ಸಾರಾಂಶ
- ಕುರುಬ ಸಮಾಜಗಳ ಪ್ರತಿಭಟನೆಯಲ್ಲಿ ಅಧ್ಯಕ್ಷ ನೆಲಹೊನ್ನೆ ಮೋಹನ್ ಕಿಡಿ । ಜಾತಿ ನಿಂದನೆಗೈದವರ ವಿರುದ್ಧ ಕ್ರಮಕ್ಕೆ ಆಗ್ರಹ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದನೆ, ಕುರುಬ ಸಮಾಜವನ್ನು ಅವಹೇಳನ ಮಾಡುವ ಮೂಲಕ ಜಾತಿನಿಂದನೆ ಮಾಡಿರುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದು ಹೊನ್ನಾಳಿ-ನ್ಯಾಮತಿ ತಾಲೂಕುಗಳ ಕುರುಬ ಸಮಾಜಗಳ ಅಧ್ಯಕ್ಷ ನೆಲಹೊನ್ನೆ ಮೋಹನ್ ಆಗ್ರಹಿಸಿದರು.ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬುಧವಾರ ಸಮಾಜಗಳ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯ ಬಸರಾಳು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿರುವುದು ಶಿಕ್ಷಾರ್ಹ ಅಪರಾಧ. ಬೆನ್ನಟ್ಟಿ ಗ್ರಾಮದ ಕುಮಾರ್, ಶ್ಯಾನಬೋಗನಹಳ್ಳಿ ಗ್ರಾಮದ ಮಹೇಶ್ ಎಂಬವರು ಕುರುಬ ಸಮುದಾಯದ ಬಗ್ಗೆ ಕೀಳುಮಟ್ಟದ ಶಬ್ಧಗಳನ್ನು ಬಳಸಿದ್ದಾರೆ. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವ್ಯಕ್ತಿಗಳನ್ನು ಮಂಡ್ಯ ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.ಕುರುಬ ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ ಮಾತನಾಡಿ, ಜಾತ್ಯತೀತ ರಾಷ್ಟ್ರದಲ್ಲಿ ಜಾತಿ ಹೆಸರಿಡಿದು ಬೈಯ್ಯುವುದು ಇನ್ನೂ ನಡೆಯುತ್ತಲೇ ಇದೆ. ಇದೂವರೆಗೂ ರಾಜ್ಯವನ್ನಾಳಿದ ಎಲ್ಲ ವರ್ಗದ ನಾಯಕರು ಮುಖ್ಯಮಂತ್ರಿಗಳಾದಾಗ ಅವರ ವಿರುದ್ಧ ನಮ್ಮ ಸಮುದಾಯ ಎಂದೂ ಜಾತಿ ನಿಂದನೆ ಮಾಡಿಲ್ಲ. ಆದರೆ ಈಗ ಕುರುಬ ಸಮಾಜದ ಮುಖ್ಯಮಂತ್ರಿಯನ್ನು ಜಾತಿ ಹೆಸರಿಡಿದು ನಿಂದಿಸಿರುವುದು ಅಕ್ಷಮ್ಯ ಅಪರಾಧ ಎಂದರು.
ಪ್ರತಿಭಟನೆ ವೇಳೆ ಮುಖಂಡರಾದ ಸರಳಿನಮನೆ ರಾಜು, ಹರಳಹಳ್ಳಿ ಶೇಖರಪ್ಪ, ನಿವೃತ್ತ ಶಿಕ್ಷಕ ಕೆ.ಜೀನಹಳ್ಳಿ ಮಾತನಾಡಿದರು. ಕಿಡಿಗೇಡಿಗಳ ಗಡಿಪಾರಿಗೆ ಆಗ್ರಹಿಸಿ ಗ್ರೇಡ್ -2 ತಹಸೀಲ್ದಾರ್ ಸುರೇಶ್ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.ಈ ಸಂದರ್ಭದಲ್ಲಿ ಕುರುಬ ಸಮಾಜ ಉಪಾಧ್ಯಕ್ಷರಾದ ಆರುಂಡಿ ಪ್ರಕಾಶ್, ಹರಳಹಳ್ಳಿ ಬೆನಕಪ್ಪ, ಎಚ್.ಡಿ. ವಿಜೇಂದ್ರಪ್ಪ, ಕುಂಬಳೂರು ವಾಗೀಶ್, ಕುಳಗಟ್ಟಿ ನಾಗರಾಜ್, ಮುಖಂಡರಾದ ಎಚ್.ಬಿ. ಅಣ್ಣಪ್ಪ, ಮಾಜಿ ಸೈನಿಕ ಎಂ.ವಾಸಪ್ಪ, ಮೂಲಿ ರೇವಣಸಿದ್ದಪ್ಪ, ಕರವೇ ಯುವಸೇನೆ ಅಧ್ಯಕ್ಷ ಕಲ್ಕೇರಿ ಮಂಜು ಸೇರಿದಂತೆ ನೂರಾರು ಸಮಾಜ ಬಾಂಧವರು ಭಾಗವಹಿಸಿದ್ದರು.
- - -(ಕೋಟ್) ಸಮಾಜಕ್ಕೆ ಸಮಬಾಳು, ಸಮಪಾಲು ತತ್ವ ಸಾರುತ್ತಿರುವ ಸಿದ್ಧರಾಮಯ್ಯ ಅವರನ್ನು ಜಾತಿ ಹೆಸರಿನಿಂದ ನಿಂದಿಸಿರುವವರನ್ನು ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿರುವ ಇಂತಹ ವ್ಯಕ್ತಿಗಳನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು.
- ಉಮಾಪತಿ, ರಾಜ್ಯ ಉಪಾಧ್ಯಕ್ಷ, ಕಾಂಗ್ರೆಸ್ ಹಿಂದುಳಿದ ವರ್ಗ- - -
-13ಎಚ್.ಎಲ್.ಐ1.ಜೆಪಿಜಿ:ಸಿಎಂ, ಕುರುಬ ಸಮಾಜಕ್ಕೆ ಅವಹೇಳನ ಖಂಡಿಸಿ ಹೊನ್ನಾಳಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.