-ಆ

ಚಿಕ್ಕಮಗಳೂರು: ಸಾರ್ವಜನಿಕ ಹಿತದೃಷ್ಠಿ ಇಲ್ಲದ ಹಾಗೂ ನಗರ ಸಭೆ ಅಧಿಕಾರಿ, ಸಿಬ್ಬಂದಿಗೆ ಬ್ಲಾಕ್‌ಮೇಲ್‌ ಮಾಡುವ ಉದ್ದೇಶದಿಂದ ಮಾಹಿತಿ ಹಕ್ಕು ಅದಿನಿಮಯದಡಿ ಅರ್ಜಿ ಹಾಗೂ ದೂರು ಸಲ್ಲಿಸಿ ಸಾರ್ವಜನಿಕ ಕೆಲಸ ಕಾರ್ಯಕ್ಕೆ ಅಡ್ಡಿಪಡಿಸುತ್ತಿರುವ ಬಿ.ಎಂ.ರಂಜಿತ ಮತ್ತು ದಿನೇಶ್‌ ಕುಮಾರ್‌ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ಚಿಕ್ಕಮಗಳೂರು ಶಾಖೆಯ ಪ್ರಾಧಿಕಾರಿಗಳು ಜಿಲ್ಲಾಧಿಕಾರಿಗೆ ಬುಧವಾರ ದೂರು ಸಲ್ಲಿಸಿದ್ದಾರೆ. ಬೇಲೂರು ಮೂಲದ ಬಿ.ಎಂ.ರಂಜಿತ ಮತ್ತು ಚಿಕ್ಕಮಗಳೂರಿನ ಕೋಟೆ ನಿವಾಸಿ ದಿನೇಶ್‌ ಕುಮಾರ್‌ ಎಂಬುವವರು ಪ್ರತಿ ದಿನ ಅಧಿಕಾರಿ ಸಿಬ್ಬಂದಿಗೆ ಬೆದರಿಸುವ ಉದ್ದೇಶದಿಂದ ಸಲ್ಲಿಸಿದ ಮಾಹಿತಿ ಹಕ್ಕು ಅಡಿ ಅರ್ಜಿಗಳಿಗೆ ಹಿಂಬರಹ ನೀಡದ ಹಾಗೂ ನಿಯಮಾನುಸಾರ ಪರಿಶೀಲಿಸಿ ಉತ್ತರಿಸದ ಅಧಿಕಾರಿ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತಿದ್ದಾರೆ ಎಂದು ದೂರಿದ್ದಾರೆ. ನಗರ ಕಚೇರಿ ಆವರಣದಲ್ಲಿ ಸಾರ್ವಜನಿಕರ ಎದುರೇ ಬಹಿರಂಗವಾಗಿ ಅಧಿಕಾರಿ, ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಆದ್ದರಿಂದ ಅಧಿಕಾರಿ ಸಿಬ್ಬಂದಿ ಸಾರ್ವಜನಿಕರ ಕೆಲಸ ಮಾಡುವುದು ಕಷ್ಟವಾಗಿದ್ದು, ಕೂಡಲೇ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.