ಬಡವರ ಬದುಕು ಹಸನಾಗಲು ಸಹಕಾರ ಸಂಘದ ಪಾಲು ದೊಡ್ಡದು-ಶಾಸಕ ಮಾನೆ

| Published : Nov 16 2025, 02:15 AM IST

ಸಾರಾಂಶ

ಬಡವರು ಇನ್ನು ಜೀತದಾಳಿನಂತೆ ಜೀವಿಸುವುದು ಬೇಡ, ಸಹಕಾರ ರಂಗ ಸಕ್ರೀಯವಾದರೆ ಶಾಶ್ವತವಾಗಿ ಧನವಂತರ ಕಪಿಮುಷ್ಟಿಯಿಂದ ಬಡವರು ಹೊರಗುಳಿಯಲು ಸಾಧ್ಯ. ಏಷ್ಯಾ ಖಂಡದಲ್ಲಿಯೇ ದೇಶದ ಸಹಕಾರಿ ಸಂಘ ಮುಂಚೂಣಿಯಲ್ಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಹಾನಗಲ್ಲ: ಬಡವರು ಇನ್ನು ಜೀತದಾಳಿನಂತೆ ಜೀವಿಸುವುದು ಬೇಡ, ಸಹಕಾರ ರಂಗ ಸಕ್ರೀಯವಾದರೆ ಶಾಶ್ವತವಾಗಿ ಧನವಂತರ ಕಪಿಮುಷ್ಟಿಯಿಂದ ಬಡವರು ಹೊರಗುಳಿಯಲು ಸಾಧ್ಯ. ಏಷ್ಯಾ ಖಂಡದಲ್ಲಿಯೇ ದೇಶದ ಸಹಕಾರಿ ಸಂಘ ಮುಂಚೂಣಿಯಲ್ಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಶನಿವಾರ ಹಾನಗಲ್ಲಿನ ಸದಾಶಿವ ಮಂಗಲ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಹಾವೇರಿ ಜಿಲ್ಲಾ ಸಹಕಾರ ಯುನಿಯನ್ ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ 72 ನೇ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಕ್ಷೇತ್ರದಲ್ಲಿ ನಮ್ಮ ದೇಶದ ಸಹಕಾರ ರಂಗ ಏಷ್ಯಾ ಖಂಡದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬಡವರ ಬದುಕು ಹಸನಾಗಲು ಸಹಕಾರ ಸಂಘದ ಪಾಲು ದೊಡ್ಡದಿದೆ. ಪಡಿತರ, ಕೃಷಿ ಸೌಲಭ್ಯ ಸೇರಿದಂತೆ ಎಲ್ಲ ಸೌಲಭ್ಯಗಳು ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರಿಯಾಗಿ ತಲುಪಿಸುವಲ್ಲಿ ಈ ಕ್ಷೇತ್ರದ ಸಹಕಾರ ಅತ್ಯವಶ್ಯವಾಗಿದೆ. ದುರಾಸೆಗೆ ಸಹಕಾರಿ ಸಂಘ ಬಲಿಯಾಗುವುದು ಬೇಡ. ಸರಕಾರವನ್ನು ಅಲುಗಾಡಿಸುವ ಶಕ್ತಿ ಈ ರಂಗಕ್ಕಿರುವಾಗ ಸಂಘಟಿತವಾಗಿ ಕೆಲಸ ಮಾಡಿದರೆ ಎಲ್ಲವೂ ಸುಸೂತ್ರವಾಗಿ ನಡೆಯಬಲ್ಲವು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ಅರಬಗೊಂಡ, ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಸಹಕಾರ ರಂಗಕ್ಕೆ ಶಕ್ತಿ ತುಂಬುವ ಅಗತ್ಯವಿದೆ. ಯುವಕರು ಈ ರಂಗದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ರೈತರ ಉತ್ಪಾದನೆಗೆ ಸರಿಯಾದ ಬೆಲೆ ಸಿಗುವಂತಾಗಬೇಕು. ಹಾವೇರಿ ಜಿಲ್ಲೆಯಲ್ಲಿ ಒಂದು ಸಾವಿರ ಸಹಕಾರಿ ಸಂಘಗಳಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಸಹಕಾರ ಸಂಘಕ್ಕೆ ಈಗ ಬಲ ಬಂದಿದೆ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಕೆಸಿಸಿ ಬ್ಯಾಂಕ್ ನಿರ್ದೇಶಕ ಅದಾನಂದ ಮೆಳ್ಳಿಹಳ್ಳಿ, 2019 ರಲ್ಲಿ ಸಹಕಾರ ಇಲಾಖೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶಕ್ತಿಯಾದರು. ದೇಶದಲ್ಲಿ ಸಹಕಾರ ಇಲಾಖೆಗೆ ಮಂತ್ರಿ ಸ್ಥಾನವೂ ದೊರೆತಿದೆ. ಹಾನಗಲ್ಲ ತಾಲೂಕಿನಲ್ಲಿಯೇ 33 ಸಂಘಗಳ ಕಂಪ್ಯೂಟೀಕರಣದ ಭಾಗ್ಯ ಲಭಿಸಿದ್ದು ಇದು ಪಾರದರ್ಶಕ ಆಡಳಿತಕ್ಕೆ ಅವಶ್ಯವಾಗಿದೆ. ಸಹಕಾರ ಸಂಘಗಳ ವಿಷಯದಲ್ಲಿ ರಾಜಕೀಯ ಸಲ್ಲದು. ಎಲ್ಲರೂ ಒಟ್ಟಾಗಿ ಬಡವರ ಹಿತಕ್ಕೆ ಮುಂದಾಗೋಣ. ಕೃಷಿ ಸೇರಿದಂತೆ ಎಲ್ಲ ರಂಗಗಳ ಅಭಿವೃದ್ಧಿಗೆ ಇದು ಸಹಕಾರಿ ಎಂದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಷಣ್ಮುಖಪ್ಪ ಮುಚ್ಚಂಡಿ, ನಿಶೀಮಗೌಡ್ರು ಪಾಟೀಲ, ವೀರಭದ್ರಪ್ಪ ಉಪ್ಪಿನ, ಚಂದ್ರಪ್ಪ ಜಾಲಗಾರ, ಕಲ್ಯಾಣಕುಮಾರ ಶೆಟ್ಟರ, ಮಹೇಶ ಬಣಕಾರ, ವಿಜಯೇಂದ್ರ ಕನವಳ್ಳಿ, ಪದ್ಮಪ್ಪ ಮಂತಗಿ, ಗಣೇಶಪ್ಪ ಕೋಡಿಹಳ್ಳಿ, ಎಸ್.ಜಿ.ಸುಣಗಾರ, ಜಿಲ್ಲಾ ಸಹಕಾರ ಯುನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸವಿತಾ ಹಿರೇಮಠ, ಹಾನಗಲ್ಲ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಪುಷ್ಪಾವತಿ, ಹಿರಿಯ ನಿರೀಕ್ಷಕ ಆರ್.ನಟರಾಜ, ಕಿರಿಯ ನಿರೀಕ್ಷಕ ಶಿವಶಂಕರ ದುಮ್ಮೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ. ಎಚ್.ಎಫ್. ನದಾಫ ಉಪನ್ಯಾಸ ನೀಡಿದರು. ನಿಸ್ಸೀಮಗೌಡ ಪಾಟೀಲ ಸ್ವಾಗತಿಸಿದರು.