ಆದಿಯೋಗಿ ದರ್ಶನ ಮಾಡಿ, ವಾಪಸ್ಸು ಬೆಂಗಳೂರಿಗೆ ತೆರಳುವಾಗ ಲಿಂಗಶೆಟ್ಟಿ ಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 44ನ್ನು ದಾಟುವಾಗ ಬಾಗೇಪಲ್ಲಿ ಕಡೆಯಿಂದ ಬಂದ ಟಿಪ್ಪರ್ ಲಾರಿ ಬೈಕ್‌ನ ಹಿಂಬದಿಗೆ ಡಿಕ್ಕಿಯಾಗಿದೆ.

ಲಿಂಗಶೆಟ್ಟಿಪುರ ಗೇಟ್‌ನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಘಟನೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬೈಕ್ ಮತ್ತು ಕ್ಯಾಂಟರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಭೀಕರವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಲಿಂಗಶೆಟ್ಟಿಪುರ ಗೇಟ್‌ನ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಭಾನುವಾರ ನಡೆದಿದೆ.

ಮೃತರು ಯುವಕ ಮತ್ತು ಯುವತಿಯಾಗಿದ್ದು, ಮೃತ ಯುವಕನನ್ನತ್ಬೆಂಗಳೂರಿನಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಅಮನ್ ದೇವ್ ಮಿಶ್ರಾ (28) ಎಂದು ಗುರುತಿಸಲಾಗಿದ್ದು, ಮೃತ ಯುವತಿಯ ಗುರುತು ಸಿಗಬೇಕಿದೆ.

ಯುವಕ ಅಮನ್ ದೇವ್ ಮಿಶ್ರಾ ಮತ್ತು ಯುವತಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಆದಿಯೋಗಿಗೆ ಬಂದು ಆದಿಯೋಗಿ ದರ್ಶನ ಮಾಡಿ, ವಾಪಸ್ಸು ಬೆಂಗಳೂರಿಗೆ ತೆರಳುವಾಗ ಲಿಂಗಶೆಟ್ಟಿ ಪುರ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 44ನ್ನು ದಾಟುವಾಗ ಬಾಗೇಪಲ್ಲಿ ಕಡೆಯಿಂದ ಬಂದ ಟಿಪ್ಪರ್ ಲಾರಿ ಬೈಕ್‌ನ ಹಿಂಬದಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಯುವಕ ಮತ್ತು ಯುವತಿಯರ ದೇಹ ಕ್ಯಾಂಟರ್‌ನ ಟೈರ್‌ಗಳಡಿ ಸಿಲುಕಿ ಸುಮಾರು 100 ಮೀಟರ್ ದೂರಹೆಳೆದು ಕೊಂಡು ಹೋಗಿದ್ದು, ಇಬ್ಬರ ದೇಹಗಳು ನುಜ್ಜು ಗುಜ್ಜಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಾನುವಾರ ರಜೆ ದಿನವಾಗಿದ್ದು ಆದಿ ಯೋಗಿ ಶಿವನ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ವಾಹನಗಳಲ್ಲಿ ಆಗಮಿಸಿದ್ದ ಹಿನ್ನೆಲೆ ಮತ್ತು ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿ 44ರ ಎರಡೂ ಬದಿ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.

ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣಾ ಪೋಲಿಸರು ಮತ್ತು ನಗರ ಠಾಣೆಯ ಪಿಎಸ್ಐ ಅಮರ್ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಸುಗಮ ಸಂಚಾರಕ್ಕೆ ಅನುಮಾಡಿ ಕೊಡಲು ಹರ ಸಾಹಸ ಪಟ್ಟರು.

ಇದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದು, ಈಶಾ ಫೌಂಡೇಶನ್ ನವರು ಪರ್ಯಾಯ ರಸ್ತೆಯ ವ್ಯೆವಸ್ಥೆ ಮಾಡಿಕೊಳ್ಳುವಂತೆ ಒತ್ತಾಯಿಸಿ ಸ್ಥಳೀಯರು ಕೆಲ ಕಾಲ ಈಶಗೆ ತೆರಳುವ ರಸ್ತೆ ಬಂದ್ ಮಾಡಿ ಘೋಷಣೆಗಳನ್ನು ಕೂಗಿದರು.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣ ಹಾಗೂ ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.