ಸುಳ್ಳು ಪ್ರಕರಣ ದಾಖಲಿಸಿದ ದೂರುದಾರರೇ ಅಪರಾಧಿಗಳು

| Published : Jun 26 2024, 12:32 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸುಳ್ಳು ಪ್ರಕರಣ ದಾಖಲಿಸಿದ ದೂರುದಾರರೇ ಅಪರಾಧಿಗಳಾಗಿರುವ ವಿಶೇಷ ಪ್ರಕರಣ ಬೆಳಗಾವಿಯಲ್ಲಿ ನಡೆದಿದ್ದು, ಸುಳ್ಳು ಪ್ರಕರಣದಲ್ಲಿ ಭಾಗಿಯಾದ 13 ಜನರ ವಿರುದ್ಧದ ಆರೋಪ ಸಾಭಿತಾಗಿದೆ ಎಂದು ಮಂಗಳವಾರ ವಿಚಾರಣೆ ನಡೆಸಿದ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ಪ್ರಮಾಣವನ್ನು ಜೂನ್‌ 27ಕ್ಕೆ ಕಾಯ್ದಿರಿಸಿ ಆದೇಶ ನೀಡಿದೆ. ಈ ತೀರ್ಪಿನಿಂದ ಮೇಲಾಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವವರಿಗೆ ಎಚ್ಚರಿಕೆ ಸಂದೇಶವೂ ಆಗಿದೆ.

ಜಗದೀಶ ವಿರಕ್ತಮಠ

ಕನ್ನಡಪ್ರಭ ವಾರ್ತೆ ಬೆಳಗಾವಿ

ಸುಳ್ಳು ಪ್ರಕರಣ ದಾಖಲಿಸಿದ ದೂರುದಾರರೇ ಅಪರಾಧಿಗಳಾಗಿರುವ ವಿಶೇಷ ಪ್ರಕರಣ ಬೆಳಗಾವಿಯಲ್ಲಿ ನಡೆದಿದ್ದು, ಸುಳ್ಳು ಪ್ರಕರಣದಲ್ಲಿ ಭಾಗಿಯಾದ 13 ಜನರ ವಿರುದ್ಧದ ಆರೋಪ ಸಾಭಿತಾಗಿದೆ ಎಂದು ಮಂಗಳವಾರ ವಿಚಾರಣೆ ನಡೆಸಿದ ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಕ್ಷೆ ಪ್ರಮಾಣವನ್ನು ಜೂನ್‌ 27ಕ್ಕೆ ಕಾಯ್ದಿರಿಸಿ ಆದೇಶ ನೀಡಿದೆ. ಈ ತೀರ್ಪಿನಿಂದ ಮೇಲಾಧಿಕಾರಿಗಳು ಸೇರಿದಂತೆ ಇತರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವವರಿಗೆ ಎಚ್ಚರಿಕೆ ಸಂದೇಶವೂ ಆಗಿದೆ.

ಹೆಸ್ಕಾಂನ ಬೆಳಗಾವಿ ವಿಭಾಗದ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಹೆಸ್ಕಾಂನ ಸಹಾಯಕ ಇಂಜನಿಯರ್ ಬಿ.ವಿ.ಸಿಂಧು (ಸದ್ಯ ಮೈಸೂರಿನಲ್ಲಿ ಕಾರ್ಯನಿರ್ವಹಣೆ), ಸಹಾಯಕ ಮಾರ್ಗದಾಳು ನಾಥಾಜಿ ಪಾಟೀಲ, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಅಜಿತ್ ಪೂಜಾರಿ, ಸಹಾಯಕ ಮಾರ್ಗದಾಳು ಮಲ್ಲಸರ್ಜ ಶಹಪೂರಕರ, ಕಿರಿಯ ಇಂಜನಿಯರ್‌ ಸುಭಾಷ ಹಲ್ಲೊಳ್ಳಿ, ಮಾರ್ಗದಾಳು ಈರಪ್ಪ ಪತ್ತಾರ, ಮೇಲ್ವಿಚಾರಕ ಮಲ್ಲಿಕಾರ್ಜುನ ರೇಡಿಹಾಳ, ಹಿರಿಯ ಸಹಾಯಕ ಭೀಮಪ್ಪ ಗೋಡಲಕುಂದರಗಿ, ಸ್ಟೇಷನ್ ಅಟೆಂಡರ್ ಗ್ರೇಡ್‌-2 ರಾಜೇಂದ್ರ ಹಳಿಂಗಳಿ, ಲೆಕ್ಕಾಧಿಕಾರಿ ಸುರೇಶ ಕಾಂಬಳೆ, ಲೈನ್‌ಮನ್‌ಗಳಾದ ಈರಯ್ಯ ಹಿರೇಮಠ, ಮಾರುತಿ ಪಾಟೀಲ ಹಾಗೂ ನಿವೃತ್ತ ಸಹಾಯಕಿ ದ್ರಾಕ್ಷಾಯಣಿ ನೇಸರಗಿ ಸುಳ್ಳು ಪ್ರಕರಣ ದಾಲಿಸಿರುವ ಕುರಿತು ಆರೋಪ ಸಾಭೀತಾಗಿರುವ ಹಿನ್ನೆಲೆ ಶಿಕ್ಷೆ ಪ್ರಮಾಣವನ್ನು ಜೂನ್‌ 27ಕ್ಕೆ ಕಾಯ್ದಿರಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಲ್‌.ವಿಜಯಲಕ್ಷ್ಮೀದೇವಿ ತೀರ್ಪು ನೀಡಿದ್ದಾರೆ.ಪ್ರಕರಣದ ಹಿನ್ನೆಲೆ:

ಹೆಸ್ಕಾಂನ ಸಹಾಯಕ ಇಂಜನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಿ.ವಿ.ಸಿಂಧು ತನಗೆ ಹೆಸ್ಕಾಂನ ಬೆಳಗಾವಿ ವಿಭಾಗದ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು 2014 ನವೆಂಬರ್ 19 ರಂದು ನಗರದ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತುಕಾರಾಮ ಮಜ್ಜಗಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಈ ಪ್ರಕರದ ತನಿಖೆ ನಡೆಸಿದ ಪೊಲೀಸರಿಗೆ ಇದರೊಂದು ಸುಳ್ಳು ಪ್ರಕರಣ ಎಂಬುವುದು ಕಂಡ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೊರ್ಟ್‌ ಸಲ್ಲಿಕೆ ಮಾಡಿದ್ದರು. ಬಳಿಕ ತುಕಾರಾಮ ಮಜ್ಜಗಿ ಅವರು ದೂರನ್ನು ಹಿಂಪಡೆಯುವಂತೆ ಫೋನ್‌ ಮೂಲಕ ಒತ್ತಾಯಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಮತ್ತೊಂದು ದೂರನ್ನು 2015 ರಲ್ಲಿ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ್ದರು. ಅಲ್ಲದೇ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಇದಕ್ಕೆ ಮಜ್ಜಗಿ ಅವರೇ ಕಾರಣ ಎಂದು ಇನ್ನೊಂದು ದೂರನ್ನು ನೀಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಪೊಲೀಸ್‌ ಠಾಣೆಯಲ್ಲೆ ಒಟ್ಟು 3 ಪ್ರಕರಣಗಳು ದಾಖಲಿಸಲಾಗಿತ್ತು. ಈ ಪ್ರಕರಣಗಳ ವಿಚಾರಣೆ ನಡೆಸಿದ ಪೊಲೀಸರು ಅಂತಹ ಯಾವುದೇ ಘಟನೆ ನಡೆದಿಲ್ಲವೆಂದು ಬಿ ರಿಪೋರ್ಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಕ್ಕೆ ಮಾಡಿದ್ದರು. ನ್ಯಾಯಾಲಯ ಈ ವರದಿಯನ್ನು ಅಂಗೀಕರಿಸಿದೆ. ತನಿಖೆ ಸಮಯದಲ್ಲಿ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ 9 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಬಳಿಕ ಅಧೀಕ್ಷಕ ಅಭಿಯಂತರ ತುಕಾರಾಮ ಮಜ್ಜಗಿ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ 13 ಜನ ಅಪರಾಧಿಗಳು ಅಂದಿನ ಮುಖ್ಯಮಂತ್ರಿ, ಗೃಹಮಂತ್ರಿ, ಇಂಧನ ಸಚಿವರು, ವಿರೋಧ ಪಕ್ಷದ ನಾಯಕರು, ರಾಜಕೀಯ ನಾಯಕರು ಸೇರಿದಂತೆ ಇನ್ನೀತರ ಕಡೆಗಳಲ್ಲಿ ಕೋರಿಕೊಂಡಿದ್ದರು. ಅಲ್ಲದೇ ಪೊಲೀಸ್‌ ಆಯುಕ್ತರಿಗೆ ಹಾಗೂ ವಿವಿಧ ಸಂಘಟನೆಗಳಿಗೂ ಈ ವಿಷಯವನ್ನು ಗಮನಕ್ಕೆ ತಂದು ತುಕಾರಾಮ ಮಜ್ಜಗಿ ಅವರು ಕಾರ್ಯನಿರ್ವಹಿಸದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸೇವೆಯಿಂದ ಅಮಾನತುಗೊಳಿಸುವ ಕಾರ್ಯ ಮಾಡಿದ್ದರು. ನಂತರ ಪೊಲೀಸರು ಸಲ್ಲಸಿದ ಬಿ ರಿಪೋರ್ಟ್‌ನ್ನು ನಾಯಾಲಯ ಅಂಗೀಕರಿಸಿ ಮಾಡಿದ ಆದೇಶದ ವಿರುದ್ಧ 2016 ರಲ್ಲಿ ಬಿ.ವಿ.ಸಿಂಧು ಜಿಲ್ಲಾ ನ್ಯಾಯಾಲಯದಲ್ಲಿ ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿದ್ದರು. ಈ ವೇಳೆ ಸಲ್ಲಿಸಿದ ಅಫಿಡಿವೆಟ್‌ಗಳನ್ನು ಸಲ್ಲಿಸಿ ಅದರಲ್ಲಿ 9 ಜನ ಆರೋಪಿಗಳು ತುಕಾರಾಮ ಮಜ್ಜಿಗಿ ಮೇಲೆ ಸುಳ್ಳು ದೂರುಗಳನ್ನು ಪ್ರೇರೆಪಿಸಿದ್ದು ಮತ್ತು ಅವರೊಂದಿಗೆ ಒಳಸಂಚು ಮಾಡಿ ನಕಲಿ ಪ್ರಕರಣ ದಾಖಲಿಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ 13 ಜನರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ 2017ರಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಸುಳ್ಳು ಪ್ರಕರಣ ದಾಖಲಿಸಿದವರ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದರು.ಈ ಪ್ರಕರಣದ ತನಿಖೆ ಸಮಯದಲ್ಲಿ ಕೆಲವು ಆರೋಪಿತರು ಈ ಪ್ರಕರಣವನ್ನು ರದ್ದುಪಡಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿ ಅರ್ಜಿ ಸಲ್ಲಿಸಿದ್ದರು. ಆರೋಪಿತರು ಸಲ್ಲಿಸಿದ ಅರ್ಜಿಗಳನ್ನು ಪುರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ದೂರುದಾರ ತುಕಾರಾಮ ಮಜ್ಜಗಿ ಸುಪ್ರಿಂ ಕೊರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್‌ ಆರೋಪಿತರ ವಿರುದ್ಧ ಅಪರಾಧಿಕ ಅಂಶಗಳು ಕಂಡು ಬಂದಲ್ಲಿ ಅವರನ್ನು ಆರೋಪಿತರನ್ನಾಗಿ ಸೇರಿಸುವಂತೆ ಆದೇಶ ನೀಡಿತ್ತು. ಈ ಆದೇಶದಂತೆ ಆರೋಪಿತರ ವಿರುದ್ಧ ವಿಚಾರಣೆ ಮುಂದುವರೆದ ಕಾಲಕ್ಕೆ ಅಭಿಯೋಜನೆ ಪರವಾಗಿ 13 ಸಾಕ್ಷಿಗಳನ್ನು, 81 ದಾಖಲೆಗಳನ್ನು ಹಾಜರುಪಡಿಸಲಾಗಿತ್ತು. ಅದೇ ರೀತಿ ಆರೋಪಿರು ತಮ್ಮ ಪರವಾಗಿ ಒಬ್ಬ ಸಾಕ್ಷಿಯನ್ನು ವಿಚಾರಣೆ ಮಾಡಿ, 32 ದಾಖಲೆಗಳನ್ನು ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಲ್‌.ವಿಜಯಲಕ್ಷ್ಮೀದೇವಿ ಅವರು ಆರೋಪಿತರು ಸುಳ್ಳು ಪ್ರಕರಣ ದಾಖಲಿಸಿದ ಅಪರಾಧ ಸಾಭಿತಾಗಿದ್ದು, ಶಿಕ್ಷೆ ಪ್ರಮಾಣದ ಪ್ರಕಟಣೆಯನ್ನು ಜೂ.27ಕ್ಕೆ ಕಾಯ್ದಿರಿಸಿ ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಮುರಳೀಧರ ಎಲ್‌.ಕುಲಕರ್ಣಿ ದೂರುದಾರರ ಪರ ವಕಾಲತ್ತು ವಹಿಸಿದ್ದರು.

--