ಸ್ಪರ್ಧಾತ್ಮಕ ಪರೀಕ್ಷೆಗೆ ಗುರಿ, ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಅಗತ್ಯ: ರಾಧಾಕೃಷ್ಣ ಸಜ್ಜನ್

| Published : Nov 05 2025, 03:00 AM IST

ಸ್ಪರ್ಧಾತ್ಮಕ ಪರೀಕ್ಷೆಗೆ ಗುರಿ, ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಅಗತ್ಯ: ರಾಧಾಕೃಷ್ಣ ಸಜ್ಜನ್
Share this Article
  • FB
  • TW
  • Linkdin
  • Email

ಸಾರಾಂಶ

ಜೀವನ ಶೈಲಿ ಬದಲಾವಣೆ ಮತ್ತು ಸಾಮಾನ್ಯ ವ್ಯಕ್ತಿ ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ ಎಂದು ರಾಧಾಕೃಷ್ಣ ಸಜ್ಜನ್ ಅಭಿಪ್ರಾಯಪಟ್ಟರು.

ಕುರುಗೋಡು: ಗುರಿ, ಪರಿಶ್ರಮ, ಪ್ರಾಮಾಣಿಕ ಪ್ರಯತ್ನ ಸಾಧನೆಗಿರುವ ಮೂರು ಮಾರ್ಗವಾಗಿವೆ. ಆದರೆ, ಜೀವನದಲ್ಲಿ ತಾಳ್ಮೆ ಪ್ರಮುಖವಾಗಿದ್ದು, ಪ್ರಯತ್ನದ ಮುಂದೆ ಸಾಧನೆ ತೀರಾ ಸಣ್ಣದು ಎಂದು ಧಾರವಾಡದ ಜ್ಞಾನದೇಗುಲ ಕೋಚಿಂಗ್ ಸೆಂಟರ್ ನಿರ್ದೇಶಕ ರಾಧಾಕೃಷ್ಣ ಸಜ್ಜನ್ ಅಭಿಪ್ರಾಯಪಟ್ಟರು.

ಪಟ್ಟಣದ ಎಸ್ಎಲ್‌ವಿ ಫಂಕ್ಷನ್ ಹಾಲ್‌ನಲ್ಲಿ ಪೊಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸನ್ಮಾರ್ಗ ಗೆಳೆಯರ ಬಳಗದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದಲ್ಲಿ ಮಾತನಾಡಿದರು.ಜೀವನ ಶೈಲಿ ಬದಲಾವಣೆ ಮತ್ತು ಸಾಮಾನ್ಯ ವ್ಯಕ್ತಿ ಉತ್ತಮ ಜೀವನ ರೂಪಿಸಿಕೊಳ್ಳಲು ಶಿಕ್ಷಣ ಅಗತ್ಯ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಕಷ್ಟು ಸವಾಲುಗಳಿವೆ. ಹೀಗಾಗಿ, ಪ್ರತಿಯೊಬ್ಬರೂ ಪೂರ್ವತಯಾರಿ ಜೊತೆಗೆ ೧ ರಿಂದ ೧೨ ತರಗತಿಯ ಸಮಾಜ, ವಿಜ್ಞಾನ, ಕನ್ನಡ, ಗಣಿತ ವಿಷಯ ಅಧ್ಯಯನ ಮಾಡಬೇಕು ಎಂದರು.

ಶಾಸಕ ಜೆ.ಎನ್. ಗಣೇಶ್.ಪ್ರತಿಯೊಬ್ಬರು ಶಿಸ್ತು ಮೈಗೂಡಿಸಿಕೊಂಡರೆ ಮಾತ್ರ ಸಾಧನೆಗೆ ಪ್ರೇರಣೆಯಾಗುತ್ತದೆ. ಏಳು-ಬೀಳುಗಳ ನಡುವೆ ಪ್ರಯತ್ನ ನಿರಂತರವಾಗಿದ್ದರೆ ಮಾತ್ರ ಪ್ರತಿಫಲ ದೊರಕಲು ಸಾಧ್ಯ ಎಂದರು.

ಖಾಸಗಿ ಕಾಲೇಜುಗಳಲ್ಲಿ ಓದಿದ ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆ ಎದುರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ, ಬಡತನದಲ್ಲಿ ಬೆಳೆದು ಸರ್ಕಾರಿ ಕಾಲೇಜುಗಳಿ ಓದಿದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಕಂಪ್ಲಿ ಮತ್ತು ಕುರುಗೋಡಿನಲ್ಲಿ ಪ್ರತ್ಯೇಕವಾಗಿ ಒಂದು ತಿಂಗಳ ಕಾಲ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.

ತೋರಣಗಲ್ಲು ಉಪ ವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಉನ್ನತ ಸರ್ಕಾರಿ ಉದ್ಯೋಗಗಳು ನಗರಪ್ರದೇಶಗಳ ಶ್ರೀಮಂತರ ಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಮನೋಭಾವ ಗ್ರಾಮೀಣ ಭಾಗದ ಯುವಕರಲ್ಲಿದೆ. ಅದನ್ನು ಹೋಗಲಾಡಿಸುವ ಉದ್ದೇಶದಿಂದ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮ ಪರೀಕ್ಷೆಗಳಿಗೆ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಮಾತನಾಡಿ, ಪೊಲೀಸ್ ಹುದ್ದೆಗೆ ತಯಾರಾಗುವ ಪ್ರತಿಯೊಬ್ಬರೂ ದಿನ ಪತ್ರಿಕೆಯಲ್ಲಿನ ಪ್ರಚಲಿತ ಘಟನೆ ಜತೆಗೆ ಅಗತ್ಯ ಪುಸ್ತಕವನ್ನು ವಿದ್ಯಾರ್ಥಿ ದಸೆಯಿಂದಲೇ ಓದುವ ಹವ್ಯಾಸ ಬೆಳಸಿಕೊಂಡು ನಿರ್ದಿಷ್ಟ ಗುರಿಯಡೆಗೆ ಸಾಗಬೇಕು ಎಂದರು.

ತಹಸೀಲ್ದಾರ್ ನರಸಪ್ಪ ಕೆಪಿಎಸ್ಸಿ ಪರೀಕ್ಷೆ ಹಾಗೂ ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ ಪಿಎಸ್ಐ ಪರೀಕ್ಷೆ ಕುರಿತು ಮಾಹಿತಿ ನೀಡಿದರು.

ಶಾಸಕ ಜೆ.ಎನ್. ಗಣೇಶ್ ಪ್ರಾಚಾರ್ಯರಾದ ಶಾಂತಲಾ, ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ, ಉಪನ್ಯಾಸಕ ತಿಪ್ಪೇರುದ್ರ ಸಂಡೂರು, ಸನ್ಮಾರ್ಗ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ ಆಚಾರ್ ಇದ್ದರು.