ಕನ್ನಡಪ್ರಭ ವಾರ್ತೆ ತಿಪಟೂರು

ನಗರದಲ್ಲಿ ಹಿಂದೆಂದಿಗಿಂತಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಶೀಘ್ರವಾಗಿ ಪರಿಹರಿಸದಿದ್ದರೆ ನಗರದ ಜನತೆಯ ಪರವಾಗಿ ನಗರಸಭೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನೀರಿನ ಸಮಸ್ಯೆ ಎದುರಾಗಬಹುದು ಎಂದು ಈ ಹಿಂದೆಯೇ ಹಲವಾರು ಬಾರಿ ಎಚ್ಚರಿಸಿದ್ದೆ. ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜವಾಬ್ದಾರಿ ತೆಗೆದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಸಮಸ್ಯೆ ಪರಿಹಾರಕ್ಕಾಗಿ ತಾಲೂಕು ಆಡಳಿತವಾಗಲೀ ಅಥವಾ ಶಾಸಕರಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ. ತಿಪಟೂರು ಅಮಾನಿಕೆರೆ ಮತ್ತು ಈಚನೂರು ಕೆರೆಗೆ ನೀರು ಹರಿಸಿಕೊಳ್ಳದ ಪರಿಣಾಮ ಈಗ ನಗರದ ಜನತೆ ಕುಡಿಯುವ ನೀರಿನ ಕೊರತೆ ಎದುರಿಸಬೇಕಾಗಿದೆ. ಈ ಸಮಸ್ಯೆ ಕುರಿತು ಜೆಡಿಎಸ್ ಪಕ್ಷವು ಹಿಂದೆಯೇ ನಗರಸಭೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ನಗರದಲ್ಲಿ ಸಾಕಷ್ಟು ಹೊಸ ಬೋರ್‌ವೆಲ್‌ಗಳನ್ನು ಕೊರೆಸಿದ್ದೇವೆ ಎಂದು ನಗರಸಭೆ ಆಯುಕ್ತರು ತಿಳಿಸಿದ್ದಾರೆ. ಆದರೂ ನೀರಿನ ಸಮಸ್ಯೆ ಏಕೆ ಪರಿಹಾರವಾಗಿಲ್ಲ ಎಂದು ಕೇಳಿದರು.

ಅಮಾನಿಕೆರೆ ಏರಿಯ ದುರಸ್ಥಿ ಕಾಮಗಾರಿ ತುಂಬಾ ನಿಧಾನಗತಿಯಲ್ಲಿ ನಡೆಯುತ್ತಿದ್ದು ಕೇವಲ ಒಂದು ಜೆಸಿಬಿ ಯಂತ್ರದ ಮೂಲಕ ಕೆಲಸ ಸಾಗುತ್ತಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿಯೂ ಕೆರೆಗೆ ಸಮರ್ಪಕವಾಗಿ ನೀರು ತುಂಬಿಸಿಕೊಳ್ಳುವ ಸಾಧ್ಯತೆ ಕಡಿಮೆ. ಶಾಸಕರು ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಲು ಆಗುವುದಿಲ್ಲ ಎಂದು ತಿಳಿಸಿದರೆ ಮಾರನೆಯ ದಿನವೇ ತಮ್ಮ ವತಿಯಿಂದ ೨೫ ಟ್ಯಾಂಕರ್‌ಗಳ ಮೂಲಕ ಪ್ರತಿದಿನ ನಗರದ ಜನತೆಗೆ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡುವುದಾಗಿ ಶಾಂತಕುಮಾರ್ ಹೇಳಿದರು.

ನಗರಕ್ಕೆ ೨೪ ಗಂಟೆ ಕುಡಿಯುವ ನೀರಿನ ಶಾಶ್ವತ ಯೋಜನೆ ಘೋಷಿಸಲಾಗಿದ್ದರೂ, ಅದಕ್ಕಾಗಿ ಹಾಕಿದ ಸುಮಾರು ರೂ.೭೨ ಕೋಟಿ ಮೌಲ್ಯದ ಪೈಪ್‌ಗಳು ತುಕ್ಕು ಹಿಡಿಯುತ್ತಿವೆ. ಇದರಿಂದ ಸರಕಾರದ ಹಣ ವ್ಯರ್ಥವಾಗುತ್ತಿದೆ. ಇದಲ್ಲದೆ, ಯುಜಿಡಿ ಮತ್ತು ಸ್ವಚ್ಛತೆ ಸಂಬಂಧಿತ ಸಮಸ್ಯೆಗಳೂ ಹೆಚ್ಚುತ್ತಿದ್ದು, ಅವುಗಳನ್ನು ತಕ್ಷಣ ಪರಿಹರಿಸುವಂತೆ ಶಾಸಕರು ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದರು.


ತಿಪಟೂರು ಹಾಲ್ಕುರಿಕೆ ಮಾರ್ಗದ ರಸ್ತೆಯಲ್ಲಿ ಗೋವಿನಪುರ ಬಳಿ ರಸ್ತೆಯಲ್ಲಿ ದೊಡ್ಡ ಗುಂಡಿಗಳಾಗಿದ್ದು ಸಾರ್ವಜನಿಕರ ಓಡಾಟಕ್ಕೆ ಬಹಳ ತೊಂದರೆ ಉಂಟುಮಾಡುತ್ತಿವೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಹಲವಾರು ತಿಂಗಳುಗಳೇ ಕಳೆದಿದ್ದರೂ ಇನ್ನೂ ಕೆಲಸ ಪ್ರಾರಂಭವಾಗದೇ ವಿಳಂಬವಾಗುತ್ತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆಯನ್ನು ಶೀಘ್ರವಾಗಿ ಸರಿಪಡಿಸಲು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಶಿವಸ್ವಾಮಿ, ನಗರಾಧ್ಯಕ್ಷ ರಾಜು ಕಂಚಾಘಟ್ಟ, ತಾಲೂಕು ಕಾರ್ಯದರ್ಶಿ ನಟರಾಜು ಗುರುಗದಹಳ್ಳಿ, ಮುಖಂಡರಾದ ಸುದರ್ಶನ್, ನಟರಾಜು, ಸಂತೋಷ್ ಇನ್ನಿತರರು ಉಪಸ್ಥಿತರಿದ್ದರು.