ಸಾರಾಂಶ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡದೆ ಕರ್ನಾಟಕವನ್ನು ಅವಗಣಿಸಿದ್ದಷ್ಟೇ ಅಲ್ಲ ಕರಾವಳಿ ಕರ್ನಾಟಕಕ್ಕೆ ದ್ರೋಹ ಬಗೆಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನು ನೀಡದೆ ಕರ್ನಾಟಕವನ್ನು ಅವಗಣಿಸಿದ್ದಷ್ಟೇ ಅಲ್ಲ ಕರಾವಳಿ ಕರ್ನಾಟಕಕ್ಕೆ ದ್ರೋಹ ಬಗೆಯಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.ಕರಾವಳಿ ಕರ್ನಾಟಕದ ಮೀನುಗಾರರು, ಬಂದರು ಕೈಗಾರಿಕೆ, ರೈತರು ಹಾಗೂ ಕೃಷಿಗೆ ಸಂಬಂದ ಪಟ್ಟಂತೆ ರಾಜ್ಯ ಸರ್ಕಾರದ ಆದ್ಯತಾ ವಲಯದ ಬೇಡಿಕೆಗಳ ಹೊರತಾಗಿಯೂ ಬಜೆಟ್ನಲ್ಲಿ ಯಾವುದೇ ಯೋಜನೆಗಳ ಪ್ರಸ್ತಾವನೆ ಇಲ್ಲದಿರುವುದು ವಿಷಾದನೀಯ.ರೈತರ ಉತ್ಪಾದನೆಗೆ ಯಾವುದೇ ನಿರ್ದಿಷ್ಟ ಯೋಜನೆಗಳಿಲ್ಲ. ಕನಿಷ್ಠ ಬೆಂಬಲ ಬೆಲೆ ನಿಗದಿ, ಸಾಲಮನ್ನಾ ಬಗ್ಗೆ ಬಜೆಟ್ ಮೌನ ವಹಿಸಿದೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರದ ಮುಂದಿಟ್ಟ ನೀರಾವರಿ ಯೋಜನೆಗಳನ್ನು ಬಜೆಟಿನಲ್ಲಿ ಅವಗಣಿಸಲಾಗಿರುವುದು ಇಲ್ಲಿನ ಅವರದ್ದೇ ಪಕ್ಷದ ಸಂಸದರ ವೈಫಲ್ಯವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.ಮಹಿಳಾ ಸಬಲೀಕರಣದ ಬಗ್ಗೆ ಯಾವುದೇ ನಿಗದಿತ ಸಮರ್ಪಕ ಯೋಜನೆಗಳಿಲ್ಲ. ಮೇಲ್ವರ್ಗದ ಉದ್ಯಮಪತಿಗಳ ಓಲೈಸಿರುವ ಬಜೆಟ್, ಮಧ್ಯಮ ವರ್ಗದ ಆದಾಯ ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಮಹಿಳಾ ಸಬಲೀಕರಣದ ಬಗ್ಗೆ ಯಾವುದೇ ನಿಗದಿತ ಕಾರ್ಯಯೋಜನೆಗಳ ಪ್ರಸ್ತಾವನೆ ಇಲ್ಲ. ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದ ವರ್ಗದ ಸಂಪೂರ್ಣ ನಿರ್ಲಕ್ಷ್ಯವಷ್ಟೇ ಈ ಬಜೆಟ್ನ ಮಹಾ ಸಾಧನೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.