ಸಾರಾಂಶ
ರಾಷ್ಟ್ರಧ್ವಜದ ಮೇಲೆ ಚಪ್ಪಲಿ ಹಾಕಿಕೊಂಡು ನಿಂತಿರುವ ಡಿಸೈನ್ ಮಾಡಿಸಿ ಮೊಬೈಲ್ ವಾಟ್ಸಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ವೇಣುಗೋಪಾಲ್ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ
ಗಾಂಧಿ ಜಯಂತಿ ದಿನದಂದು ರಾಷ್ಟ್ರಧ್ವಜದ ಮೇಲೆ ಚಪ್ಪಲಿ ಹಾಕಿಕೊಂಡು ನಿಂತಿರುವ ಡಿಸೈನ್ ಮಾಡಿಸಿ ಮೊಬೈಲ್ ವಾಟ್ಸಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ ಬಾಗಲಗುಂಟೆಯ ಮಂಜುನಾಥನಗರದ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ವೇಣುಗೋಪಾಲ್ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಾಗಿದೆ.ಆಕ್ಟೋಬರ್ 3ರಂದು ‘ಕನ್ನಡಪ್ರಭ’ದಲ್ಲಿ ‘ರಾಷ್ಟ್ರದ್ವಜದ ಮೇಲೆ ಶೂ ಹಾಕಿ ನಿಂತ ಶಿಕ್ಷಕ:ಅಕ್ರೋಶ’ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲೂ ಸುದ್ದಿ ಬಿತ್ತರಿಸಲಾಗಿತ್ತು. ಇದರ ಬೆನ್ನಲ್ಲೇ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮುಖ್ಯ ಶಿಕ್ಷಕರಿಗೆ ನೋಟಿಸ್ ನೀಡಿದ್ದರು. ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ ಬಿ.ಎಂ.ಚಿಕ್ಕಣ್ಣ ಬಾಗಲಗುಂಟೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಪಾಠ, ನೀತಿ ನಿಯಮ, ಸಂಸ್ಕಾರ, ಸಂಸ್ಕೃತಿ ಹೇಳಿಕೊಡುವ ಶಿಕ್ಷಕರು ಹೀಗಾದರೆ ಮಕ್ಕಳ ಗತಿ ಏನು? ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕು. ಇವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಬಿ.ಎಂ.ಚಿಕ್ಕಣ್ಣ ದೂರಿನಲ್ಲಿ ವಿವರಿಸಿದ್ದಾರೆ.ಈ ವಿಚಾರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಈಗಾಗಲೇ ಆಯುಕ್ತರ ಬಳಿ ಚರ್ಚಿಸಿ, ಕಾರಣ ಕೇಳಿ ಮುಖ್ಯ ಶಿಕ್ಷಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.