ರೈತರ ಹಿತಾಸಕ್ತಿ ಕಾಪಾಡುವ ಜತೆಗೆ ವರ್ತಕರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ.

ಹಗರಿಬೊಮ್ಮನಹಳ್ಳಿ: ರೈತರ ಹಿತಾಸಕ್ತಿ ಕಾಪಾಡುವ ಜತೆಗೆ ವರ್ತಕರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ವರ್ತಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಜತೆಗೆ ವರ್ತಕರ ನಡುವೆ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ ಎಂದು ಆಹಾರ ಧಾನ್ಯ ವರ್ತಕರ ಸಂಘದ ನೂತನ ಅಧ್ಯಕ್ಷ ಅಂಬಾಡಿ ಮಹೇಶ್ ಅಭಿಪ್ರಾಯಪಟ್ಟರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಆಹಾರ ಧಾನ್ಯ ವರ್ತಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೈತರ ಹಿತ ಕಾಯುವಲ್ಲಿ ವರ್ತಕರ ಪಾತ್ರ ಗಣನೀಯ. ರೈತರಿಗೆ ಮೋಸ ಮಾಡದೇ ಅವರಲ್ಲಿ ವಿಶ್ವಾಸ ಮೂಡಿಸುವ ಜವಾಬ್ದಾರಿಯಿಂದ ಸಂಘ ವಿಮುಖವಾಗುವುದಿಲ್ಲ. ಸಂಘದ ಸದಸ್ಯರ ಸಹಕಾರದೊಂದಿಗೆ ನನ್ನ ಅವಧಿಯಲ್ಲಿ ರೈತರು, ವರ್ತಕರ ಹಿತಾಸಕ್ತಿಗೆ ಬದ್ಧನಾಗಿರುತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್‌ನ ಹಿರಿಯ ವರ್ತಕ ಅಕ್ಕಿ ಶಿವಣ್ಣ, ಆಹಾರ ಧಾನ್ಯ ವರ್ತಕರ ಸಂಘ ಮತ್ತು ಚೇಂಬರ್ ಆಫ್ ಕಾಮರ್ಸ್‌ ಜೊತೆ ಜೊತೆಯಾಗಿ ಸಾಗಬೇಕು. ಎರಡೂ ಸಂಘಟನೆಗಳು ರೈತರು, ವರ್ತಕರ ನಡುವೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವಲ್ಲಿ ಸಮನ್ವಯ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಸಂಘದ ನಿಕಟಪೂರ್ವ ಉಪಾಧ್ಯಕ್ಷ ಛತ್ರದಳ್ಳಿ ಬಸವರಾಜ್, ಬಾದಾಮಿ ಗುರುಬಸವರಾಜ್ ಮಾತನಾಡಿದರು. ಇದೇ ವೇಳೆ ನಿಕಟಪೂರ್ವ ಅಧ್ಯಕ್ಷ ಬಳ್ಳಾರಿ ಶ್ರೀಧರ್ ಶೆಟ್ರು ನೂತನ ಅಧ್ಯಕ್ಷ ಅಂಬಾಡಿ ಮಹೇಶ್ ಅವರಿಗೆ ಗುಲಾಬಿ ಹೂವು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಸಮಾರಂಭದಲ್ಲಿ ವರ್ತಕರಾದ ಗಂಗಾವತಿ ಸುದರ್ಶನ್ ಸೇರಿದಂತೆ ಹಲವರನ್ನು ಗೌರವಿಸಲಾಯಿತು. ಉಪಾಧ್ಯಕ್ಷ ಒಂಟಿಗೋಡಿ ಚನ್ನಬಸಪ್ಪ, ಖಜಾಂಚಿ ಚಿಂತ್ರಪಳ್ಳಿ ಪ್ರಕಾಶ್, ಕಾರ್ಯದರ್ಶಿ ಎನ್.ಹನುಮರೆಡ್ಡಿ, ಎಪಿಎಂಸಿ ಕಾರ್ಯದರ್ಶಿ ಎಂ.ಶೈಲಜಾ, ಬಂಡಿಹಳ್ಳಿ ರಾಮಣ್ಣ, ಪ್ರಕಾಶ್ ಗೌಡ, ಶಂಭುನಾಥ್ ಬ್ಯಾಲಾಳು, ಬಾದಾಮಿ ರಾಜಣ್ಣ, ಬಾದಾಮಿ ಪ್ರಭು, ಉಲವತ್ತಿ ಬಸಣ್ಣ, ಪೋತುಗುಳಿ ನಾಗರಾಜ್, ಕೆ.ದೇವೇಂದ್ರಪ್ಪ, ವರ್ತಕರು, ಎಪಿಎಂಸಿ ಹಮಾಲರು ಇದ್ದರು.

ಶಾರದಾ ಮಂಜುನಾಥ್ ಪ್ರಾರ್ಥಿಸಿದರು. ಗದ್ದಿಕೇರಿ ದೇವರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು.

ಆಹಾರ ಧಾನ್ಯ ವರ್ತಕರ ಸಂಘದ ನಿಕಟಪೂರ್ವ ಅಧ್ಯಕ್ಷ ಬಳ್ಳಾರಿ ಶ್ರೀಧರ್‌ಶೆಟ್ಟಿ ನೂತನ ಅಧ್ಯಕ್ಷ ಅಂಬಾಡಿ ಮಹೇಶ್ ಅವರಿಗೆ ಗುಲಾಬಿ ಹೂವು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.