ಶನಿವಾರ ಪುತ್ತೂರಿನ ಪುರುಷರಕಟ್ಟೆಯಲ್ಲಿ ಚೂರಿ ತೋರಿಸಿ ಬೆದರಿಸಿದ ಆರೋಪದಲ್ಲಿ ಇತ್ತಂಡ ದೂರು ದಾಖಲಾದ ಪ್ರಕರಣ ಈಗ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ ಆಗುತ್ತಿದೆ.

ಪುತ್ತೂರು: ಶನಿವಾರ ಪುತ್ತೂರಿನ ಪುರುಷರಕಟ್ಟೆಯಲ್ಲಿ ಚೂರಿ ತೋರಿಸಿ ಬೆದರಿಸಿದ ಆರೋಪದಲ್ಲಿ ಇತ್ತಂಡ ದೂರು ದಾಖಲಾದ ಪ್ರಕರಣ ಈಗ ರಾಜಕೀಯ ಆರೋಪ, ಪ್ರತ್ಯಾರೋಪಗಳಿಗೆ ವೇದಿಕೆ ಆಗುತ್ತಿದೆ.

ದೂರು ದಾಖಲಾಗಿರುವ ಪುರುಷರಕಟ್ಟೆಯ ಯುವತಿಯ ಮನೆ, ಯುವಕರ ಮನೆಗೆ ಹಾಗೂ ಘಟನೆ ನಡೆದ ಸ್ಥಳದ ಪ್ರತ್ಯಕ್ಷದರ್ಶಿ ಅಂಗಡಿ ಮಾಲಕರ ಬಳಿಗೆ ಶನಿವಾರ ಶಾಸಕ ಅಶೋಕ್ ರೈ ಭೇಟಿ ನೀಡಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಶಾಸಕರು ಈ ಪ್ರಕರಣಕ್ಕೆ ಕೋಮುವಾದ ಬಣ್ಣ ಹಚ್ಚುವ ಕೆಲಸ ರಾಜಕೀಯ ವಲಯದಲ್ಲಿ ನಡೆದಿದೆ. ನಾನು ಇಬ್ಬರ ಮನೆಗೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇನೆ. ಘಟನೆ ನಡೆದ ಸ್ಥಳದ ಅಂಗಡಿಯವರಲ್ಲಿಯೂ ಮಾತನಾಡಿದ್ದೇನೆ. ಹುಡುಗಿಯ ತಂದೆ ತಾಯಿ, ಹುಡುಗರ ಜೊತೆಗೂ ಮಾತುಕತೆ ಮಾಡಿದ್ದೇನೆ. ಎಲ್ಲರಿಂದಲೂ ಘಟನೆಯ ಬಗ್ಗೆ ವಿವರ ಪಡೆದುಕೊಂಡಿದ್ದೇನೆ. ಅದೊಂದು ಕಾಕತಾಳೀಯ ಆಗಿದ್ದು, ಅಪಾರ್ಥದಿಂದ ಈ ಘಟನೆ ಉಂಟಾಗಿದೆ. ಇಂತಹ ವಿಚಾರ ಸಂಭವಿಸುವುದು ಸಹಜ. ಪೊಲೀಸರು ಅದರ ಸಾಧಕ ಭಾದಕ ನೋಡಿಕೊಂಡು ಕೇಸು ದಾಖಲಿಸಿಕೊಂಡಿದ್ದಾರೆ. ಇದರಲ್ಲಿ ಇನ್ನೇನೂ ಕಂಡು ಬಂದಿಲ್ಲ. ಇದರಲ್ಲಿ ವಿಶೇಷತೆಯೇನೂ ಇಲ್ಲ ಎಂದರು.

ಆದರೆ ಕೆಲವರು ಇದನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಇವರು ಈ ಹಿಂದೆಯೂ ಹೆಣ ಇಟ್ಟುಕೊಂಡು ಚುನಾವಣೆ ಮಾಡಿರುವವರು. ಪುತ್ತೂರಿನಲ್ಲಿಯೂ ಈ ಪ್ರಯತ್ನ ನಡೆಸುತ್ತಿದ್ದಾರೆ. ಹೆಣದ ಮೇಲೆ ರಾಜಕೀಯ ಬೇಡ ಅಭಿವೃದ್ಧಿಯ ರಾಜಕೀಯ ಮಾಡಿ, ಮಹಾಲಿಂಗೇಶ್ವರ ದೇವರಲ್ಲಿ ಆಣೆ ಮಾಡಿ ಹೇಳ್ತೆನೆ ಈ ಪ್ರಕರಣದಲ್ಲಿ ನಾನು ಯಾವುದೇ ಠಾಣೆಗೆ ಪೋನ್ ಮಾಡಿಲ್ಲ ಎಂದರು.

ಸಂಸದ ಹೇಳಿಕೆ: ದಕ್ಷಿಣ ಕನ್ನಡ ಜಿಲೆಯ ಜನರು ತಲೆತಗ್ಗಿಸುವ ವಾತಾವರಣ ಪುತ್ತೂರಿನಲ್ಲಿ ನಡೆದಿದೆ. ಪೊಲೀಸರು ಕಾಂಗ್ರೆಸ್ ಪಕ್ಷದ ಪ್ರೇರಣೆಯಿಂದ ಒಂದು ರೀತಿಯಲ್ಲಿ ಸಮಾಜದಲ್ಲಿ ಭಯ ಸೃಷ್ಟಿಸುವ ವಾತಾವಣ ನಿರ್ಮಾಣ ಮಾಡುತ್ತಿದ್ದಾರೆ. ಈ ಕುರಿತು ಶಾಸಕರು, ರಾಜ್ಯ ಕಾಂಗ್ರೆಸ್ ಸರಕಾರ ಸ್ಪಷ್ಟವಾದ ಉತ್ತರ ಕೊಡಬೇಕು ಎಂದು ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.

ಬುಧವಾರ ಚೂರಿ ತೋರಿಸಿ ಭಯಪಡಿಸಿದ ಆರೋಪಕ್ಕೆ ಸಂಬಂಧಿಸಿ ದೂರು ನೀಡಿದ ಪುತ್ತೂರು ತಾಲೂಕಿನ ಪುರುಷರಕಟ್ಟೆ ಯುವತಿ ಮನೆಗೆ ಶುಕ್ರವಾರ ರಾತ್ರಿ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ತುಂಬುವ ಮಾತುಗಳನ್ನಾಡಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಬಿಜೆಪಿ ಕಾರ್ಯಕರ್ತ ಸಾಂತಪ್ಪ ಗೌಡರ ಮಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸುವ ಮೂಲಕ ಮಹಿಳೆಯರಿಗೆ ಪೊಲೀಸರ ಮೇಲೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ಸಮಾಜದಲ್ಲಿ ಭಯ ಸೃಷ್ಟಿಸುವ ವಾತಾವರಣ ನಿರ್ಮಾಣ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರಾಗಿರುವ ಸಾಂತಪ್ಪ ಗೌಡರನ್ನು ಭಯಪಡಿಸುವ ವಾತಾವರಣ ನಡೆಯುತ್ತಿದೆ. ಯುವತಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಈ ರೀತಿಯ ಪುಂಡ ಪೋಕರಿಯ ಮೂಲಕ ಮಾಡುವ ಪ್ರಯತ್ನ ಮಾಡಿದರೆ ಬಿಜೆಪಿ ಯಾವತ್ತೂ ಸುಮ್ಮನಿರುವುದಿಲ್ಲ. ಕುಟುಂಬಕ್ಕೆ ಧೈರ್ಯ ಕೊಡುವ ಕೆಲಸ ಮಾಡಿದ್ದೇವೆ. ಬಿಜೆಪಿ ಜಿಲ್ಲೆಯ ತಂಡವಾಗಿ ಕೂತು ಯೋಚನೆ ಮಾಡಿ ಯಾವ ರೀತಿ ಹೋರಾಟ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸಿ ಕುಟುಂಬಕ್ಕೆ ನ್ಯಾಯ ಕೊಡಿಸುತ್ತೇವೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪುತ್ತೂರಿನಲ್ಲಿ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣ ಮಾಡುವಂತಹುದನ್ನು ಪೊಲೀಸ್ ಇಲಾಖೆ ಮತ್ತು ಕರ್ನಾಟಕದ ಸರ್ಕಾರ ಮಾಡುತ್ತಿದೆ. ಸಾಂತಪ್ಪ ಗೌಡರ ಮಗಳಿಗೆ ಆಗಿರುವ ಘಟನೆ, ಅದರ ಜೊತೆಗೆ ಬೇರೆ ಎರಡು ಘಟನೆ ನೋಡಿದಾಗ ಒಟ್ಟು ಪುತ್ತೂರಿನಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವ ಕೆಲಸ ಕಾಂಗ್ರೆಸ್ ಸರಕಾರ ಪೊಲೀಸ್ ಇಲಾಖೆಯ ಮೂಲಕ ಮಾಡುತ್ತಿದೆ ಎಂದು ದೂರಿದರು.ಹಿಂದುತ್ವದ ವಿಚಾರವಾಗಿ ಹೋರಾಟ ಮಾಡುವ ಯಾರನ್ನೂ ಕೈ ಬಿಡುವ ಪ್ರಶ್ನೆ ಬಿಜೆಪಿಗೆ ಇಲ್ಲ. ನಾವು ಯಾರಿಗೂ ಹೇಳಬೇಕು, ಯಾರಲ್ಲಿ ಮಾತನಾಡಬೇಕು. ಯಾರ ಗಮನಕ್ಕೆ ತರಬೇಕು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತೇವೆ. ಬಿಜೆಪಿ ಈ ಕುಟುಂಬದ ಜೊತೆ ಇರುತ್ತದೆ ಎಂದು ಹೇಳಿದರು.