ವೇದಿಕೆ ಏರಲ್ಲವೆಂದು ಸಿಎಂ ಏಕಪಾತ್ರಾಭಿನಯ: ಬಿಜೆಪಿ

| Published : Jun 17 2025, 11:54 PM IST / Updated: Jun 17 2025, 11:55 PM IST

ವೇದಿಕೆ ಏರಲ್ಲವೆಂದು ಸಿಎಂ ಏಕಪಾತ್ರಾಭಿನಯ: ಬಿಜೆಪಿ
Share this Article
  • FB
  • TW
  • Linkdin
  • Email

ಸಾರಾಂಶ

ತಮ್ಮ ಒಂದೇ ಒಂದು ಮಾತು ಸುಳ್ಳಾದರೂ ಸಾರ್ವಜನಿಕ ವೇದಿಕೆಯನ್ನೇರಲ್ಲ, ಭಾಷಣ ಮಾಡಲ್ಲವೆಂದು ಎದೆ ತಟ್ಟಿಕೊಂಡು ಏಕಪಾತ್ರಾಭಿನಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಸಾರ್ವಜನಿಕ ವೇದಿಕೆ ಏರುವುದು, ಸುಳ್ಳು ಭಾಷಣ, ಆರೋಪ ನಿಲ್ಲಿಸಿ, ಹೇಳಿದ ಮಾತಿನಂತೆ ನಡೆಯಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಒತ್ತಾಯಿಸಿದ್ದಾರೆ.

- ರಾಜ್ಯ ಸರ್ಕಾರದ ಸಾಧನೆ, ಅನುದಾನ, ಅಭಿವೃದ್ಧಿ ಬಗ್ಗೆ ಶ್ವೇತಪತ್ರ ಹೊರಡಿಸಿ: ಜಿಲ್ಲಾಧ್ಯಕ್ಷ ರಾಜಶೇಖರ ಒತ್ತಾಯ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಮ್ಮ ಒಂದೇ ಒಂದು ಮಾತು ಸುಳ್ಳಾದರೂ ಸಾರ್ವಜನಿಕ ವೇದಿಕೆಯನ್ನೇರಲ್ಲ, ಭಾಷಣ ಮಾಡಲ್ಲವೆಂದು ಎದೆ ತಟ್ಟಿಕೊಂಡು ಏಕಪಾತ್ರಾಭಿನಯ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಸಾರ್ವಜನಿಕ ವೇದಿಕೆ ಏರುವುದು, ಸುಳ್ಳು ಭಾಷಣ, ಆರೋಪ ನಿಲ್ಲಿಸಿ, ಹೇಳಿದ ಮಾತಿನಂತೆ ನಡೆಯಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ನೀರಾವರಿ ಯೋಜನೆಗಳಿಗೆ ₹2 ಲಕ್ಷ ಕೋಟಿ ಮೀಸಲಿಡುವುದಾಗಿ ಹೇಳಿದ್ದರು. ಅನುದಾನ ಎಲ್ಲಿ ಮೀಸಲಿಟ್ಟಿದ್ದಾರೆ? ಕಾಂಗ್ರೆಸ್ ಸರ್ಕಾರದ ಸಾಧನೆ, ಬಿಡುಗಡೆ ಮಾಡಿರುವ ಅನುದಾನ, ಜಾರಿಗೊಳಿಸಿದ ಯೋಜನೆಗಳ ಕುರಿತಂತೆ ಶ್ವೇತಪತ್ರ ಹೊರಡಿಸಲಿ ಎಂದರು.

ಗೃಹಲಕ್ಷ್ಮಿ ಹಣವನ್ನು ಚುನಾವಣೆಯಲ್ಲಿ ಮತದಾರರಿಗೆ ಹಂಚುವಂತೆ ಚುನಾವಣೆಗೆ ಮುಂಚೆ ಬಿಡುಗಡೆ ಮಾಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಗೃಹಜ್ಯೋತಿ ಜಾರಿಗೊಳಿಸಿ, ವಿದ್ಯುತ್ ದರ ಎಷ್ಟು ಹೆಚ್ಚಿಸಿದ್ದೀರಿ? ಶಕ್ತಿ ಯೋಜನೆ ಮಾಡಿ, ಬಸ್‌ ಪ್ರಯಾಣ ದರ ಎಷ್ಟು ಹೆಚ್ಚಿಸಿದ್ದೀರಿ? ಯುವನಿಧಿಯಡಿ ಎಷ್ಟು ನಿರುದ್ಯೋಗಿಗಳಿಗೆ ಭತ್ಯೆ ನೀಡಿದ್ದೀರಿ? ಗ್ಯಾರಂಟಿ ಹೆಸರಿನಲ್ಲಿ ದಲಿತರಿಗೆ ಮೀಸಲಿಟ್ಟ ₹25 ಸಾವಿರ ಕೋಟಿಗೂ ಅಧಿಕ ಹಣ ಲೂಟಿ ಮಾಡಿದ್ದೀರಲ್ಲ, ಇದು ದಲಿತರಿಗೆ ನೀವು ಮಾಡಿದ ಮೋಸ ಅಲ್ಲವೇ ಎಂದು ಪ್ರಶ್ನಿಸಿದರು.

ವಾಲ್ಮೀಕಿ ನಿಗಮದಲ್ಲಿ ಹಣ ಲೂಟಿ ಮಾಡಿದ್ದನ್ನು ಸದನದಲ್ಲೇ ಒಪ್ಪಿಕೊಂಡವರು ಸಿದ್ದರಾಮಯ್ಯ. ಸಿದ್ದರಾಮಯ್ಯ ಅವರಿಗೆ ನೈತಿಕತೆ, ನಾಚಿಕೆ, ಮಾನ ಮರ್ಯಾದೆ ಯಾವುದೂ ಇಲ್ಲವೇ? ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಹಲ್ಲೆ, ಸಮಾಜದಲ್ಲಿ ಕೊಲೆ, ಸುಲಿಗೆ, ದರೋಡೆ, ಬ್ಯಾಂಕ್ ದರೋಡೆ, ಕರಾವಳಿ ಜಿಲ್ಲೆಯಲ್ಲಿ ಹತ್ಯೆಗಳು ನಡೆಯುತ್ತಿವೆ. ಅಲ್ಪಸಂಖ್ಯಾತ ಗೂಂಡಾಗಳು ಸರ್ಕಾರಕ್ಕೆ ಧಮಕಿ ಹಾಕುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳಾಗಿದ್ದರೂ ಅಧಿಕಾರಕ್ಕೆ ಅಂಟಿಕೊಂಡಿರುವ ನಿಮಗೆ ನಾಚಿಕೆಯಾಗಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಡಿ.ಎಲ್.ಶಿವಪ್ರಕಾಶ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಪಿ.ವಿಶ್ವಾಸ ಇತರರು ಇದ್ದರು.

- - -

(ಕೋಟ್‌) ಸಮೀಕ್ಷೆಯೊಂದು ಈಗ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ಕೇವಲ 60-70 ಕ್ಷೇತ್ರ ಗೆದ್ದರೆ ಹೆಚ್ಚೆಂದಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸಿಎಂ ಆದ ನಿಮ್ಮನ್ನೂ ಸೇರಿದಂತೆ ಕ್ಯಾಬಿನೆಟ್‌ ಸಚಿವರು ಸೋತಿದ್ದರು. ಮೋದಿ, ಯಡಿಯೂರಪ್ಪ, ವಿಜಯೇಂದ್ರ, ಅಶೋಕ ಸೇರಿದಂತೆ ಬಿಜೆಪಿ ನಾಯಕರು, ನಮ್ಮ ಪಕ್ಷದ ಬಗ್ಗೆ ಮಾತನಾಡುವಾಗ ಹಲ್ಲು ಬಿಗಿ ಹಿಡಿದು ಮಾತನಾಡಿ.

- ಎನ್.ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ, ಬಿಜೆಪಿ

- - -

-17ಕೆಡಿವಿಜಿ1, 2.ಜೆಪಿಜಿ:

ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.