ಗುರುವಾರ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದ 1,917.13 ಕೋಟಿ ರು. ಮೊತ್ತದ 940 ಕಾಮಗಾರಿಗಳಿಗೆ ಚಾಲನೆ ನೀಡಿದರು.

। ಕನ್ನಡಪ್ರಭ ವಾರ್ತೆ ಕಲಬುರಗಿ

ಗುರುವಾರ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ 79ನೇ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಸಂಬಂಧಿಸಿದ 1,917.13 ಕೋಟಿ ರು. ಮೊತ್ತದ 940 ಕಾಮಗಾರಿಗಳಿಗೆ ಚಾಲನೆ ನೀಡಿದರು.

ಇದರಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಯ 768.75 ಕೋಟಿ ರು. ಮೊತ್ತದ 687 ಕಾಮಗಾರಿಗಳು ಮತ್ತು ಇತರೆ ಇಲಾಖೆಯ 1,148.38 ಕೋಟಿ ರು. ಮೊತ್ತದ 253 ಕಾಮಗಾರಿಗಳು ಸೇರಿವೆ.

ಇನ್ನು ಜಿಲ್ಲಾವಾರು ಒಟ್ಟಾರೆ ಅಡಿಗಲ್ಲು ಮತ್ತು ಉದ್ಘಾಟನೆಗೊಂಡ ಕಾಮಗಾರಿಗಳ ಅಂಕಿ ಸಂಖ್ಯೆಯಲ್ಲಿ ಬೀದರ್‌ ಜಿಲ್ಲೆಯ 178.86 ಕೋಟಿ ರು. ಮೊತ್ತದ 74 ಕಾಮಗಾರಿಗಳು, ಕಲಬುರಗಿ ಜಿಲ್ಲೆಯ 1,105.63 ಕೋಟಿ ರು. ಮೊತ್ತದ 223 ಕಾಮಗಾರಿಗಳು, ಯಾದಗಿರಿ ಜಿಲ್ಲೆಯ 48.62 ಕೋಟಿ ರು. ಮೊತ್ತದ 72 ಕಾಮಗಾರಿಗಳು, ರಾಯಚೂರು ಜಿಲ್ಲೆಯ 184.21 ಕೋಟಿ ರು. ಮೊತ್ತದ 213 ಕಾಮಗಾರಿಗಳು, ಕೊಪ್ಪಳ ಜಿಲ್ಲೆಯ 258.03 ಕೋಟಿ ರು. ಮೊತ್ತದ 293 ಕಾಮಗಾರಿಗಳು, ಬಳ್ಳಾರಿ ಜಿಲ್ಲೆಯ 122.39 ಕೋಟಿ ರು. ಮೊತ್ತದ 42 ಕಾಮಗಾರಿಗಳು ಹಾಗೂ ವಿಜಯನಗರ ಜಿಲ್ಲೆಯ 19.36 ಕೋಟಿ ರು. ಮೊತ್ತದ 23 ಕಾಮಗಾರಿಗಳು ಒಳಗೊಂಡಿವೆ.

24 ನೂತನ ಬಸ್‌ಗಳಿಗೆ ಚಾಲನೆ: ಇದೇ ಸಂದರ್ಭದಲ್ಲಿ ಸಿಎಂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು 33.35 ಕೋಟಿ ವೆಚ್ಚದಲ್ಲಿ 20 ಹವಾ ನಿಯಂತ್ರಣ ರಹಿತ ಸ್ಲೀಪರ್ ಬಸ್, 20 ಎಸಿ ಸ್ಲೀಪರ್ ಹಾಗೂ 16 ಎಸಿ ಸೀಟರ್ ಸೇರಿದಂತೆ ಒಟ್ಟು 56 ಬಸ್ಸುಗಳ ಖರೀದಿ ಮಾಡುತ್ತಿದ್ದು, ಇದರ ಮೊದಲ ಭಾಗವಾಗಿ ಖರೀದಿಸಿದ ''''''''ಮಿನಿ ಕಲ್ಯಾಣ ರಥ'''''''', ''''''''ಅಮೋಘವರ್ಷ'''''''' ಹಾಗೂ ''''''''ಎಕ್ಸಿಕ್ಯೂಟಿವ್ ಚೇರ್ ಕಾರ್'''''''' ಹೆಸರಿನ 24 ನೂತನ ಬಸ್ಸುಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

ಈ ಬಸ್ಸುಗಳನ್ನು AIS-052, 119, AIS -153 ಮತ್ತು AIS -119 ಆಟೋಮೋಟಿವ್ ಮಾನದಂಡಗಳಂತೆ ತಯಾರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಸ್ವಯಂಚಾಲಿತ ಅಗ್ನಿನಂದಕ ಉಪಕರಣ, ವೆಹಿಕಲ್ ಟ್ರ‍್ಯಾಕಿಂಗ್, ಪ್ಯಾನಿಕ್ ಬಟನ್, ರಿವರ್ಸ್ ಪಾರ್ಕಿಂಗ್ ಅಲರಾಮ್ ಹಾಗೂ ಎಲ್.ಇ.ಡಿ ಬೋರ್ಡ್‌ಗಳನ್ನು ಅಳವಡಿಸಲಾಗಿದೆ.

ನಾನ್ ಎಸಿ ಸ್ಲೀಪರ್ ಬಸ್ 30, ಎಸಿ ಸ್ಲೀಪರ್ ಬಸ್ 36 ಹಾಗೂ ಎಸಿ ಸೀಟರ್ ಬಸ್ 40 ರಿಕ್ಲೈನಿಂಗ್ ಟೈಪ್ ಮಾದರಿಯ ಸೀಟ್‌ಗಳಿವೆ. ಸುಖಕರ ಪ್ರಯಾಣಕ್ಕೆ ಎಲ್ಲಾ ಮಾದರಿಯ ಬಸ್ಸುಗಳಿಗೆ ಆಲ್ ವೀಲ್ ಏರ್ ಸಸ್ಪೆನ್ಷನ್, ಭದ್ರತೆಗೆ 4 ಸಿಸಿ ಕ್ಯಾಮೆರಾಗಳು ಹಾಗೂ ಸೀಟ್‌ಗಳ ಬಳಿ ರೀಡಿಂಗ್ ಲ್ಯಾಂಪ್, ಮೊಬೈಲ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಆಕರ್ಷಕ ಸ್ಥಬ್ದಚಿತ್ರಗಳು: ಉತ್ಸವದ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ “ಅಕ್ಷರ ಆವಿಷ್ಕಾರ”, ಆರೋಗ್ಯ ಇಲಾಖೆಯಿಂದ “ಆರೋಗ್ಯ ಆವಿಷ್ಕಾರ”, ಸಮಾಜ ಕಲ್ಯಾಣ-ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಮಾದರಿ ವಸತಿ ಶಾಲೆಗಳ ಕುರಿತು, ಪಂಚಾಯತ್ ರಾಜ್ ಇಂಜಿನೀಯರಿಂಗ್ ಯೋಜನಾ ವಿಭಾಗದಿಂದ “ಕಲ್ಯಾಣ ಪಥ” ಮತ್ತು “ಪ್ರಗತಿ ಪಥ”, ಜೆಸ್ಕಾಂದಿಂದ “ಗೃಹ ಜ್ಯೋತಿ” ಹಾಗೂ ಕೆ.ಕೆ.ಆರ್.ಟಿ.ಸಿ. ನಿಗಮದಿಂದ “ಶಕ್ತಿ” ಮತ್ತು “ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್” ಯೋಜನೆಗಳ ಕುರಿತು ಬೆಳಕು ಚೆಲ್ಲುವ ಆಕರ್ಷಕ ಸ್ಥಬ್ದಚಿತ್ರಗಳ ಪ್ರದರ್ಶನ ಮತ್ತು ಪ್ರತಿ ಟ್ಯಾಬ್ಲೋ ಮುಂದೆ ಕಲಾ ತಂಡಗಳ ಕಲಾ ಪ್ರದರ್ಶನಗಳು ನೆರೆದ ಸಭಿಕರನ್ನು ರಂಜಿಸಿದವು.