ಸಾರಾಂಶ
ಗುತ್ತಿಗೆದಾರ ಸಚಿನ್ ಸಾವಿನ ಮರಣಪತ್ರ ನೋಡಿದರೆ ಸಚಿವ ಪ್ರಿಯಾಂಕ ಅವರೇ ತಪ್ಪಿತಸ್ಥ ಎಂಬಂತೆ ಕಂಡು ಬರುತ್ತಿದೆ.
ಬಳ್ಳಾರಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಬೇಕು. ಸಚಿನ್ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್ ಸಾವಿನ ಮರಣಪತ್ರ ನೋಡಿದರೆ ಸಚಿವ ಪ್ರಿಯಾಂಕ ಅವರೇ ತಪ್ಪಿತಸ್ಥ ಎಂಬಂತೆ ಕಂಡು ಬರುತ್ತಿದೆ. ಸಿಬಿಐ ತನಿಖೆಗೆ ವಹಿಸಿ, ಪ್ರಿಯಾಂಕ ಖರ್ಗೆ ಅವರ ಆಪ್ತನನ್ನು ತನಿಖೆಗೆ ಒಳಪಡಿಸಿದರೆ ಸತ್ಯಾಸತ್ಯತೆ ಹೊರ ಬರುತ್ತದೆ. ಪ್ರಿಯಾಂಕ ಖರ್ಗೆ ಸತ್ಯವಂತನಾಗಿದ್ದರೆ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಸವಾಲೆಸೆದರು.ಪ್ರಿಯಾಂಕ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಿಯಾಂಕ ರಾಜೀನಾಮೆ ಪಡೆಯುವ ಶಕ್ತಿಯಿಲ್ಲ. ತಾವು ಕಾಂಗ್ರೆಸ್ನಲ್ಲಿ ಪ್ರಭಾವಿ ಸಚಿವರಾಗಿದ್ದು ತನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದರಿತ ಪ್ರಿಯಾಂಕ, ಸೊಕ್ಕು, ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ವಾಲ್ಮೀಕಿ ನಿಗಮದ ಅಕೌಂಟೆಂಟ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಬಿಜೆಪಿ ನಡೆಸಿದ ಹೋರಾಟದಿಂದ ಸಚಿವ ನಾಗೇಂದ್ರ ರಾಜೀನಾಮೆ ನೀಡಿದರು. ಈಗ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ರಾಜೀನಾಮೆ ನೀಡಲೇಬೇಕು. ಯಾರೂ ಬಟ್ಟೆ ಹರಿದುಕೊಂಡರೂ ಏನೂ ಮಾಡಲಾಗದು ಎಂದಿರುವ ಪ್ರಿಯಾಂಕ್ ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ನಡೆಸುತ್ತದೆ ಎಂದರು.ಮೃತ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು. ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಮೃತ ಸಚಿನ್ ಸಹೋದರಿಯರು ವಿದ್ಯಾವಂತರಾಗಿದ್ದು, ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು. ಪಕ್ಷದ ಮುಖಂಡರಾದ ಗೋನಾಳ ರಾಜಶೇಖರಗೌಡ, ಎಚ್.ಹನುಮಂತಪ್ಪ, ದಮ್ಮೂರು ಶೇಖರ್ ಇತರರಿದ್ದರು.
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಮಾತನಾಡಿದರು.