಡ್ ಅಳವಡಿಸುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ಪೊಲೀಸ್ ಅಧಿಕಾರಿಗಳು, ವಾಹನ ನಿಲುಗಡೆಗಾಗಿ ಈಗಾಗಲೇ ಇರುವ ನಾಲ್ಕು ಸ್ಥಳಗಳ ಜತೆಗೆ ಹೆಚ್ಚುವರಿಯಾಗಿ ನಿರ್ಮಾಣದ ಹಂತದಲ್ಲಿರುವ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.
ಮೇಳದ ಕೆಲಸಗಳನ್ನು ಸಮಪ೯ಕವಾಗಿ ನಿರ್ವಹಿಸಲು ಕೃವಿವಿ ಅಧಿಕಾರಿಗಳೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯ ಸಾಧಿಸಲು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಕೃಷಿಮೇಳದ ಅವಧಿಯಲ್ಲಿ ತಾತ್ಕಾಲಿಕ ಮೊಬೈಲ್ ಟಾವರ್ ಸ್ಥಾಪಿಸಲು ಸಲಹೆ ನೀಡಲಾಯಿತು.