ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮೀಣ ಯುವಕರಲ್ಲಿ ಸಂಘಟನಾ ಮನೋಭಾವ ಬೆಳೆಯುವಲ್ಲಿ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್ ತಿಳಿಸಿದರು.ತಾಲೂಕಿನ ಅಘಲಯ ಗ್ರಾಮದಲ್ಲಿ ಹಳ್ಳಿಕಾರ್ ಪೋಷಕರು ಹಾಗೂ ಗ್ರಾಮಸ್ಥರು ಏರ್ಪಡಿಸಿದ 2ನೇ ವರ್ಷದ ಅಂತರ್ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟ ಹಾಗೂ ಚಕ್ಕಡಿ ಓಟದ ಸ್ಪರ್ಧೆಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.ಗ್ರಾಮೀಣ ಜನರ ಹಿತ ಕಾಯುವ ಜೋಡೆತ್ತುಗಳು ಸಾಮಾಜಿಕ ಜವಾಬ್ದಾರಿಯ ಜೊತೆಗೆ ರೈತರ ಆರ್ಥಿಕ ಬೆಳವಣಿಗೆಗೆ ರಾಸುಗಳು ಪ್ರಮುಖವಾಗಿ ಶ್ರಮ ವಹಿಸುತ್ತವೆ. ಯುವಜನರಲ್ಲಿ ಸಂಘಟನಾ ಮನೋಭಾವ ಬೆಳೆಯುವಲ್ಲಿ ಈ ರೀತಿಯ ಸ್ಪರ್ಧೆಗಳು ಉತ್ತಮವಾಗಿದೆ ಎಂದರು.
ಎಲ್ಲರೂ ಒಗ್ಗಟ್ಟಾಗಿ ಆರೋಗ್ಯಕರ ರೀತಿಯಲ್ಲಿ ಸಂಘಟನೆ ಮಾಡಬೇಕು. ಎತ್ತಿನ ಗಾಡಿ ಓಟದ ಸ್ಪರ್ಧೆಯು ಕಠಿಣವಾಗಿದ್ದು, ಯಾವುದೇ ಅವಘಡಗಳು ಸಂಭವಿಸದ ಹಾಗೆ ನಡೆಯಬೇಕು. ರೈತ, ಯುವಜನರಲ್ಲಿ ಸ್ವಾಭಿಮಾನ ಮತ್ತು ಸ್ವಯಂ ಜೀವನ ರೂಪಿಸುವಂತಹ ಜೀವನ ಕ್ರಮ ಅನುಸರಿಸಿಕೊಳ್ಳಲಿ ಎಂದರು.ಕರ್ನಾಟಕ ನಗರ ನೀರು ಸರಬರಾಜು ಕಾರ್ಯಪಾಲಕ ಅಭಿಯಂತಕರಾದ ಗುರುರಾಜ್ ಮಾತನಾಡಿ, ಎತ್ತಿನ ಗಾಡಿ ಓಟ ಗ್ರಾಮೀಣ ಸೊಗಡಿನ ಸಂಸ್ಕೃತಿಯನ್ನು ಬಿಂಬಿಸುತ್ತದೆ. ತಾತ, ಮುತ್ತಾತರ ಕಾಲದಿಂದ ಸಾಕುತ್ತಿರುವ ಉತ್ತಮ ರಾಸುಗಳನ್ನು ರೈತರು ಪ್ರೀತಿಯಿಂದ ಸಾಕುತ್ತಿದ್ದಾರೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸೋಲು, ಗೆಲವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.
ಸ್ಪರ್ಧೆಯಲ್ಲಿ ಚಿಕ್ಕಮಗಳೂರು, ಭದ್ರಾವತಿ, ಶಿವಮೊಗ್ಗ, ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಜಿಲ್ಲೆಗಳಿಂದ ಅಮೃತ್ ಮಹಲ್, ಹಳ್ಳಿಕಾರ್, ಗಿಡ್ಡಗಾಡು ಜಾತಿಯ ಸುಮಾರು 30ಕ್ಕೂ ಹೆಚ್ಚು ಜತೆ ಎತ್ತುಗಳು ಭಾಗವಹಿಸಿ ಗೆಲುವಿಗಾಗಿ ಸೆಣೆಸಾಡಿದರು.
ಈ ವೇಳೆ ಟಿಎಪಿಸಿಎಂಎಸ್ ನಿರ್ದೇಶಕ ವಿಜಯ ಕುಮಾರ್, ಉದ್ಯಮಿ ಹಿರೀಸಾವೆ ಸಂದೀಪ್, ಪಿಎಲ್ ಡಿ ಬ್ಯಾಂಕ್ ಮಾಜಿ ನಿರ್ದೇಶಕ ಶ್ರೀಧರ್, ಇಂಜಿನಿಯರ್ ಗುರುರಾಜ್, ಭಾರತಿಪುರ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್, ತೀರ್ಪುಗಾರ ಮಾದೇವ, ರವಿ ಕುಮಾರ್, ನಾಟನಹಳ್ಳಿ ಪುನೀತ್, ಮಾಜಿ ಉಪಾಧ್ಯಕ್ಷ ಯೋಗೇಶ್, ಲೋಕನಹಳ್ಳಿ ಪುನೀತ್, ಯುವ ಮುಖಂಡ ಚಂದನ್, ಕ್ರೀಡಾ ಆಯೋಜಕ ನಂದೀಶ್, ಶ್ಯಾರಹಳ್ಳಿ ಪ್ರಸನ್ನ, ಆರ್.ಟಿ.ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.