ಶೈಕ್ಷಣಿಕ ಪ್ರಗತಿಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯ

| Published : May 13 2024, 12:00 AM IST

ಶೈಕ್ಷಣಿಕ ಪ್ರಗತಿಯಿಂದ ಸಮುದಾಯದ ಅಭಿವೃದ್ಧಿ ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಕುರುಬ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ, ಸಮುದಾಯ ಜಾಗೃತಿ, ಸಂಸ್ಕೃತಿ ಪರಂಪರೆಗಳ ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಸಂರಕ್ಷಿಸುವುದು ಅಗತ್ಯ ಎಂದು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ದೊಡ್ಡಬಳ್ಳಾಪುರ: ಕುರುಬ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ, ಸಮುದಾಯ ಜಾಗೃತಿ, ಸಂಸ್ಕೃತಿ ಪರಂಪರೆಗಳ ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಸಂರಕ್ಷಿಸುವುದು ಅಗತ್ಯ ಎಂದು ಹೊಸದುರ್ಗ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಾಲುಮತ ಸಂಸ್ಕೃತಿ ವೈಭವ ಮತ್ತು ಪರಂಪರೆಗಳಿಗೆ ಅನುಸಾರವಾಗಿ ಕುಲದೈವ ಸಿದ್ದರಾಮೇಶ್ವರ ಸ್ವಾಮಿ ಮತ್ತು ಸಿದ್ದೇಶ್ವರ ಸ್ವಾಮಿಯವರ ಪಾರಂಪರಿಕ ಇತಿಹಾಸ ಹಿರಿಮೆಗಳನ್ನು ಸಮಕಾಲೀನ ಜನರಲ್ಲಿ ಸಾರುವುದು ಅಗತ್ಯ. ದೈವತ್ವದ ಸದಾಚಾರಗಳನ್ನು ಪಸರಿಸುವುದು ಮತ್ತು ಗೌರವಿಸುವುದು ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಗೊರವರ ಕುಣಿತದವರು, ಶಿವ ತಾಂಡವ ನೃತ್ಯದವರು, ಕೋಲಕಾರರು, ಈರ ಮಕ್ಕಳು ಒಂದೆಡೆ ಸೇರಿ ಆಚರಿಸುತ್ತಿರುವ ದೊಡ್ಡ ಜಾತ್ರಾ ಮಹೋತ್ಸವ ವಿಶೇಷವಾಗಿದೆ ಎಂದರು.

ಇದೇವಾಲಯದ ಪ್ರಧಾನ ಅರ್ಚಕ ಕಾಚಹಳ್ಳಿ ನಾರಾಯಣಪ್ಪ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ, ಮಳೆಯಿಲ್ಲದೆ ರೈತರು ಸಂಕಷ್ಟ ಸಿಲುಕಿದ್ದಾರೆ, ಕುಡಿಯುವ ನೀರಿಗೂ ಅಭಾವವಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಶ್ರದ್ಧಾಭಕ್ತಿಯಿಂದ ಒಂದು ತಿಂಗಳಿಂದ ಪೂಜಿಸಿ ಈ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುತ್ತಿದೆ ಎಂದರು.

ಧಾರ್ಮಿಕ ಕಾರ್ಯ ಕಣ್ತುಂಬಿಕೊಂಡ ಜನತೆ:

ಜಾತ್ರಾ ಮಹೋತ್ಸವದ ಪ್ರಯುಕ್ತ ತಮಿಳುನಾಡಿನ ಕಾಣದಹಟ್ಟಿ ನಂಜುಂಡಪ್ಪ ಕಲಾತಂಡದ ವೀರಗಾರರು ತಲೆ ಮೇಲೆ ತೆಂಗಿನಕಾಯಿ ಹೊಡೆದು ದೇವರಿಗೆ ಅರ್ಪಿಸುವ ಸಾಂಪ್ರದಾಯಿಕ ಕಾರ್ಯ ನಡೆಸಿಕೊಟ್ಟರು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೇವನಹಳ್ಳಿ, ಚಿಕ್ಕಬಳ್ಳಾಪುರ, ದುರ್ಗೇನಹಳ್ಳಿ, ಬೀರಸಂದ್ರ ಹಾಗೂ ಬೆಂಗಳೂರಿನ ವಿವಿಧ ಪ್ರದೇಶಗಳಿಂದ ಭಕ್ತರು ಆಗಮಿಸಿದ್ದರು.

ಉತ್ಸವದಲ್ಲಿ ವೀರಗಾಸೆ, ಗೊರವನ ಕುಣಿತ, ಕಾಲಾಟಕಾರರು, ಡೊಳ್ಳು ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ಜನಪದ ನೃತ್ಯಗಳು ಪ್ರದರ್ಶನ ಗಮನ ಸೆಳೆದವು. ಧಾರ್ಮಿಕ, ಪೂಜಾ ಕೈಂಕರ್ಯಗಳು ಜರುಗಿದವು. ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಜಾತ್ರಾ ಮಹೋತ್ಸವದಲ್ಲಿ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ದೇವಸ್ಥಾನ ಸಮಿತಿಯಕೃಷ್ಣಪ್ಪ ಬೆಂಗಳೂರು, ರಾಮಚಂದ್ರಪ್ಪ ಚಿಕ್ಕಬಳ್ಳಾಪುರ, ಮುನಿನಂಜಪ್ಪ ದೇವನಹಳ್ಳಿ, ಕೇಬಲ್ ಮಂಜುನಾಥ, ಕೃಷ್ಣಮೂರ್ತಿ, ಮುನಿರಾಜು, ಹಾಗೂ ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ಮುನಿಕೃಷ್ಣಪ್ಪ ಮುಖಂಡರಾದ ಪ್ರತಾಪ್, ಉದಯ ಆರಾಧ್ಯ ಇತರರಿದ್ದರು.(ಎರಡೂ ಫೋಟೋ ಬಳಸಿ)

12ಕೆಡಿಬಿಪಿ2-

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವಕ್ಕೆ ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.12ಕೆಡಿಬಿಪಿ3-

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.