ಸಾರಾಂಶ
ಶಾಸಕರ ವರ್ತನೆ ಬಗ್ಗೆ ಸಮಾಜದ ಜನರು ನಿರಾಸೆಗೊಂಡಿದ್ದಾರೆ. ಹೀಗಾಗಿ, ನ್ಯಾಯಾಂಗದ ಮೊರೆ ಹೋಗಲು ಮುಂದಾಗಿದ್ದೇವೆ. ಅದಕ್ಕಾಗಿ ಸಮಾಜದ ವಕೀಲರ ಸಭೆ ನಡೆಸಿ ಚಿಂತನೆ ನಡೆಸುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಕೊಪ್ಪಳ: ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಪಂಚಮಸಾಲಿ ಸಮಾಜದ ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ, ಅಧಿವೇಶನದಲ್ಲಿ ಮಾತನಾಡಲು ನಮ್ಮ ಸಮಾಜದ ಶಾಸಕರಿಗೆ ಹೇಳಿದ್ದೆವು. ಆದರೆ, ಯಾರೂ ಈ ಬಗ್ಗೆ ಮಾತನಾಡಲ್ಲಿಲ್ಲ ಎಂದು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು.
ಕೊಪ್ಪಳ ನಗರದಲ್ಲಿ ಪಂಚಮಸಾಲಿ ವಕೀಲರ ಸಂಘದ ಸಭೆಗಾಗಿ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಹಿಂದಿನ ಸರ್ಕಾರದಲ್ಲಿ ಶಾಸಕರು ಮಾತನಾಡುತ್ತಿದ್ದರು. ಶಾಸಕರ ವರ್ತನೆ ಬಗ್ಗೆ ಸಮಾಜದ ಜನರು ನಿರಾಸೆಗೊಂಡಿದ್ದಾರೆ. ಹೀಗಾಗಿ, ನ್ಯಾಯಾಂಗದ ಮೊರೆ ಹೋಗಲು ಮುಂದಾಗಿದ್ದೇವೆ. ಅದಕ್ಕಾಗಿ ಸಮಾಜದ ವಕೀಲರ ಸಭೆ ನಡೆಸಿ ಚಿಂತನೆ ನಡೆಸುತ್ತಿದ್ದೇವೆ ಎಂದರು.
ಸೆಪ್ಟೆಂಬರ್ ೨೨ಕ್ಕೆ ಬೆಳಗಾವಿಯಲ್ಲಿ ಮಹಾಪರಿಷತ್ ಸಭೆ ನಡೆಸುತ್ತಿದ್ದೇವೆ. ಪ್ರತಿಸಲ ನಮ್ಮ ಸಮಾಜದ ಸಚಿವರನ್ನು ಕೇಳಿದಾಗ ಮೀಟಿಂಗ್ ಮಾಡ್ತೇವೆ ಅಂತ ಹೇಳ್ತಾರೆ. ಆದ್ರೆ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಪಂಚಮಸಾಲಿ ಹೋರಾಟದಿಂದ ಅನೇಕರು ಗೆದ್ದಿದ್ದಾರೆ. ಅದರ ಋಣ ತೀರಿಸೋ ಕೆಲಸವನ್ನು ಶಾಸಕರು, ಸಚಿವರು ಮಾಡಬೇಕು ಎಂದರು.ಹಿಂದಿನ ಸರ್ಕಾರ ನೀಡಿದ್ದ ೨ಡಿ ಜಾರಿಗೊಳಿಸಿದ್ದರೆ ಸ್ವಲ್ಪವಾದ್ರೂ ಅನುಕೂಲವಾಗುತ್ತಿತ್ತು. ಹಿಂದಿನ ಸರ್ಕಾರ ಮಾಡಿದ ಸ್ಪಂದನೆಯನ್ನು ಈ ಸರ್ಕಾರ ನೀಡುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯ ಗಂಗಾವತಿಯಲ್ಲಿ ಬೀದಿ ದೀಪ ಕಂಬಗಳ ಧರ್ಮ ದಂಗಲ್ ವಿಚಾರವಾಗಿ ಮಾತನಾಡಿದ ಅವರು, ಆಯಾ ಧರ್ಮಗಳ ಕ್ಷೇತ್ರಗಳಲ್ಲಿ ಅವರ ಧರ್ಮದ ಸಂಕೇತಗಳನ್ನು ಅಳವಡಿಸಲು ಯಾವುದೇ ತೊಂದರೆ ಇಲ್ಲ. ಅನ್ಯ ಧರ್ಮೀಯರು ಅದನ್ನು ಪ್ರಶ್ನಿಸುವ ಕೆಲಸ ಮಾಡಬಾರದು ಎಂದರು.ಶಾಸಕ ಬಸನಗೌಡ ಪಾಟೀಲ ಯತ್ನಾಳ ರೈತರಿಗೆ ಪೂರಕವಾಗಿರುವ ಕಾರ್ಖಾನೆ ಮಾಡಿದ್ದಾರೆ. ದುರುದ್ದೇಶದಿಂದ ಅದನ್ನು ಮುಚ್ಚುವ ಕೆಲಸ ಮಾಡಬಾರದು. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದರು.