ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಕ್ಷೇತ್ರಕ್ಕೆ ಜೂ 28 ರಂದು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ತಾಲೂಕಿನಲ್ಲಿ 800 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಿಳಿಸಿದರು.ತಾಲೂಕಿನ ದೊಡ್ಡೇರಿ ಹೋಬಳಿ ರಂಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ, 3 ಕೋಟಿ ರು.ವೆಚ್ಚದ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ, ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಬಡವನಹಳ್ಳಿ ಮತ್ತು ಮಧುಗಿರಿ ಕಸಬಾ ವ್ಯಾಪ್ತಿಯ ಮರುವೇಕೆರೆ ಗ್ರಾಮಗಳಲ್ಲಿ ತಲಾ 50 ಲಕ್ಷ ರು.ನಂತೆ 1 ಕೋಟಿ ರು.ವೆಚ್ಚದ ಪಶು ಆಸ್ಪತ್ರೆ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಮಧುಗಿರಿ ಕ್ಷೇತ್ರವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಒಂದು ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇದಕ್ಕೆ ಪೂರಕವಾಗಿ ಅಧಿಕಾರಿಗಳು ಸಹ ಸಕಾರತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರದ ಎಲ್ಲ ಯೋಜನೆಗಳ ಅನುಷ್ಠಾನಕ್ಕಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.ಮರುವೇಕೆರೆಯಲ್ಲಿ ಸುಮಾರು 50 ಲಕ್ಷ ರು.ವೆಚ್ಚದಲ್ಲಿ ಪಶು ಆಸ್ಪತ್ರೆ ಕಟ್ಟಡ ಕಟ್ಟಲು ಗ್ರಾಮದ ದಾನಿಗಳಾದ ನಾಗರಾಜಶಟ್ಟಿ,ಹಾಗೂ ನಾರಾಯಣಶಟ್ಟಿ 10 ಗುಂಟೆ ಜಾಗ ನೀಡಿದ ಪರಿಣಾಮ ಇಂದು ಪಶು ಆಸ್ಪತ್ರೆ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಸಾಕಷ್ಟು ವ್ಯಕ್ತಿಗಳಿಗೆ ಈ ಇಬ್ಬರು ದಾನಿಗಳು ಸಾಮಾಜಿಕ ಕಳಕಳಿ ಹೊಂದಿದ್ದು, ಇವರ ಸೇವೆ ಇತರರಿಗೆ ಪಾಠವಾಗಬೇಕು ಎಂದರು.
ಪ್ರಸ್ತುತ ತಾಲೂಕಿನಲ್ಲಿ 3 ಪಶು ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.1 ಲಕ್ಷ ಮೇವಿನ ಬೀಜದ ಕಿಟ್ ವಿತರಿಸಿದ್ದು, ಜಾನುವಾರುಗಳಿಗೆ ಅಗತ್ಯ ಔಷದೋಪಾಚಾರಗಳು ಕೂಡ ಲಭ್ಯವಿದೆ. ಜೂ.28ರಂದು ಮಧುಗಿರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದು, ರಸ್ತೆ, ಚರಂಡಿ, ಕಟ್ಟಡ, ರಂಗಾಪುರದಿಂದ -ಗೊಲ್ಲರಹಟ್ಟಿಗೆ ಡಾಂಬರೀಕರಣ, ಶಿರಾದಿಂದ -ಭೈರೇನಹಳ್ಳಿ ಮಾರ್ಗದಲ್ಲಿ 6 ಪಥದ ನ್ಯಾಷನಲ್ ಹೈವೆ ಸೇರಿದಂತೆ ಗ್ರಾಮೀಣರಿಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ವಿವಿಧ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವರು.ಪಶು ಇಲಾಖೆ ಜಿಲ್ಲಾ ನಿರ್ದೇಶಕ ಡಾ.ಗಿರೀಶ್ ಬಾಬು ರೆಡ್ಡಿ ಮಾತನಾಡಿ, ಜಿಲ್ಲೆಗೆ 11 ಪಶು ಆಸ್ಪತ್ರೆ ಕಟ್ಟಡಗಳು ಮಂಜೂರಾಗಿದ್ದು, ಮಧುಗಿರಿ ತಾಲೂಕಿಗೆ ಬಡವನಹಳ್ಳಿ ಮತ್ತು ಮರುವೇಕೆರೆಗೆ 2 ಕಟ್ಟಡ ನಿರ್ಮಿಸುತ್ತಿದ್ದು, ರೈತರ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗಲಿದೆ ಎಂದರು.
ಪಶು ಆಸ್ಪತ್ರೆ ಕಟ್ಟಡಕ್ಕೆ 10 ಗುಂಟೆ ಜಮೀನು ದಾನ ಮಾಡಿದ ನಾಗರಾಜಶಟ್ಟಿ-ನಾರಾಯಣಶಟ್ಟಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಎಸಿ ಗೋಟೂರು ಶಿವಪ್ಪ,ತಹಸೀಲ್ದಾರ್ ಶಿರಿನ್ತಾಜ್, ಬಿಇಓ ಕೆ.ಎನ್.ಹನುಮಂತರಾಯಪ್ಪ, ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ಬಾಬು, ಜಿಪಂ ಮಾಜಿ ಸದಸ್ಯ ಬಿ.ವಿ.ನಾಗರಾಜಪ್ಪ, ಇಓ ಲಕ್ಷ್ಮಣ್, ಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ,ಗೋಪಾಲಯ್ಯ, ಎಂ.ಎಸ್.ಮಲ್ಲಿಕಾರ್ಜುನಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ ಸಿದ್ದನಗೌಡ, ಗ್ರಾಪಂ ಅಧ್ಯಕ್ಷ ನಾಗಭೂಷಣ್,ಪಿಡಿಓ ರವಿಚಂದ್ರ,ಬಡವನಹಳ್ಳಿ ನಯಾಜ್ ಹಾಗೂ ಬಡವನಹಳ್ಲಿ ಮತ್ತು ದೊಡ್ಡೇರಿ ಭಾಗದ ಮುಖಂಡರು ಭಾಗವಹಿಸಿದ್ದರು.