ಕಾರವಾರ: ರಾಜ್ಯದಲ್ಲಿನ ಅಲ್ಪಸಂಖ್ಯಾತರ ಕುಂದು-ಕೊರತೆ ಅಲಿಸಿ, ಈ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ, ಅಧಿಕಾರಿಗಳನ್ನು ಆಯೋಗಕ್ಕೆ ಕರೆಸಿ ನಿರ್ದೇಶನ ನೀಡುವ ಮತ್ತು ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ರಾಜ್ಯದ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ಧವಾಗಿದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದರು.

ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಅಲ್ಪಸಂಖ್ಯಾತರ ಕುಂದು-ಕೊರತೆಗಳ ಕುರಿತು ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಬುದ್ಧ, ಜೈನ್, ಸಿಖ್, ಪಾರ್ಸಿ, ಸಮುದಾಯದ ನಾಗರಿಕರ ಅಭಿವೃದ್ಧಿಗಾಗಿ ಆಯೋಗ ರಚಿಸಲಾಗಿದೆ. ಆಯೋಗವು ಈ ಸಮುದಾಯಗಳಿಗೆ ಉತ್ತಮ ವಿದ್ಯಾಭ್ಯಾಸ, ಉತ್ತಮ ಶಾಲಾ-ಕಾಲೇಜುಗಳು, ಉದ್ಯೋಗಾವಕಾಶ, ತರಬೇತಿ ನೀಡುವ ಮೂಲಕ ಶಕ್ತಿ ತುಂಬುತ್ತಿದ್ದು, ಆಯೋಗದ ವೆಬ್‌ಸೈಟ್ www.kmc.gov.inನಲ್ಲಿ ಉದ್ಯೋಗ ಪೋರ್ಟಲ್ ಮೂಲಕ ನೇವಿ, ಪೊಲೀಸ್, ಎಸ್‌ಎಸ್‌ಸಿ, ರೈಲ್ವೆ ಸೇರಿದಂತೆ ಎಲ್ಲ ಸರ್ಕಾರಿ ಇಲಾಖೆಗಳ ಉದ್ಯೋಗದ ನೋಟಿಫಿಕೇಶನ್‌ನ್ನು 15 ದಿನಗಳಿಗೊಮ್ಮೆ ಆಪ್‌ಲೋಡ್ ಮಾಡಲಾಗುತ್ತಿದೆ ಎಂದರು.

ಸಮುದಾಯದ ನಿರುದ್ಯೋಗಿ ಯುವಕರು ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ, ಅವರ ವಾಟ್ಸ್‌ಆ್ಯಪ್‌ ಅಥವಾ ಇಮೇಲ್‌ಗೆ ನೇರವಾಗಿ ಜಾಬ್ ನೋಟಿಫಿಕೇಶನ್‌ ಕಳಿಸಲಾಗುತ್ತದೆ. ಪರೀಕ್ಷೆ ಬರೆಯುವ ಯುವಕರಿಗೆ ಆಯೋಗದ ವತಿಯಿಂದ ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ 20 ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೆ ಅವರನ್ನು ಬೆಂಗಳೂರಿನ ‘ಹಜ್ ಭವನ್''''''''ದಲ್ಲಿ ಉಚಿತ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.

ಸಿಡ್ಯಾಕ್‌ ಸಂಸ್ಥೆಯೊಂದಿಗೆ ಆಯೋಗವು ಎಂಜಿನಿಯರಿಂಗ್ ಓದುತ್ತಿರುವ ಅಥವಾ ಮುಗಿಸಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯುರಿಟಿ, ಡ್ರೋನ್ ಟೆಕ್ನಾಲಜಿ ಮತ್ತು ಸೂಪರ್ ಕಂಪ್ಯೂಟರ್ಸ್‌ಗಳ ಬಗ್ಗೆ ಮೂರು ತಿಂಗಳ ವಿಶೇಷ ಟ್ರೈನಿಂಗ್ ನೀಡಲು ಯೋಜನೆ ರೂಪಿಸಲಾಗಿದೆ. ತರಬೇತಿ ನಂತರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುವುದು. ಇದರಿಂದ ಉತ್ತಮ ಕಂಪನಿಗಳಲ್ಲಿ ಸುಲಭವಾಗಿ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.

ಸಮುದಾಯದ ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ದೊರಕುವಂತೆ ಮಾಡುವುದು ಎಲ್ಲ ಪೋಷಕರ ಕರ್ತವ್ಯ. 4 ವರ್ಷ ತುಂಬಿದ ಮಗುವನ್ನು ಅಂಗನವಾಡಿ ಅಥವಾ ನರ್ಸರಿಗೆ ಸೇರಿಸಬೇಕು. 6 ವರ್ಷ ಮಗುವನ್ನು ಪ್ರಾಥಮಿಕ ಶಾಲೆಗೆ ಸೇರಿಸಬೇಕು. ಮಗು ಕನಿಷ್ಠ 10ನೇ ತರಗತಿ ವರೆಗಾದರೂ ಕಡ್ಡಾಯವಾಗಿ ಓದಬೇಕು. ಇದನ್ನು ಖಾತ್ರಿಪಡಿಸುವುದು ಇಡೀ ಸಮಾಜ ಹಾಗೂ ಸಮುದಾಯದ ಮುಖಂಡರ ಜವಾಬ್ದಾರಿಯಾಗಿದೆ ಎಂದರು.


ಭಟ್ಕಳದ ಬಂದರು ರಸ್ತೆಯಲ್ಲಿರುವ ಗೂಡಂಗಡಿಗಳಲ್ಲಿ ಅನೈತಿಕ ಚಟುವಟಿಕೆಯಾದ ಮಟ್ಕಾ, ಮದ್ಯ, ಇಸ್ಪೀಟ್ ತಂಬಾಕು, ಮಾರಾಟ ಮಾಡುತ್ತಿದ್ದು, ಇದನ್ನು ತಡೆಯುವಂತೆ ಹಾಗೂ ಚರ್ಚ್, ಮಸೀದಿ, ದೇವಸ್ಥಾನ, ಸ್ಮಶಾನ, ರಸ್ತೆ, ಚರಂಡಿ, ಶಾಲೆ, ಅಂಗನವಾಡಿಗಳ ಅಭಿವೃದ್ಧಿ ಸೇರಿದಂತೆ ವಿವಿಧ ಅಹವಾಲುಗಳನ್ನು ಅಲ್ಪ ಸಂಖ್ಯಾತ ಸಮುದಾಯದ ಸಾರ್ವಜನಿಕರು ಸಲ್ಲಿಸಿದರು.

ವಿಶೇಷ ಕರ್ತವ್ಯಾಧಿಕಾರಿ ಮುಜಿಬುಲ್ಲಾ ಜಫಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸತೀಶ್ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಅಲ್ಪಸಂಖ್ಯಾತರು ಇದ್ದರು.