ಕನ್ನಡಪ್ರಭವಾರ್ತೆ ಚಳ್ಳಕೆರೆ
ಭಾರತದ ರಾಜಕಾರಣದಲ್ಲಿ ಡಾ.ಬಾಬು ಜಗಜೀವನರಾಂ ಅವರದು ಪ್ರಾತಃ ಸ್ಮರಣೀಯವಾದ ವ್ಯಕ್ತಿತ್ವ ಎಂದು ಶಾಸಕ ಹಾಗೂ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ. ರಘುಮೂರ್ತಿ ಹೇಳಿದರು.ನಗರದ ಬಾಬು ಜಗಜೀವನರಾಂ ವೃತ್ತದಲ್ಲಿ ಭಾನುವಾರ ಬಾಬೂಜಿ ಜಯಂತಿ ಅಂಗವಾಗಿ ತಾಲೂಕು ಆಡಳಿತ ಆಯೋಜಿಸಿದ್ದ ಪುಷ್ಪ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಸಿರು ಕ್ರಾಂತಿಯ ಹರಿಕಾರರಾಗಿ ಈ ದೇಶದ ಉಪ ಪ್ರಧಾನಿಗಳಾದ ಬಾಬು ಜಗಜೀವನರಾಮ್ ಅವರು ಈ ದೇಶದ ರಕ್ಷಣಾ ಮಂತ್ರಿ ಆಗಿದ್ದವರು. ರಾಜಕೀಯ ಚತುರತೆ ಮತ್ತು ಆಗಾಧವಾದ ಬುದ್ಧಿಶಕ್ತಿ ಅವರನ್ನು ಅತ್ಯಂತ ಎತ್ತರಕ್ಕೆ ಒಯ್ಯಲು ಸಾಧ್ಯವಾಯಿತು ಎಂದರು.
ಸ್ವಾತಂತ್ರ್ಯ ಬಂದ ನಂತರದ ಕಾಲಘಟ್ಟದಲ್ಲಿ ರಾಜಕೀಯ ಮುಂಚೂಣಿಯಲ್ಲಿ ಕಾಣಿಸಿಕೊಂಡು ದೇಶವನ್ನೇ ಮುನ್ನೆಡೆಸುವ ಗುರುತರ ಖಾತೆಗಳನ್ನು ನಿಭಾಯಿಸಿದ್ದಾರೆ. ಇಂತಹ ಶಿಸ್ತುಬದ್ಧ ರಾಜಕಾರಣಿ ಇಡೀ ದೇಶದ ಯುವಜನತೆಗೆ ಮಾದರಿಯಾಗಬೇಕು ಎಂದರು.ತಹಸೀಲ್ದಾರ್ ರೇಹಾನ ಪಾಷಾ, ನಗರಸಭೆ ಆಯುಕ್ತೆ ಡಾ.ನಾಗವೇಣಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇವ್ಲಾನಾಯಕ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ದಲಿತ ಸಂಘಟನೆಗಳು ಮುಖಂಡರುಗಳು, ಹೋರಾಟಗಾರರು ಇದ್ದರು.