ಸಾರಾಂಶ
ಚಂದ್ರಶೇಖರ ಸ್ವಾಮೀಜಿಗಳು ಗವಿಮಠದ ಪೀಠಾಧ್ಯಕ್ಷರಾಗಿ ಶ್ರೀಮಠವನ್ನು ಸಮರ್ಥವಾಗಿ ವೈಚಾರಿಕ ನೆಲೆಗಟ್ಟಿನ ಆಧಾರದ ಮೇಲೆ ಶರಣರ ಶ್ರದ್ಧಾ ಕೇಂದ್ರವನ್ನಾಗಿ ಮುನ್ನಡೆಸಿದ್ದಾರೆ. ಸ್ವತಂತ್ರ ಸಿದ್ಧಲಿಂಗೇಶ್ವರರು ಜೀವಂತವಾಗಿ ಸಮಾಧಿಯಾಗಿರುವ ಗದ್ದುಗೆಯಿರುವ ಗವಿಮಠವನ್ನು ಬಸವಾದಿ ಶರಣರ ಚಿಂತನೆಗಳು ಹಾಗೂ ಸಂದೇಶಗಳ ಆಧಾರದ ಮೇಲೆ ಮುನ್ನಡೆಸಿ ವಚನಗಳ ಸಾರವನ್ನು ಗ್ರಾಮೀಣ ಜನರಿಗೆ ತಲುಪಿಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಶರಣ ಶ್ರದ್ಧಾ ಕೇಂದ್ರವಾದ ಕಾಪನಹಳ್ಳಿ ಗವಿಮಠದ ಲಿಂಗೈಕ್ಯ ಪೀಠಾಧಿಪತಿ ಚಂದ್ರಶೇಖರ ಸ್ವಾಮೀಜಿಗಳ 15ನೇ ವರ್ಷದ ಸಂಸ್ಮರಣೆ ಶ್ರದ್ಧಾಭಕ್ತಿಯಿಂದ ನಡೆಯಿತು.ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಕೆಂಗೇರಿ ಉಪ ನಗರದ ಏಕದಳ ಬಂಡೆ ಮಠದ ಪೀಠಾಧಿಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲ ಮತ, ಧರ್ಮದವರು ಒಟ್ಟಿಗೆ ಇರಬೇಕು. ತನು, ಮನ, ಧನ ಎರೆದು ಮಠದ ಸಂಸ್ಕೃತಿಯ ಜೊತೆಗೆ ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದರು.
ಚಂದ್ರಶೇಖರ ಸ್ವಾಮೀಜಿಗಳು ಗವಿಮಠದ ಪೀಠಾಧ್ಯಕ್ಷರಾಗಿ ಶ್ರೀಮಠವನ್ನು ಸಮರ್ಥವಾಗಿ ವೈಚಾರಿಕ ನೆಲೆಗಟ್ಟಿನ ಆಧಾರದ ಮೇಲೆ ಶರಣರ ಶ್ರದ್ಧಾ ಕೇಂದ್ರವನ್ನಾಗಿ ಮುನ್ನಡೆಸಿದ್ದಾರೆ. ಸ್ವತಂತ್ರ ಸಿದ್ಧಲಿಂಗೇಶ್ವರರು ಜೀವಂತವಾಗಿ ಸಮಾಧಿ ಯಾಗಿರುವ ಗದ್ದುಗೆಯಿರುವ ಗವಿಮಠವನ್ನು ಬಸವಾದಿ ಶರಣರ ಚಿಂತನೆಗಳು ಹಾಗೂ ಸಂದೇಶಗಳ ಆಧಾರದ ಮೇಲೆ ಮುನ್ನಡೆಸಿ ವಚನಗಳ ಸಾರವನ್ನು ಗ್ರಾಮೀಣ ಜನರಿಗೆ ತಲುಪಿಸುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ ಎಂದರು.ಹಾದಿ ತಪ್ಪುತ್ತಿರುವ ಯುವ ಜನಾಂಗವನ್ನು ಸರಿ ದಾರಿಯಲ್ಲಿ ಮುನ್ನಡೆಸಲು ಧರ್ಮದ ದಾರಿಯಲ್ಲಿ ಮುನ್ನಡೆಯುವುದು ಇಂದಿನ ಅಗತ್ಯವಿದೆ. ಈ ದಿಕ್ಕಿನಲ್ಲಿ ಗವಿಮಠದ ಪೀಠಾಧಿಪತಿ ಶ್ರೀ ಚನ್ನವೀರಯ್ಯ ಸ್ವಾಮೀಜಿಗಳು ಗವಿಮಠದ ಭಕ್ತರು ಹಾಗೂ ಗ್ರಾಮೀಣ ಜನರಿಗೆ ಪ್ರವಚನಗಳು ಹಾಗೂ ಧರ್ಮ ಸಂದೇಶದ ಮೂಲಕ ಅರಿವಿನ ಜಾಗೃತಿ ಮೂಡಿಸಿ ಮುನ್ನಡೆಸುತ್ತಿರುವುದು ಸಂತೋಷ ತಂದಿದೆ ಎಂದರು.ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ತೋಟಪ್ಪ ಶೆಟ್ಟಿ, ದಾನಿಗಳಾದ ಗಣಪತಿ ದೇವಸ್ಥಾನ ಚಂದ್ರಶೇಖರ್, ಯುವ ಮುಖಂಡರಾದ ಬಿ.ಎ. ಸುರೇಶ್, ಗದ್ದೆಹೊಸೂರು ಜಗದೀಶ್, ಸೋಮನಾಥ ಪುರದ ಮಹದೇಶ್, ಕಟ್ಟಹಳ್ಳಿ ಪರಮೇಶ್, ಗಂಜಿಗೆರೆ ಮಹೇಶ್, ಬ್ಯಾಂಕ್ ಪರಮೇಶ್ವರ್, ಸಿದ್ಧಲಿಂಗೇಶ್ವರ ಬಂಕ್ ಮಂಜಣ್ಣ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.