ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಳಮೀಸಲು ಜಾರಿಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಚ್.ಮೋಹನ್ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾದ ಡಾ.ಬಾಬು ಜಗಜೀವನರಾಂರವರ 119ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ಬಾಬು ಜಗಜೀವನರಾಮ್ ಅವರನ್ನು ಅಗೌರವದಿಂದ ನಡೆಸಿಕೊಂಡ ಕಾಂಗ್ರೆಸ್ಗೆ ಜಯಂತಿ ಆಚರಿಸುವ ನೈತಿಕತೆಯಿಲ್ಲ. ಕಾಂಗ್ರೆಸ್ ನಾಯಕರ ವರ್ತನೆಯಿಂದ ಬೇಸತ್ತು 1977 ಫೆ.2 ರಂದು ಪಕ್ಷದಿಂದ ಹೊರ ಬಂದ ಡಾ.ಬಾಬುಜಗಜೀವನರಾಮ್ ಅವರು ಬಾಲ್ಯದಲ್ಲಿಯೇ ಶೋಷಣೆ, ಅಸ್ಪೃಶ್ಯತೆ ನೋವುಂಡವರು. ರೈತರ ಕಷ್ಟಗಳನ್ನು ಕಣ್ಣಾರೆ ಕಂಡು ಕೃಷಿಗೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಹಸಿರು ಕ್ರಾಂತಿಯ ಹರಿಕಾರರಾದರೆಂದರು.
ಬಿಹಾರದಲ್ಲಿ ಕಾರ್ಮಿಕ ಸಂಘಟನೆ ಕಟ್ಟಿದ ಡಾ.ಬಾಬು ಜಗಜೀವನರಾಂರವರು 32ನೇ ವಯಸ್ಸಿಗೆ ದೊಡ್ಡ ನಾಯಕನಾಗಿ ಬೆಳೆದರು. 1936ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, 1971ರಲ್ಲಿ ಪಾಕಿಸ್ತಾನ ಭಾರತದ ಮೇಲೆ ಯುದ್ದಕ್ಕೆ ಬಂದಾಗ ಸಮರ್ಥವಾಗಿ ನಿಭಾಯಿಸಿ ದೇಶಕ್ಕೆ ಜಯ ತಂದು ಕೊಟ್ಟ ಕೀರ್ತಿ ಅವರಿಗೆ ಸಲ್ಲಬೇಕು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ನಾಟಕೀಯವಾಗಿ ಜಯಂತಿಯನ್ನು ಆಚರಿಸುತ್ತಿರುವುದು ಯಾವ ಪುರುಷಾರ್ಥಕ್ಕೆ? ಮೊದಲು ಒಳ ಮೀಸಲಾತಿಯಲ್ಲಿನ ಗೊಂದಲಗಳನ್ನು ಸರಿಪಡಿಸಲಿ ಎಂದು ಜಿ.ಎಚ್.ಮೋಹನ್ಕುಮಾರ್ ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಂ, ಪ್ರಭಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ಎಸ್ಸಿ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ತಿಪ್ಪೇಸ್ವಾಮಿ, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಧನಂಜಯ, ಸುರೇಶ್, ನಾಗರಾಜ್, ನವೀನ್, ಪ್ರದೀಪ್, ಕಲ್ಲೇಶ್, ಬಸಣ್ಣ, ಹನುಮಂತ, ಪ್ರಸನ್ನ, ವಿರುಪಾಕ್ಷ, ಕೆಂಚಪ್ಪ, ದುರುಗೇಶ್, ಕೆ.ಶಿವಣ್ಣಾಚಾರ್, ರಾಜಣ್ಣ, ಆರ್.ಶೋಭರಾಜ್ ಪಾಲ್ಗೊಂಡಿದ್ದರು.