ಸಾರಾಂಶ
ಈ ಯೋಜನೆಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.
ಭಟ್ಕಳ: ಹೊನ್ನಾವರ, ಭಟ್ಕಳ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಪಂ ಸಿಇಒ ಡಾ.ದಿಲೀಷ ಶಶಿ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಅಳವಡಿಸಿದ ಗೃಹ ನಳ ಸಂಪರ್ಕದ ಗುಣಮಟ್ಟ, ಮೀಟರ್ ಅಳವಡಿಕೆ, ಕುಡಿಯುವ ನೀರಿನ ಪೂರೈಕೆ, ರಸ್ತೆ ಪುನಶ್ಚೇತನ ಹಾಗೂ ಎಫ್ಟಿಕೆ ನೀರಿನ ಗುಣಮಟ್ಟ, ವಿಡಬ್ಲ್ಯೂಎಸ್ಸಿ ಪಾಲಿಸಿ ಅಳವಡಿಕೆ ಕುರಿತು ವರದಿಗಳನ್ನು ಪರಿಶೀಲಿಸಿದರು.
ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಸೂಚಿಸಿದರು.ನಂತರ ಮಾತನಾಡಿದ ಅವರು, ಈ ಯೋಜನೆಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಇತ್ತೀಚೆಗೆ ಅತಿಹೆಚ್ಚು ಮಳೆ ಆಗುತ್ತಿರುವುದರಿಂದ ನೀರಿನ ಮೂಲಗಳನ್ನು ಸ್ವಚ್ಛವಾಗಿ ಮತ್ತು ಕಲುಷಿತವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರಿಗೆ ಮಳೆಗಾಲದಲ್ಲಿ ಕುಡಿಯುವ ನೀರಿನ ಬಗೆಗೆ ಎಚ್ಚರಿಕೆ ವಹಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ ಹೊನ್ನಾವರ, ಭಟ್ಕಳ ತಾಪಂ ಇಒಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ತಾಪಂ ವ್ಯವಸ್ಥಾಪಕರು, ಆರ್ ಡಬ್ಲ್ಯೂ ಎಸ್ ವಿಭಾಗ ಕಚೇರಿಯ ಸಹಾಯಕ ಎಂಜಿನಿಯರ್ ಗಳು, ಜೆಜೆಎಂಡಿಪಿಎಂ, ವಿವಿಧ ಪಿಡಿಒ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಗುತ್ತಿಗೆದಾರರು, ಸಾರ್ವಜನಿಕರಿದ್ದರು.ಹೊನ್ನಾವರ, ಭಟ್ಕಳದಲ್ಲಿ ಜಲಜೀವನ್ ಮಿಷನ್ ಕಾಮಗಾರಿಯನ್ನು ಉ.ಕ ಜಿಪಂ ಸಿಇಒ ಡಾ.ದಿಲೀಷ ಶಶಿ ವೀಕ್ಷಿಸಿದರು.