ರಾಜಕೀಯ ಮೇಲಾಟದಿಂದ ಸಹಕಾರ ಸಂಘಕ್ಕೆ ಸಂಕಷ್ಟ

| Published : Nov 16 2024, 12:35 AM IST

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ರಾಜಕೀಯ ಬಣಗಳ ಕಿತ್ತಾಟದ ಪರಿಣಾಮ ದಿವಾಳಿಯಾಗುವ ಅಪಾಯ ಎದುರಿಸುತ್ತಿದೆ ಎಂದು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣಪ್ಪ ತಿಳಿಸಿದರು.

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರಿ ಸಂಘ ರಾಜಕೀಯ ಬಣಗಳ ಕಿತ್ತಾಟದ ಪರಿಣಾಮ ದಿವಾಳಿಯಾಗುವ ಅಪಾಯ ಎದುರಿಸುತ್ತಿದೆ ಎಂದು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಈಗಾಗಲೇ 3 ಲಕ್ಷ ರು. ಸಾಲದ ಸುಳಿಯಲ್ಲಿದ್ದು, ಜೊತೆಗೆ ಚುನಾವಣೆಗೆ ಎರಡರಿಂದ ಮೂರು ಲಕ್ಷ ವೆಚ್ಚವಾಗಲಿದೆ. ಸಹಕಾರ ಸಂಘ ವಾರ್ಷಿಕ ಕನಿಷ್ಠ 10 ಸಾವಿರ ರುಪಾಯಿಯೂ ಲಾಭ ಗಳಿಸುತ್ತಿಲ್ಲ, ಹಾಗಾಗಿ ಸಂಘ ಸೂಪರ್ ಸೀಡ್ ಆಗುವ ಆತಂಕವೂ ಇದೆ. ರಾಜಕೀಯ ಕಿತ್ತಾಟ ಬಿಟ್ಟು ಗ್ರಾಮದ ಅಭಿವೃದ್ಧಿಗಾಗಿ ದುಡಿಯುವ ಸಂಕಲ್ಪ ಮಾಡಬೇಕಿದೆ. ಶಾಸಕರು ಈ ನಿಟ್ಟಿನಲ್ಲಿ ಹೊಣೆಯಾಧಾರಿತವಾಗಿ ನಡೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಸಹಕಾರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಸಹಕಾರ ಸಂಘದ ಚುನಾವಣೆ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದವರು ಜೆಡಿಎಸ್ ಮುಖಂಡ ಹರೀಶ್ ಗೌಡರ ಪಾತ್ರ ಮತ್ತು ತಾಲೂಕಿಗೆ ಅವರು ನೀಡಿದ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಜೊತೆಗೆ ಹಲವು ರಚನಾತ್ಮಕ ಕಾರ್ಯಯೋಜನೆಗಳನ್ನು ಹೊಂದುವ ಮೂಲಕ ಜೆಡಿಎಸ್ ಬಲವರ್ಧನೆ ಹಾಗೂ ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ ಎಂದರು.

ಹರೀಶ್‌ಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಲ್ಲ. ಶಾಸಕರು ಈ ತುಚ್ಛ ಮನಸ್ಥಿತಿಯ ಬಗ್ಗೆ ತಮ್ಮ ಹಿಂಬಾಲಕರಿಗೆ ಬುದ್ದಿ ಹೇಳಬೇಕು. ಕ್ಷುಲ್ಲಕ ಹಾಗೂ ಮಾನಹಾನಿಕರ ಹೇಳಿಕೆಗಳ ವಿರುದ್ದ ಕಾನೂನು ಹೋರಾಟ ಮಾಡಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಅಜಯ್ ಮಾತನಾಡಿ, ಒಪ್ಪಂದ ಮಾಡಿಕೊಳ್ಳುವ ಮನಸ್ಥಿತಿ ಇರುವ ಬಿಜೆಪಿಗರು ನಾವು ಬೆಂಬಲಿಸಿ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರಗಳನ್ನು ಬಲವಂತದಿಂದ ಹಿಂಪಡೆಯುವಂತೆ ಮಾಡುವುದು ಎಷ್ಟು ಸರಿ? ಅವರು ಕುತಂತ್ರದಿಂದ ಚುನಾವಣೆಗೆ ಮುಂದಾಗಿದ್ದರು, ಅದಕ್ಕೆ ತಕ್ಕ ಉತ್ತರ ನಾವು ನೀಡಿದ್ದೇವೆ ಎಂದರು.

ಮುಖಂಡ ದೀಪು ಮಾತನಾಡಿ, ಇದು ನಮ್ಮ ದೊಡ್ಡತುಮಕೂರು ಸಹಕಾರ ಸಂಘದ ಮೊದಲ ಚುನಾವಣೆ, ಈ ಚುನಾವಣೆಯಲ್ಲಿ ಸತತವಾಗಿ ಮೈತ್ರಿಗೆ ಪ್ರಯತ್ನ ಮಾಡಿದ್ದೆವು. ಆದರೆ ಬಿಜೆಪಿ ಒಪ್ಪದ ಕಾರಣ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆಗೆ ವೆಚ್ಚ ಮಾಡಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿದ್ದರೆ ಎಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು ಎಂದರು.

ಈ ವೇಳೆ ಗ್ರಾಪಂ ಸದಸ್ಯ ವಿರೇಗೌಡ, ಮುಖಂಡರಾದ ವೆಂಕಟೇಶ್, ಚೈತ್ರ ಭಾಸ್ಕರ್, ಅಜಯ್, ದೀಪು, ಮಂಜುನಾಥ್, ಚೈತ್ರ ಶ್ರೀಧರ್, ಪ್ರವೀಣ್ ಶಾಂತಿನಗರ ಉಪಸ್ಥಿತರಿದ್ದರು.

15ಕೆಡಿಬಿಪಿ3-

ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರ ಸಂಘ ಚುನಾವಣೆ ಕುರಿತು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.