ತಾಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಗಳಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಮಾದರಿ ತರಗತಿಗಳನ್ನು ತೆರೆದು ಪೌಷ್ಠಿಕ ಆಹಾರ ಮತ್ತು ಗುಣಮಟ್ಟದ ಶಿಕ್ಷಣ ಪೂರೈಸುತ್ತಿರುವುದು ಶ್ಲಾಘನೀಯ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಹೇಳಿದರು.

ತಾಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳು, ಸ್ಥಳೀಯರು ಹಾಗೂ ಶಾಲಾಡಳಿತ ಸಹಕಾರದಿಂದ ಪ್ರಸಕ್ತ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾ ಡಿದರು.ಪಾಲಕರ ಆಶಯದಂತೆ ಗ್ರಾಮೀಣ ಭಾಗದಲ್ಲೂ ಎಲ್‌ಕೆಜಿ, ಯುಕೆಜಿ ತರಗತಿ ತೆರೆದು ಹೆಜ್ಜೆಯಿಟ್ಟಿರುವ ಮುಗುಳುವಳ್ಳಿ ಶಾಲೆ ಮೆಚ್ಚುವಂತ ಕೆಲಸ. ಎಳೆ ವಯಸ್ಸಿನಲ್ಲಿ ಮಕ್ಕಳನ್ನು ತಿದ್ದುವ ಮಹತ್ತರ ಕಾರ್ಯ ಶಿಕ್ಷಕರ ಮೇಲಿರುವ ಕಾರಣ ಹೆಚ್ಚಿನ ಜವಾಬ್ದಾರಿ ಯನ್ನು ಶಾಲಾಡಳಿತ ವಹಿಸಬೇಕು ಎಂದು ಸೂಚಿಸಿದರು.

ರಾಜ್ಯ ಸರ್ಕಾರ ಕಳೆದ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಕವಾಗಿ ತೆರೆದು ಯಶಸ್ವಿಗೊಂಡಿತು. ಈ ಸಾಲಿನಲ್ಲಿ ತರಗತಿ ತೆರೆಯಲು ಪ್ರಕ್ರಿಯೆಯಲ್ಲಿದ್ದು ಸದ್ಯದಲ್ಲೇ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಗ್ರಾಮೀಣ ಬಡ ಮಕ್ಕಳಿಗೆ ಖಾಸಗಿ ಶಾಲೆಗಳಂತೆ ಎಲ್ಲಾ ಸೌಕರ್ಯ ಒದಗಿಸುವ ಭರವಸೆ ನೀಡಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಮಾತನಾಡಿ, ತಾಲೂಕಿನಲ್ಲಿ ಸುಮಾರು 27 ಶಾಲೆಗಳಲ್ಲಿ ಎಲ್‌ಕೆಜಿ - ಯುಕೆಜಿ ತರಗತಿ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಗೊಳ್ಳಬೇಕಿದೆ. ಅಲ್ಲದೇ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಸರಿದೂಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಸಮಗ್ರ ವಿದ್ಯಾಭ್ಯಾಸ ಪೂರೈಸುತ್ತಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಶೇಖರ್‌ನಾಯ್ಕ ಮಾತನಾಡಿ, ಪ್ರಸ್ತುತ ಶಾಲೆಯಲ್ಲಿ ಎಲ್‌ಕೆಜಿ ತರಗತಿಗೆ 16 ಮತ್ತು ಯುಕೆಜಿಗೆ 17 ಮಕ್ಕಳು ದಾಖಲಾಗಿದ್ದಾರೆ. ಇಬ್ಬರು ಶಿಕ್ಷಕರು, ಓರ್ವ ಆಯಾ ಕೆಲಸಕ್ಕೆ ಹೊರಗುತ್ತಿಗೆಯಲ್ಲಿ ನೇಮಿಸಿ ಕೊಳ್ಳಲಾಗಿದ್ದು ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ಶೂ, ಲೇಖನಿ, ನೋಟ್‌ಪುಸ್ತಕ ಹಾಗೂ ಶಿಕ್ಷಕರಿಗೆ ವೇತನದ ಸಂಪೂರ್ಣ ವೆಚ್ಚವನ್ನು ದಾನಿ, ಸ್ಥಳೀಯರು ಹಾಗೂ ಶಾಲಾಡಳಿತ ವಹಿಸಿಕೊಂಡಿದೆ ಎಂದು ಹೇಳಿದರು.

ಅಂಬಳೆ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರೂಪ, ಗ್ರಾ.ಪಂ ಮಾಜಿ ಅಧ್ಯಕ್ಷ ಎಂ.ಡಿ.ರವಿ, ಪಿಡಿಓ ಸುಮಾ, ಅಕ್ಷರ ದಾಸೋಹ ಸಂಯೋಜಕ ನೀಲಕಂಠಪ್ಪ ಉಪಸ್ಥಿತರಿದ್ದರು. 5 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕಗಳನ್ನು ವಿತರಿಸಲಾಯಿತು. ಶಾಸಕಿ ನಯನಾ ಮೋಟಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್‌, ಪಿಡಿಓ ಸುಮಾ ಇದ್ದರು.