ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊರಚ, ಕೊರಮ, ಭೋವಿ, ಬಂಜಾರ ಸಮುದಾಯದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಹರಪನಹಳ್ಳಿ: ಅವೈಜ್ಞಾನಿಕ ಒಳಮೀಸಲಾತಿ ಹಂಚಿಕೆ ಮತ್ತು ಅವೈಜ್ಞಾನಿಕ ರೋಸ್ಟರ್ ಬಿಂದು ಆದೇಶವನ್ನು ರದ್ದುಗೊಳಿಸಿ ಹಳೆಯ ಮೀಸಲಾತಿ ವ್ಯವಸ್ಥೆ ಮತ್ತು ಹಳೆಯ ರೋಸ್ಟರ್ ಬಿಂದು ಆದೇಶವನ್ನು ಮುಂದುವರಿಸುವುದು ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊರಚ, ಕೊರಮ, ಭೋವಿ, ಬಂಜಾರ ಸಮುದಾಯದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಇಲ್ಲಿಯ ಹರಿಹರ ವೃತ್ತದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಐ.ಬಿ. ವೃತ್ತಕ್ಕೆ ಆಗಮಿಸಿ ಸಮಾವೇಶವಾಗಿ ಮಾರ್ಪಟ್ಟಿತು.ಬಂಜಾರ, ಭೋವಿ, ಕೊರಚ, ಕೊರಮ (ಕೊಲಂಬೊ) ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶವನ್ನು ಕಲ್ಪಿಸಬೇಕು, ಅಲೆಮಾರಿ ಸಮುದಾಯದ 59 ಜಾತಿಗಳನ್ನು ಸಿ ಗುಂಪಿನಿಂದ ಪ್ರತ್ಯೇಕ ಮಾಡಿ ಅವರಿಗೆ ಶೇ. 1ರಷ್ಟು ಮೀಸಲಾತಿ ನೀಡಬೇಕು. ಸರ್ಕಾರದ ಎಲ್ಲ ಇಲಾಖೆಗಳ ನೇಮಕಾತಿ ರೋಸ್ಟರ್ ಬಿಂದುಗಳಲ್ಲಿ ಆಗಿರುವ ಲೋಪ ದೋಷಗಳನ್ನು ಪರಿಶೀಲಿಸಿ ನ್ಯಾಯಯುತ ರೋಸ್ಟರ್ ಬಿಂದು ಮೂಲಕ ಹುದ್ದೆ ಹಂಚಿಕೆ ಮಾಡಬೇಕು. ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಅಂತಿಮ ತೀರ್ಪು ಬರುವವರೆಗೂ ಹಳೆಯ ಮೀಸಲಾತಿ ಪದ್ಧತಿಯಂತೆ ನೇಮಕಾತಿ ಮುಂದುವರಿಸಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಿದರು.
ಸಿಪಿಐ ಮಹಾಂತೇಶ ಸಜ್ಜನ್ ನೇತೃತ್ವದಲ್ಲಿ ಪಿಎಸ್ಐಗಳಾದ ಶಂಭುಲಿಂಗ ಹಿರೇಮಠ, ವಿಜಯಕೃಷ್ಣ ಬಂದೋಬಸ್ತ್ ಏರ್ಪಡಿಸಿದ್ದರು.ಬಂಜಾರ ಸಮುದಾಯದ ಶಿವಪ್ರಕಾಶ ಮಹಾರಾಜ, ಕಿರಣ್, ಶರತ್, ಶಿರಗಾನಹಳ್ಳಿ ವಿಶ್ವನಾಥ, ಎಲ್.ಬಿ. ಹಾಲೇಶನಾಯ್ಕ, ಎಲ್. ಮಂಜನಾಯ್ಕ, ಎಸ್ಪಿ ಲಿಂಬ್ಯಾನಾಯ್ಕ, ವೀರ್ಯಾನಾಯ್ಕ, ತಾಪಂ ಮಾಜಿ ಉಪಾಧ್ಯಕ್ಷ ಮಂಜನಾಯ್ಕ, ರಾಜು, ಸತೀಶ, ಹಾಲೇಶ, ಸಂತೋಷ, ವಿಶ್ವನಾಯ್ಕ, ಎಕಲವ್ಯ, ದೀಳ್ಯಾ ನಾಯ್ಕ, ಬಿ. ಹಾಲೇಶನಾಯ್ಕ, ಕೊರಚರ ಸಮಾಜದ ಹೊನ್ನಪ್ಪ, ಪ್ರಸಾದ್ ಕಾವಡಿ ಸೇರಿದಂತೆ ನೂರಾರು ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.