ಕನ್ನಡಪ್ರಭ ವಾರ್ತೆ ಮೈಸೂರು
2004ರಲ್ಲಿ ಜೆಡಿಎಸ್ 58 ಸ್ಥಾನ ಪಡೆದಿತ್ತು. ಅದಕ್ಕಿಂತ ಒಂದು ಸ್ಥಾನ ಹೆಚ್ಚಾಗಿ ಪಡೆದು, 2028ಕ್ಕೆ ಎನ್ ಡಿಎ ಸರ್ಕಾರ ರಚನೆ ಮಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ಮೈಸೂರು ತಾಲೂಕು ವರುಣ ಕ್ಷೇತ್ರದ ಮೆಲ್ಲಹಳ್ಳಿಯಲ್ಲಿ ಬುಧವಾರ ನಡೆದ ಜನರೊಂದಿಗೆ ಜನತಾದಳ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸದನದ ಒಳಗಡೆ ಜೆಡಿಎಸ್ 17 ಸ್ಥಾನದಿಂದ ಸಿಂಗಲ್ ಡಿಜಿಟ್ ಗೆ ಬರುತ್ತೆ ಎಂದು ಅಪಹಾಸ್ಯ ಮಾಡಿದ್ದಾರೆ. ವರುಣದಲ್ಲೇ ಈ ಸವಾಲನ್ನು ಸ್ವೀಕರಿಸುತ್ತೇನೆ ಎಂದು ತಿರುಗೇಟು ನೀಡಿದರು.
ಅಹಿಂದ ನಾಯಕ ಅಂತ ಹೇಳುವವರು, ನಿಮ್ಮನ್ನು ಚಾಂಪಿಯನ್ ಮಾಡಿದ್ದು ಯಾರು ಅಂತ ಮರೆತಿದ್ದೀರಾ? ಇಂದು ದಾಖಲೆ ಬಜೆಟ್ ಮಂಡಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಸಮಾಜವಾದಿ ಅಂತ ಗುರುತಿಸಿಕೊಳ್ಳುವುದಕ್ಕೆ ಪಕ್ಷ ಯಾವುದು? ನಾಯಕರು ಯಾರು? ನಮ್ಮ ಪಕ್ಷದಿಂದ ರಾಜಕೀಯವಾಗಿ ಬೆಳೆದು, ಉಂಡು ತಿಂದು ಬೆಳೆದವರು ಮನೆಗೆ ದ್ರೋಹ ಮಾಡಿದ್ದಾರೆ. ಸದನದ ಒಳಗೆ ಜೆಡಿಎಸ್ 17 ಸ್ಥಾನದಿಂದ ಸಿಂಗಲ್ ಡಿಜಿಟ್ ಗೆ ಬರುತ್ತೆ ಎಂದು ಅಪಹಾಸ್ಯ ಮಾಡಿದರು ಎಂದು ಅವರು ಆರೋಪಿಸಿದರು.ಕಳೆದ ಎರಡು ದಶಕದಲ್ಲಿ 54 ಜನ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಅನುಭವಿಸಿ, ರಾಜಕೀಯ ಲಾಭಕ್ಕಾಗಿ ಪಕ್ಷ ಬಿಟ್ಟು ಹೋದರು. ಅಷ್ಟು ಜನ ಬಿಟ್ಟರೂ ಪಕ್ಷ ಇಷ್ಟು ಸದೃಢವಾಗಿದೆ ಎಂದರೆ ಅದು ನಿಮ್ಮಂಥ ನಿಷ್ಠಾವಂತ ಕಾರ್ಯಕರ್ತರಿಂದ ಎಂದು ಅವರು ಹೇಳಿದರು.
ದಲಿತರ ಹಣ ಗ್ಯಾರಂಟಿಗೆ ವರ್ಗಾವಣೆ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ ಎಸ್ ಸಿಪಿ/ ಟಿಎಸ್ ಪಿ ಅಡಿ ದಲಿತ ಅಭಿವೃದ್ಧಿಗೆ ನಿಗದಿಯಾಗಿದ್ದ 29764.10 ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅನುದಾನವನ್ನು 190 ಕೋಟಿಯಿಂದ 50 ಕೋಟಿಗೆ ಇಳಿಸಿ, 140 ಕೋಟಿ ಕಡಿತ ಮಾಡಿರುವುದು ದಲಿತರಿಗೆ ಮಾಡಿದ ದ್ರೋಹ ಎಂದು ಅವರು ದೂರಿದರು.
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 2416 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಮಾತ್ರ ಕಳೆದ 2 ವರ್ಷಗಳಲ್ಲಿ 138 ರೈತರು ಬಲಿಯಾಗಿದ್ದಾರೆ. 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ಮೀರಲಿದೆ ಎಂದು ಅವರು ಆರೋಪಿಸಿದರು.ಶಾಸಕರಾದ ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ, ಮಾಜಿ ಸಚಿವ ಸಾ.ರಾ. ಮಹೇಶ್, ಮಾಜಿ ಶಾಸಕ ಕೆ. ಮಹದೇವ್, ಮುಖಂಡರಾದ ಕೃಷ್ಣ ನಾಯಕ್, ಅಭಿಷೇಕ್, ಸುಬ್ಬಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಅಶ್ವಿನ್ ಕುಮಾರ್, ನಗರಾಧ್ಯಕ್ಷ ಎಸ್.ಬಿ.ಎಂ. ಮಂಜು, ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಮೊದಲಾದವರು ಇದ್ದರು.
----ಕೋಟ್...
ಎಚ್.ಡಿ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ 25000 ಕೋಟಿ ಸಾಲ ಮನ್ನಾ ಮಾಡಿ 25 ಲಕ್ಷ ರೈತ ಕುಟುಂಬಗಳಿಗೆ ನೆರವಾದರು. ನಾವು ಜನರ ಪರವಾಗಿ ಹೋರಾಟ ಮುಂದುವರಿಸುತ್ತೇವೆ. 2028ಕ್ಕೆ ಕರ್ನಾಟಕದಲ್ಲಿ ಜನಪರ ಎನ್ ಡಿಎ ಸರ್ಕಾರ ಬರುವುದು ಖಚಿತ.- ನಿಖಿಲ್ ಕುಮಾರಸ್ವಾಮಿ, ರಾಜ್ಯಾಧ್ಯಕ್ಷರು, ಜೆಡಿಎಸ್ ಯುವ ಘಟಕ
----ಸಿದ್ದರಾಮಯ್ಯರವರು ಮಾತೆತ್ತಿದ್ದರೆ ಜೆಡಿಎಸ್ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ ಎನ್ನುತ್ತಾರೆ, ನೀವು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೀರಾ, ನಿಮ್ಮ ಮಗನನ್ನು ಶಾಸಕನನ್ನಾಗಿ ಮಾಡಿ ನಂತರ ಎಂಎಲ್ಸಿ ಮಾಡಿದ್ದೀರಾ, ನಿಮ್ಮದು ಅಪ್ಪ ಮಕ್ಕಳ ಪಕ್ಷ ಅಲ್ಲವೇ?
- ಸಾ.ರಾ. ಮಹೇಶ್, ಮಾಜಿ ಸಚಿವರು----
ಸಿದ್ದರಾಮಯ್ಯ ಅವರು ಹೋದಲ್ಲಿ ಬಂದಲ್ಲಿ ಜೆಡಿಎಸ್ ಪಕ್ಷ ಎಲ್ಲಿದೆ ಮುಂಬರುವ ಚುನಾವಣೆಯಲ್ಲಿ 2- 3 ಸೀಟ್ ಪಡೆಯಬಹುದು ಎಂದು ಲೇವಡಿ ಮಾಡುತ್ತಿದ್ದರು. ಈಗ ಅವರಿಗೆ ವರುಣ ಕ್ಷೇತ್ರದ ಜನತೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ರಾಜ್ಯದ ರೈತರು ಹಾಗೂ ಜನರ ಸೇವೆ ಸಲ್ಲಿಸಲಿದ್ದಾರೆ.- ಜಿ.ಡಿ. ಹರೀಶ್ ಗೌಡ, ಶಾಸಕರು