ಈ ಸಮುದಾಯ ನಿರ್ಮಾಣಕ್ಕಾಗಿ ಮೊದಲ ಕಂತಿನಲ್ಲಿ ಶಾಸಕ ಕೃಷ್ಣನಾಯ್ಕ ₹50 ಲಕ್ಷ ನೀಡುತ್ತಾರೆ.
ಹೂವಿನಹಡಗಲಿ: ಕಾಗಿನೆಲೆ ಕನಕ ಗುರುಪೀಠ ಮೈಲಾರದ ಶಾಖಾಮಠದ 7ನೇ ವಾರ್ಷಿಕೋತ್ಸವ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ಅದ್ಧೂರಿಯಾಗಿ ಯಶಸ್ವಿಯಾಗಿದೆ. ಇಂತಹ ಕಾರ್ಯಕ್ರಮಗಳನ್ನು ಮಾಡಲು ಮಠದ ಆವರಣದ ಹಿಂಭಾಗದಲ್ಲಿ ₹1 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು ಎಂದು ಕಾಗಿನೆಲೆ ಕನಕ ಗುರುಪೀಠದ ಡಾ.ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ಮೈಲಾರ ಗ್ರಾಮದ ಕನಕ ಗುರುಪೀಠದ ಶಾಖಾ ಮಠದ 7ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಈ ಸಮುದಾಯ ನಿರ್ಮಾಣಕ್ಕಾಗಿ ಮೊದಲ ಕಂತಿನಲ್ಲಿ ಶಾಸಕ ಕೃಷ್ಣನಾಯ್ಕ ₹50 ಲಕ್ಷ ನೀಡುತ್ತಾರೆ. ಜತೆಗೆ ₹1 ಕೋಟಿ ವೆಚ್ಚದಲ್ಲಿ ಉತ್ತಮ ಸಮುದಾಯ ಭವನ ನಿರ್ಮಾಣ ಮಾಡುವುದರಿಂದ ಎಲ್ಲ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದರು.ಸಾಮೂಹಿಕ ವಿವಾಹ ಕಾರ್ಯಕ್ರಮವು ಜಾತ್ಯತೀತ ಪರಿಕಲ್ಪನೆಯಲ್ಲಿ ಆಯೋಜಿಸಿದ್ದೇವೆ. ಎಲ್ಲ ಜಾತಿಯ ನವ ದಂಪತಿಗಳು ನೂತನ ದಾಂಪತ್ಯಕ್ಕೆ ಕಾಲಿಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ನವ ಜೋಡಿಗಳು ತಮ್ಮ ಭವಿಷ್ಯದ ಬದುಕು ಉತ್ತಮವಾಗಲು ಸಂಸ್ಕೃತಿ, ಸಂಸ್ಕಾರ ಹೊಂದಬೇಕು. ಜತೆಗೆ ವಿಶಾಲ ಮನೋಭಾವನೆ ಹೊಂದುವ ಜತೆಗೆ ಪರಸ್ಪರ ಹೊಂದಾಣಿಕೆ ಇಟ್ಟುಕೊಂಡು ಬದುಕಬೇಕಾದಾಗ ಸಂಸಾರದಲ್ಲಿ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಎಲ್ಲರೂ ನೆಮ್ಮದಿ ಜೀವನ ಸಾಗಿಸಬೇಕೆಂದು ಹೇಳಿದರು.ಗವಿಸಿದ್ದೇಶ್ವರ ಮಠದ ಡಾ.ಹಿರಿಶಾಂತ ವೀರ ಸ್ವಾಮೀಜಿ ಮಾತನಾಡಿ, ಕುರುಬ ಸಮಾಜ ವಿಶ್ವಾಸಾರ್ಹವಾಗಿದೆ. ಇಂತಹ ಸಮಾಜಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಿರುವ ಶ್ರೀಗಳ ಕಾರ್ಯ ಮಹತ್ವದಾಗಿದೆ. ಈ ನಾಡಿಗೆ ಸಂತ ಮಹಾಂತರ ಕೊಡುಗೆ ಅಪಾರ. ಇಟಿಗಿ ಭೀಮಾಂಬಿಕೆ ನಾಡಿಗೆ ದೊಡ್ಡ ಹೆಸರು ಬರಲು ಮಹಾಂತರ ಶಕ್ತಿ ಇದೆ. ಶ್ರೀಗಳು ಸಮಾಜಕ್ಕೆ ಸ್ಫೂರ್ತಿದಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಸಮಾಜಕ್ಕೆ ಅವರು ಬಹು ದೊಡ್ಡ ಶಕ್ತಿಯಾಗಿದ್ದಾರೆಂದು ಹೇಳಿದರು.
ಮಠ ಮಾನ್ಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹ ಬಡವರ ಮದುವೆ ಅಲ್ಲ, ಬದಲಾಗಿ ಭಾಗ್ಯವಂತರ ಮದುವೆಯಾಗಿದೆ. ನೂತನ ದಂಪತಿಗಳು ತಮ್ಮ ಜೀವನದಲ್ಲಿ ತಂದೆ, ತಾಯಿಯನ್ನು ಪ್ರೀತಿ, ಗೌರವದಿಂದ ನೋಡಿಕೊಳ್ಳಬೇಕು. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳಸಬೇಕು. ಪತಿ, ಪತ್ನಿಯರ ನಡುವೆ ಪ್ರೀತಿ, ವಿಶ್ವಾಸದಿಂದ ಬಾಳಬೇಕೆಂದು ಹೇಳಿದರು.ಶಾಸಕ ಕೃಷ್ಣನಾಯ್ಕ ಮಾತನಾಡಿ, ಕಾಗಿನೆಲೆ ಗುರು ಪೀಠವು ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಸಾಮೂಹಿಕ ವಿವಾಹಗಳನ್ನು ಆಯೋಜನೆ ಮಾಡಿದಾಗ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಶ್ರೀಮಠದ ಕಾರ್ಯಕ್ರಮಗಳನ್ನು ಆಯೋಜಿಸಲು ಸಮುದಾಯ ಭವನ ನಿರ್ಮಾಣಕ್ಕಾಗಿ ₹50 ಲಕ್ಷ ನೀಡಲಾಗುವುದು. ಇದಕ್ಕೆ ಮುಂಬರುವ ದಿನಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ಬುಡಾ ಮಾಜಿ ಅಧ್ಯಕ್ಷ ಸಿದ್ದನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮೋದ ಭಟ್ಟ, ಬಿ.ಹನುಮಂತಪ್ಪ, ಮರಿರಾಮಣ್ಣ, ಎಂ.ಪರಮೇಶ್ವರಪ್ಪ, ಹೊಸ್ಕೇರಿ ಬೀರಪ್ಪ, ಈಟಿ ಲಿಂಗರಾಜ, ಕಾರ್ಣಿಕದ ರಾಮಣ್ಣ, ವಿವೇಕಾನಂದ ಸ್ವಾಮಿ, ಹನುಮಂತಪ್ಪ, ಕೊಟ್ರಯ್ಯ, ಕೆಪಿಸಿಸಿ ಮಾಜಿ ಸದಸ್ಯ ಎಚ್.ಡಿ.ಪಾಟೀಲ್ ಇದ್ದರು.ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 9 ನವ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.