ದಕ್ಷಿಣ ಕನ್ನಡ ಜಿಲ್ಲೆ ವಿಕಾಸಕ್ಕೆ ಬದ್ಧ: ಕ್ಯಾಪ್ಟನ್ ಬ್ರಿಜೇಶ್ ಚೌಟ

| Published : Apr 23 2024, 12:50 AM IST

ದಕ್ಷಿಣ ಕನ್ನಡ ಜಿಲ್ಲೆ ವಿಕಾಸಕ್ಕೆ ಬದ್ಧ: ಕ್ಯಾಪ್ಟನ್ ಬ್ರಿಜೇಶ್ ಚೌಟ
Share this Article
  • FB
  • TW
  • Linkdin
  • Email

ಸಾರಾಂಶ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಪ್ರಬುದ್ಧರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದ.ಕ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪದ ಜತೆಗೆ ದ‌.ಕ. ಜಿಲ್ಲೆಯನ್ನು ವಿಕಸಿತ ಜಿಲ್ಲೆಯಾಗಿ ಬದಲಾವಣೆ ಮಾಡುವ ಕನಸು ಕಂಡಿರುವ ನನಗೆ ಜಿಲ್ಲೆಯ ಜನತೆ ಬೆಂಬಲ ‌ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನರೇಂದ್ರ ಮೋದಿ ಅವರ ವಿಕಸಿತ ಭಾರತದ ಸಂಕಲ್ಪದ ಜತೆಗೆ ದ‌.ಕ. ಜಿಲ್ಲೆಯನ್ನು ವಿಕಸಿತ ಜಿಲ್ಲೆಯಾಗಿ ಬದಲಾವಣೆ ಮಾಡುವ ಕನಸು ಕಂಡಿರುವ ನನಗೆ ಜಿಲ್ಲೆಯ ಜನತೆ ಬೆಂಬಲ ‌ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಪ್ರಬುದ್ಧರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಂಟ್ವಾಳ ಕ್ಷೇತ್ರದಲ್ಲಿ ಮತದಾರರನ್ನು ಬಿಜೆಪಿಯವರನ್ನಾಗಿ ಮಾರ್ಪಾಡು ಮಾಡುವ ಶಕ್ತಿ ಪ್ರಬುದ್ಧರಿಗೆ ಇದೆ ಎಂಬ ವಿಶ್ವಾಸವಿದ್ದು, ಚುನಾವಣೆಯಲ್ಲಿ ಬದಲಾವಣೆಗೆ ಪ್ರಬುದ್ಧರ ಪಾತ್ರ ಮಹತ್ತರವಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಬದ್ಧನಿದ್ದು, ಇದು ನನ್ನ ಅಜೆಂಡಾವಾಗಿದೆ ಎಂದು ತಿಳಿಸಿದರು.

ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸುವ ಸಂಘಟನೆ ಮತ್ತು ವ್ಯಕ್ತಿಗಳನ್ನು ಮಟ್ಟ ಹಾಕಲು ಕಾನೂನಡಿ ವ್ಯವಸ್ಥೆ ಮಾಡುತ್ತೇನೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಕಾರಣೀಕರ್ತರಾದ ವ್ಯಕ್ತಿಗಳನ್ನು ಹಾಗೂ ಪಿ‌ಎಫ್ಐ ಸಂಘಟನೆಯನ್ನು ಬ್ಯಾನ್ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.

ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರವಾದ ಚುನಾವಣೆಯಾಗಿದ್ದು, ಮೋದಿ ಆಡಳಿತದ ಅವಧಿಯಲ್ಲಿ ಆಗಿರುವ ಉತ್ತಮ ಯೋಜನೆಗಳನ್ನು ಜನರಿಗೆ ತಿಳಿಸಿ, ಜನಾಭಿಪ್ರಾಯ ಮೂಡಿಸುವಲ್ಲಿ ಸುಸಂಸ್ಕೃತ ಸಮಾಜದ ಜನರ ದೊಡ್ಡ ಪಾತ್ರವಿದೆ. ದೇಶದ ನಾಗರಿಕತೆ, ಪರಂಪರೆಯನ್ನು ಮುಂದಿಟ್ಟುಕೊಂಡು, ತುಷ್ಟೀಕರಣ ಮಾಡದೆ ಆಡಳಿತ ಮಾಡಿದ್ದಲ್ಲದೆ, ರಾಜಕೀಯದಲ್ಲಿ ಹೊಸ ಭಾಷ್ಯವನ್ನು ಬರೆದವರು ನರೇಂದ್ರ ಮೋದಿ ಎಂದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ಮುಂದಿನ ಅವಧಿಯಲ್ಲಿ ಬಹಳಷ್ಟು ದೊಡ್ಡ ಯೋಜನೆಗಳನ್ನು ಜಾರಿಮಾಡಲು 400ಕ್ಕೂ ಅಧಿಕ ಸ್ಥಾನಗಳ ಅಗತ್ಯವಿದ್ದು, ಮೋದಿ ಕಂಡಿರುವ ಕನಸನ್ನು ಕೈಗೂಡಿಸಲು ಪ್ರತಿಯೊಬ್ಬರು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಚುನಾವಣಾ ಪ್ರಭಾರಿಗಳಾದ ಜಗದೀಶ್ ಶೇಣವ, ಪೂಜಾ ಪೈ ಜಿಲ್ಲಾ ಕಾರ್ಯದರ್ಶಿ, ನಿರ್ವಹಣಾ ಸಮಿತಿ ಸಂಚಾಲಕ ದೇವಪ್ಪ ಪೂಜಾರಿ ಇದ್ದರು...........

ಕುಲಾಲ, ವಿಶ್ವಕರ್ಮ ಸಮುದಾಯದವರೊಂದಿಗೆ ಕ್ಯಾ. ಚೌಟ ಸಮಾಲೋಚನೆ

ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಬಂಟ್ವಾಳದಲ್ಲಿ ಕುಲಾಲ ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರ ಜತೆ ಸಂವಾದ ನಡೆಸಿದರು.

ಬಳಿಕ ಮಾತನಾಡಿದ ಅವರು, ರಾಷ್ಟ್ರೀಯತೆ ಮತ್ತು ಹಿಂದೂ ವಿಚಾರ ಧಾರೆಗಳಿಗೆ ಗೌರವ ತರುವ ಜತೆಗೆ ಪ್ರಮಾಣಿಕವಾಗಿ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಕಾರ್ಯಕರ್ತರ ಗೆಲುವು ಪಕ್ಷದ ಗೆಲುವಾಗಲಿದೆ. ಹಾಗಾಗಿ ಪ್ರತಿಯೊಂದು ಬೂತ್ ಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಬೂತ್‌ನಲ್ಲಿ ಗೆಲುವು ಸಾಧಿಸಲು ಪ್ರಯತ್ನ ಮಾಡಿ ಎಂದು ‌ಮನವಿ ಮಾಡಿಕೊಂಡರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿ ಜಗದೀಶ್ ಶೇಣವ ಇದ್ದರು..................ಕಾರ್ಯಕರ್ತನ ಮನೆಗೆ ಭೇಟಿಕ್ಯಾ.ಬ್ರಿಜೇಶ್‌ ಚೌಟ ಅವರು ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನಕ್ಕೆ ಬೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಇತ್ತೀಚೆಗೆ ಅನಾರೋಗ್ಯದ ಕಾರಣದಿಂದಾಗಿ ಸಾವನ್ನಪ್ಪಿದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು ಅವರ ಮನೆಗೆ ಬೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು..............................

‘ಸೈನಿಕ’ನ ಪರ ಮಿಡಿದ ನಿವೃತ್ತ ಯೋಧನ ಮನ

ಮಂಗಳೂರು: 1971ರಲ್ಲಿ ಭಾರತ- ಬಾಂಗ್ಲಾ ಯುದ್ಧದಲ್ಲಿ ಪಾಲ್ಗೊಂಡಿದ್ದ ವಾಯುಪಡೆಯ ಯೋಧ ದಿವಾಕರ್‌ ಅವರು ಕ್ಯಾ. ಬ್ರಿಜೇಶ್ ಚೌಟ ಅವರಿಗೆ ತನ್ನ ಒಂದು ತಿಂಗಳ ಪಿಂಚಣಿ ದುಡ್ಡನ್ನು ದಾನ ನೀಡಿ ಚುನಾವಣೆ ವೆಚ್ಚಕ್ಕೆ ನೆರವಾಗಿದ್ದಾರೆ.

ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿ ಸೇನೆಯಲ್ಲಿ ದುಡಿದ ವ್ಯಕ್ತಿಯೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದ್ದು ನಮಗೆಲ್ಲ ಹೆಮ್ಮೆಯ ವಿಷಯ. ನನ್ನದೂ ಕಿಂಚಿತ್ತು ಸಹಾಯ ಇರಲೆಂದು ತಿಂಗಳಿಗೆ ಬರುವ ಪಿಂಚಣಿ ಮೊತ್ತವನ್ನು ನೀಡುತ್ತಿದ್ದೇನೆ ಎಂದಿದ್ದಾರೆ.

ಸೇನೆಯಲ್ಲಿದ್ದವರು ದೇಶದ ಬಗ್ಗೆ ಕಾಳಜಿ ಇದ್ದವರು. ಇಂಥವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಕಡಿಮೆಯಾಗಬಹುದೆಂಬ ವಿಶ್ವಾಸ ಇದೆ. ಜನಸಾಮಾನ್ಯರ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುವರೆಂಬ ವಿಶ್ವಾಸ ಇದೆ ಎಂದು ಹೇಳಿದರು.