ಕಾರ್ಮಿಕರ ನಿರ್ಲಕ್ಷ್ಯದಿಂದ ಕಾಫಿ ಬೆಳೆಯೇ ನಾಶ

| Published : Jun 16 2025, 01:57 AM IST

ಸಾರಾಂಶ

ಔಷಧಿ ಸಿಂಪಡಣೆಗೆ ಮುಂದಾಗಿದ್ದ ಕಾರ್ಮಿಕರು ಔಷಧಿಯೊಂದಿಗೆ ಗಮ್ ಮಿಶ್ರಣ ಮಾಡುವ ಬದಲಾಗಿ ಗೋದಾಮಿನಲ್ಲಿದ್ದ ರೌಂಡ್ ಆಫ್ ಕಳೆನಾಶಕ ಮಿಶ್ರಣ ಮಾಡಿ ಸಿಂಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಆಳು ಮಾಡಿದ್ದು ಹಾಳು ಎಂಬ ಗಾದೆ ಮತ್ತೊಮ್ಮೆ ಸಾಬೀತಾಗಿದೆ.

ತಾಲೂಕಿನ ಯಡಕೇರಿ ಗ್ರಾಮದ ಸುಬ್ಬೆಗೌಡರು ಆಳುಗಳನ್ನು ನಂಬಿ ಫಸಲಿಗೆ ಬಂದಿದ್ದ ಎರಡು ಎಕರೆ ಕಾಫಿ ತೋಟವನ್ನೆ ಕಳೆದುಕೊಂಡಿದ್ದಾರೆ.

ಹೆಚ್ಚು ಮಳೆಯಿಂದಾಗಿ ಕಾಫಿ ತೋಟದಲ್ಲಿ ಶೀತ ಅತಿಯಾಗಿ ಫಸಲು ನೆಲ ಸೇರುತ್ತದೆ ಎಂಬ ಕಾರಣದಿಂದ ಕಾಫಿ ಮಂಡಳಿ ಅಧಿಕಾರಿಗಳ ಸಲಹೆ ಪಡೆದು ಕಾಂಪ್ಯಾಕ್ಟ್ ಹಾಗೂ ಆಮ್ಲ ಸಿಂಪಡಣೆಗೆ ಮುಂದಾಗಿದ್ದು, ಕೇವಲ ಔಷಧಿ ಸಿಂಪಡಿಸಿದರೆ ಮಳೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಔಷಧಿಯೊಂದಿಗೆ ಗಮ್ ಸೇರಿಸಿ ಸಿಂಪಡಣೆಗೆ ಮುಂದಾಗಿ ಎಲ್ಲ ಔಷಧಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದರು. ಕಳೆದ ಎರಡು ದಿನಗಳ ಹಿಂದೆ ಕಾರ್ಮಿಕರಿಗೆ ಔಷಧಿ ಸಿಂಪಡಣೆ ಮಾಡುವಂತೆ ಸೂಚಿಸಿ ಅನ್ಯ ಕೆಲಸಕ್ಕೆ ತೆರಳಿದ್ದರು. ಇತ್ತ ಔಷಧಿ ಸಿಂಪಡಣೆಗೆ ಮುಂದಾಗಿದ್ದ ಕಾರ್ಮಿಕರು ಔಷಧಿಯೊಂದಿಗೆ ಗಮ್ ಮಿಶ್ರಣ ಮಾಡುವ ಬದಲಾಗಿ ಗೋದಾಮಿನಲ್ಲಿದ್ದ ರೌಂಡ್ ಆಫ್ ಕಳೆನಾಶಕ ಮಿಶ್ರಣ ಮಾಡಿ ಸಿಂಪಡಿಸಿದ್ದಾರೆ. ಎರಡು ದಿನಗಳ ನಂತರ ತೋಟಕ್ಕೆ ತೆರಳಿದ ಕಾಫಿ ತೋಟದ ಮಾಲೀಕ ಒಣಗಿ ನಿಂತಿರುವ ಕಾಫಿಗಿಡಗಳನ್ನು ಕಂಡು ಹೌಹಾರಿದ್ದು ವಿಷಯ ವಳಲಹಳ್ಳಿ ಗ್ರಾ.ಪಂ ಬೆಳೆಗಾರರ ಸಂಘಕ್ಕೆ ತಿಳಿದಿದ್ದು, ನಾಶವಾದ ಕಾಫಿ ತೋಟ ವೀಕ್ಷಿಸಿದ ಬೆಳೆಗಾರರ ಸಂಘಟನೆಯ ಪದಾಧಿಕಾರಿಗಳು ಬೆಳೆಗಾರನಿಗೆ ಸಾಂತ್ವಾನ ಹೇಳಿದ್ದಾರೆ.