ಸಾರಾಂಶ
ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಾಚ್ಯ ಶಬ್ದಗಳಿಂದ ಇಲ್ಲಿನ ನಿವಾಸಿ ಸುರೇಶ್ ವಾಜಪೇಯಿ ನಿಂದನೆ ಮಾಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಹಿಂದ ಸಂಘಟನೆ ಹಾಗೂ ಕಾಂಗ್ರೆಸ್ ಅಲ್ಪ ಸಂಖ್ಯಾತರ ಜಿಲ್ಲಾ ಘಟಕದಿಂದ ಎಸ್ಪಿಗೆ ದೂರು ಸಲ್ಲಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಅಹಿಂದ ಸಂಘಟನೆಯ ಅಧ್ಯಕ್ಷ ಹಳೇಪುರ ಎಂ.ಮಹೇಶ್, ಗೌರವ ಅಧ್ಯಕ್ಷ ಸೈಯದ್ ಇಸ್ಮಾಯಿಲ್ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಅಫ್ಜಲ್ ಷರೀಫ್ ನೇತೃತ್ವದ ತಂಡವು ಎಸ್ಪಿ ಅನುಪಸ್ಥಿತಿಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ಮೂಲಕ ಎಸ್ಪಿಗೆ ದೂರು ಸಲ್ಲಿಸಿದರು.
ಅಹಿಂದ ಜಿಲ್ಲಾ ಸಂಘಟನೆಯ ಅಧ್ಯಕ್ಷ ಎಂ.ಮಹೇಶ್ ಹಳೇಪುರ ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರರನ್ನು ಚಾಮರಾಜನಗರದ ನಿವಾಸಿ ಸುರೇಶ್ ವಾಜಪೇಯಿ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಅಪಮಾನ ಮಾಡಿದ್ದಾರೆ. ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಅದನ್ನು ಸಂವಿಧಾನ ದತ್ತವಾಗಿ ಎಲ್ಲರಿಗೂ ನೀಡಲಾಗಿದೆ. ಆದರೆ, ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ಇದನ್ನು ಮೀರಿ ನಡೆದುಕೊಂಡಿರುವ ಸುರೇಶ್ ವಾಜಪೇಯಿ ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಅಹಿಂದ ಸಂಘಟನೆ ಬೀದಿಗಿಳಿದು ಹೋರಾಟ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಹಿಂದ ಸಂಘಟನೆಯ ಗೌರವ ಅಧ್ಯಕ್ಷ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸೈಯದ್ ಇಸ್ಮಾಯಿಲ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಅಫ್ಬಲ್ ಷರೀಪ್, ಅಹಿಂದ ಸಂಘಟನೆಯ ಉಪಾಧ್ಯಕ್ಷ ಶ್ರೀನಿವಾಸ ಗಣಿಗನೂರು, ಯುವ ಮುಖಂಡರಾದ ಅನಂತ್ಕುಮಾರ್, ಜುನೇದಾ, ಅಪ್ಸರ್, ಕೃಷ್ಣ ಹಾಜರಿದ್ದರು.