ಸಿದ್ದು, ರೇವಣ್ಣ ನಡುವೆ ಹೊಂದಾಣಿಕೆ-ಜೋಶಿ

| Published : May 04 2024, 12:34 AM IST / Updated: May 04 2024, 10:24 AM IST

Prahlada Joshi

ಸಾರಾಂಶ

ಪ್ರಜ್ವಲ್‌ ರೇವಣ್ಣ ಅವರಿಗೆ ಈಗ ಲುಕ್‌ಔಟ್‌ ನೋಟಿಸ್‌ ಕೊಟ್ಟಿದ್ದಾರೆ. ಮೊದಲೇ ಎಫ್‌ಐಆರ್‌ ಮಾಡಿದ್ದರೆ ಅವರ ಬಂಧನವಾಗುತ್ತಿತ್ತು. ಅವರಿಗೆ ಜಪಾನ್‌, ಜರ್ಮನಿಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

 ಹುಬ್ಬಳ್ಳಿ :  ಪ್ರಜ್ವಲ್‌ ರೇವಣ್ಣ ಅವರಿಗೆ ಈಗ ಲುಕ್‌ಔಟ್‌ ನೋಟಿಸ್‌ ಕೊಟ್ಟಿದ್ದಾರೆ. ಮೊದಲೇ ಎಫ್‌ಐಆರ್‌ ಮಾಡಿದ್ದರೆ ಅವರ ಬಂಧನವಾಗುತ್ತಿತ್ತು. ಅವರಿಗೆ ಜಪಾನ್‌, ಜರ್ಮನಿಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಜ್ವಲ್​ ರೇವಣ್ಣರನ್ನು ಬಿಟ್ಟಿದ್ದು ನೀವೇ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಕೈವಾಡವಿದೆ. ಏ.21ರಂದು ಪ್ರಕರಣ ಬೆಳಕಿಗೆ ಬಂದಿದ್ದರೂ ಸಿದ್ದರಾಮಯ್ಯ ಬೇಕಂತಲೇ ಎಫ್‌ಐಆರ್​ ಮಾಡಿಸಲಿಲ್ಲ. ಸಿದ್ದರಾಮಯ್ಯ ಮತ್ತು ರೇವಣ್ಣ ನಡುವೆ ಹೊಂದಾಣಿಕೆ ಇದೆ ಎಂದು ಆರೋಪಿಸಿದರು.

ಪೆನ್‌ಡ್ರೈವ್​ ಪ್ರಕರಣ ಸಂಬಂಧ ಪ್ರಜ್ವಲ್ ಸಹೋದರ ತಮ್ಮನ್ನು ಭೇಟಿ ಮಾಡಿದ್ದಾರೆ ಎಂದು ಅವರೇ ಹೇಳಿಕೊಂಡಿದ್ದಾರೆ. ಆಗಲೇ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಈ ಪ್ರಕರಣ ಗಂಭೀರ ಸ್ವರೂಪದ್ದು ಎಂದು ಗೊತ್ತಿದ್ದರೂ ಆರಾಮ ಮಲಗಿ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೀರಾ? ವೀಸಾ, ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ (ರಾಜತಾಂತ್ರಿಕ ಪಾಸ್‌ಪೋರ್ಟ್‌) ಕೊಟ್ಟಿದ್ದೀರಾ ಎಂದು ಹೇಳುತ್ತಿದ್ದೀರಾ. ನಾಚಿಕೆ, ಮಾನ-ಮರ್ಯಾದೆ ಇದ್ದವರು ಈ ರೀತಿ ಮಾತನಾಡುವುದಿಲ್ಲ ಎಂದು ಹೇಳಿದರು.

ಡಿಪ್ಲೋಮ್ಯಾಟಿಕ್‌ ಪಾಸ್‌ಪೋರ್ಟ್‌ ತೆಗೆದುಕೊಂಡರೆ ಹಲವಾರು ದೇಶಗಳಿಗೆ ವೀಸಾ ಇಲ್ಲದೆ ಹೋಗಬಹುದು. ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಮತ್ತು ಇತರ ಕಾಂಗ್ರೆಸ್​ ನಾಯಕರಿಗೆ ಇಷ್ಟೂ ಗೊತ್ತಿಲ್ಲವೇ? ಎಲ್ಲವನ್ನೂ ಕೇಂದ್ರದ ಮೇಲೆ ಹಾಕಬೇಕೆಂಬುದು ಇವರ ಪ್ರವೃತ್ತಿ ಎಂದು ವಾಗ್ದಾಳಿ ನಡೆಸಿದರು.

ಈ ಪ್ರಕರಣದ ಬಗ್ಗೆ ಜೋಶಿಯವರಿಗೆ ಎಲ್ಲವೂ ಗೊತ್ತಿತ್ತು, ಅದರೂ ಅವರು ಯಾಕೆ ಮುಚ್ಚಿಟ್ಟರು ಎಂಬ ಸಚಿವ ದಿನೇಶ್​ ಗುಂಡೂರಾವ್​ ಆರೋಪಕ್ಕೆ ಪ್ರತಿಕ್ರಿಯಿಸಿ, ಗುಂಡೂರಾವ್ ಗೆ ನನಗೆ ಎಲ್ಲವೂ ಗೊತ್ತಿತ್ತೆಂದು ಕನಸು ಬಿದ್ದಿತ್ತಾ?. ಅವರು ​ಬೆಂಗಳೂರಿನಲ್ಲಿರುವವರು, ನಾನು ಹುಬ್ಬಳ್ಳಿಯಲ್ಲಿರುವವನು. ಗುಂಡೂರಾವ್​ ಮಂತ್ರಿಯಾಗಿದ್ದಾರೆ, ಅವರಿಗೇ ಗೊತ್ತಿಲ್ಲ ಎಂದರೆ ನನಗೆ ಗೊತ್ತಿರುತ್ತಾ? ಗುಂಡೂರಾವ್ ಸೆನ್ಸಿಟಿವ್ ರಾಜಕಾರಣಿ ಎಂದು ನಾನಂದುಕೊಂಡಿದ್ದೇನೆ. ರಾಹುಲ್​ ಗಾಂಧಿ ಅವರಂತೆ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.