ಸಾರಾಂಶ
ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ವಿವಿಧೆಡೆಯ ದೇವಸ್ಥಾನಗಳಲ್ಲಿ ನವರಾತ್ರಿಯ 9 ದಿನಗಳ ಕಾಲ ದೇವರುಗಳನ್ನು ಪಟ್ಟಕ್ಕೆ ಕೂರಿಸಲಾಗಿತ್ತು. ವಿಜಯದಶಮಿ ದಿನದಂದು ದೇವರುಗಳನ್ನು ಮೆರವಣಿಗೆ ಮಾಡಿ ಕೊನೆಗೆ ಬನ್ನಿ ಮಂಟಪದ ಬಳಿ ಸಂಪ್ರದಾಯ ದಂತೆ ಸೇರಿದವು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಒಂದನೇ ವಾರ್ಡ್ ನ ವಾಪಸಂದ್ರದಲ್ಲಿರುವ ಶ್ರೀರಂಗನಾಥ ದೇವಾಲಯದ ಬಳಿ ಶನಿವಾರ ವಿಜಯದಶಮಿ ಪ್ರಯುಕ್ತ ಬನ್ನಿ ಮರದ ಕೊಂಬೆಗಳಿಂದ ಅಲಂಕೃತವಾದ ಬಾಳೆಯ ದಿಂಡನ್ನು ಕಡಿದು ದಸರಾ ಹಬ್ಬವನ್ನು ಆಚರಿಸಲಾಯಿತು.ವಾಪಸಂದ್ರದಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಚಪ್ಪರ ಹಾಕಿ ಬನ್ನಿ ಮಂಟಪ ನಿರ್ಮಿಸಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ವಿವಿಧೆಡೆಯ ದೇವಸ್ಥಾನಗಳಲ್ಲಿ ನವರಾತ್ರಿಯ 9 ದಿನಗಳ ಕಾಲ ದೇವರುಗಳನ್ನು ಪಟ್ಟಕ್ಕೆ ಕೂರಿಸಲಾಗಿತ್ತು. ವಿಜಯದಶಮಿ ದಿನದಂದು ದೇವರುಗಳನ್ನು ಮೆರವಣಿಗೆ ಮಾಡಿ ಕೊನೆಗೆ ಬನ್ನಿ ಮಂಟಪದ ಬಳಿ ಸಂಪ್ರದಾಯ ದಂತೆ ಸೇರಿದವು.
ತಹಸೀಲ್ದಾರ್ ಅನಿಲ್ ರವರು ಪತ್ನಿ ಮತ್ತು ಪುತ್ರಿ ಸಮೇತರಾಗಿ ಬನ್ನಿ ಮಂಟಪದ ಬಳಿ ಸಾಂಪ್ರದಾಯಿಕ ಉಡುಗೆಯಲ್ಲಿ ಮೈಸೂರು ಪೇಟ ಧರಿಸಿ ಆಗಮಿಸಿ, ನಾಡಿನ ಜನತೆಗೆ ಒಳಿತಾಗಲಿ, ಮಳೆ ಬೆಳೆ ಸಂಮೃದ್ದವಾಗಿ, ಜಿಲ್ಲೆಗೆ ಬಂದಿರುವ ಬರ ದೂರವಾಗಲಿ ಎಂದು ಪ್ರಾರ್ಥಿಸಿ ಬನ್ನಿ ಮರದ ಪೂಜೆಯನ್ನು ನೆರವೇರಿಸಿದರು.ಈವೇಳೆ ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಸಹ ಪೂಜೆಯಲ್ಲಿ ಪಾಲ್ಗೊಂಡರು. ಪೂಜೆಯ ನಂತರ ಬನ್ನಿ ಮರಕ್ಕೆ ಬಿಲ್ಲಿಗೆ ಹದೆಯೇರಿಸಿ ಬಾಣವನ್ನು ಬಿಟ್ಟರು. ನಂತರ ಬನ್ನಿ ಮರವನ್ನು ಕಡಿದರು. ಈ ಹಿಂದೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ನಂತರ ಮರದ ಕೊಂಬೆಗಳನ್ನು ಕಡಿಯಲಾಗುತ್ತಿತ್ತು. ಆದರೆ, ಈಗ ಬನ್ನಿ ಮರವನ್ನು ಕಡಿಯುವುದಿಲ್ಲ. ಬದಲಾಗಿ ಬನ್ನಿ ಎಲೆಗಳನ್ನು ಒಳಗೊಂಡ ಕೊಂಬೆಗಳಿಂದ ಅಲಂಕರಿಸಿರುವ ಬನ್ನಿ ಮರದ ಕೊಂಬೆ ಕಡಿಯಲಾಗುತ್ತದೆ.
ಬನ್ನಿಗಾಗಿ ಜನರ ನೂಕುನುಗ್ಗಲುಈ ಬನ್ನಿ ಎಲೆಗಳಿರುವ ಕೊಂಬೆಗಳನ್ನು ಕಡಿದ ನಂತರ ಮರದ ಎಲೆಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ವಿಜಯ ನಮ್ಮದಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹಾಗಾಗಿ ತಹಶೀಲ್ದಾರ್ ಬನ್ನಿ ಕೊಂಬೆಗಳಿರುವ ದಿಂಡನ್ನು ಕತ್ತರಿಸಿದ ನಂತರ ಅನೇಕ ಭಕ್ತರು ಬನ್ನಿ ಎಲೆಯನ್ನು ಕೀಳಲು ಮುಂದಾದರು. ಈ ವೇಳೆ ನೂಕುನುಗ್ಗಲು ಉಂಟಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.