ಪಟ್ಟಣದ ಸಾರ್ವಜನಿಕರ ಕುಂದುಕೊರತೆ ನೀಗಿಸಲು ಹಾಗೂ ಪರಿಶೀಲನೆಗೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕಾಫಿ ವಿತ್ ಚೀಫ್ ಆಫೀಸರ್ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಸಾರ್ವಜನಿಕರ ಕುಂದುಕೊರತೆ ನೀಗಿಸಲು ಹಾಗೂ ಪರಿಶೀಲನೆಗೆ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕಾಫಿ ವಿತ್ ಚೀಫ್ ಆಫೀಸರ್ ಕಾರ್ಯಕ್ರಮ ನಡೆಸಲು ಮುಂದಾಗಿದ್ದಾರೆ.ಚಾಮರಾಜನಗರದಿಂದ ಇತ್ತೀಚೆಗೆ ವರ್ಗಾವಣೆಯಾದ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪನಾಗ್ ಅವರು ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರಾಗಿದ್ದಾಗ ಕಾಫಿ ವಿತ್ ಚೀಫ್ ಕಮೀಷನರ್ ಎಂದು ಕಾರ್ಯಕ್ರಮ ನಡೆಸಿದ್ದರು. ಅದೇ ಮಾದರಿಯಲ್ಲಿ ಪಟ್ಟಣದ ಸಾರ್ವಜನಿಕರನ್ನು ವಾರ್ಡಿನಲ್ಲಿ ಭೇಟಿ ಮಾಡಿ ಕುಡಿಯುವ ನೀರು, ಕಸದ ಸಮಸ್ಯೆ ಒಳಚರಂಡಿ, ಬೀದಿ ದೀಪ ನಿರ್ವಹಣೆ ಇ ಸ್ವತ್ತುನಂತಹ ಸಮಸ್ಯೆ ಬಗೆಹರಿಸಲು ಕಾಫಿ ವಿತ್ ಚೀಫ್ ಆಫೀಸರ್ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಮಾತನಾಡಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್ ಕಳೆದ ವಾರದ ಹಿಂದೆ ಕಾಫಿ ವಿತ್ ಚೀಫ್ ಆಫೀಸರ್ ಕಾರ್ಯಕ್ರಮ ನಡೆಸಿ ಎಂದು ಸೂಚಿಸಿದ್ದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಕೂಡ ವಾರ್ಡ್ ಸಭೆ ಮಾಡಲು ಸೂಚಿಸಿದ್ದರು. ಈ ಹಿನ್ನೆಲೆ ಕಾಫಿ ವಿತ್ ಚೀಫ್ ಆಫೀಸರ್ ಕಾರ್ಯಕ್ರಮವನ್ನು ಜ.೧೨ರಂದು ವಾರ್ಡ್ ನಂ.೧ ರಿಂದ ಸಾರ್ವಜನಿಕರನ್ನು ಭೇಟಿ ಕಾರ್ಯಕ್ರಮ ನಡೆಸಲಾಗುವುದು. ಪ್ರಸ್ತುತ ನಿರಂತರವಾಗಿ ಕಸ ಸುರಿಯುತ್ತಿರುವ ಕಸದ ಜಾಗವನ್ನು ಗುರುತಿಸಿ ಕಸದಿಂದ ಕಲೆ ಎಂಬ ಪರಿಕಲ್ಪನೆಯಿಂದ ಸದರಿ ಜಾಗವನ್ನು ಮಾರ್ಪಡಿಸಲಾಗಿದೆ ಎಂದರು.