ಸಾರಾಂಶ
ಕುಡಿಯುವ ನೀರು ಯೋಜನೆಯ ಶಂಕು । ಅಧಿಕಾರಿಗಳಿಗೆ ನಿರ್ದೇಶನ
ಕನ್ನಡಪ್ರಭ ವಾರ್ತೆ ಗುರುಮಠಕಲ್ಮತಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರದಿಂದ ಹಲವು ಯೋಜನೆಗಳನ್ನು ತಂದಿದ್ದು, ಅಧಿಕಾರಿಗಳು ಕಾಮಗಾರಿಗಳನ್ನು ಗುಣಮಟ್ಟ ಮತ್ತು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅಧಿಕಾರಿಗಳಿಗೆ ಸೂಚಿಸಿದರು.
ಗುರುಮಠಕಲ್ ಪಟ್ಟಣದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಯಾದಗಿರಿ ಜಿಲ್ಲಾಡಳಿತ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಮತ್ತು ಗುರುಮಠಕಲ್ ಪುರಸಭೆ ಜಂಟಿಯಾಗಿ ಗುರುಮಠಕಲ್ ಪಟ್ಟಣಕ್ಕೆ ಭೀಮಾನದಿ ಮೂಲದಿಂದ ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಮೊತ್ತ 2475 ಲಕ್ಷ ರು. ಕಾಮಗಾರಿ ಶಂಕುಸ್ಥಾಪನೆ ಮಾಡಿ ಮಾತನಾಡಿದರು.ಕುಡಿಯುವ ನೀರಿಗಾಗಿ ಸರ್ಕಾರ ಕೊಟ್ಟಿರುವ 25 ಕೋಟಿ ರು. ಸಾಲದು, ಸಂಬಂಧಿಸಿದ ಸಚಿವರಿಗೆ ಮನವರಿಕೆ ಮಾಡಿಸಿದ್ದು, ಅವರು ಇನ್ನೂ 15 ಕೋಟಿ ರು.ಗಳ ಮಂಜೂರು ಮಾಡುತ್ತೇನೆ ಎಂಬ ಭರವಸೆ ನೀಡಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಗುರುಮಠಕಲ್ ತಾಲೂಕು ರಚನೆಯಾಗಿದ್ದು ಜನರಿಗೆ ಅನುಕೂಲ ಕಲ್ಪಿಸಲು. ತಾಲೂಕು ಆಡಳಿತ ಕಚೇರಿಗಳಾದ ಉಪ ನೋಂದಣಿ ಕಚೇರಿ, ಪ್ರಜಾಸೌಧ, ಉನ್ನತ ದರ್ಜೆಯ ಆಸ್ಪತ್ರೆ, ಬಿಇಓ ಕಚೇರಿ, ಅಗ್ನಿಶಾಮಕ ಡಿಪೋ ಮುಂತಾದ ಕಚೇರಿಗಳ ಸ್ಥಾಪನೆಯಾಗುವಂತೆ ಮಾಡುವ ಕನಸು ಹೊಂದಿದ್ದೇನೆ ಎಂದರು.
ನಗರದಲ್ಲಿ ಅಪರಾಧ ಪ್ರಮಾಣ ಹೆಚ್ಚಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಸಿಸಿ ಕ್ಯಾಮೆರಗಳನ್ನು ಅಳವಡಿಸಲಾಗಿದೆ. ಪೊಲೀಸ್ ಕ್ವಾಟರ್ಸ್ ಇರುವ ಸ್ಥಳದಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಮೊದಲನೆ ಹಂತದಲ್ಲಿ 8.65 ಕೋಟಿ ರು. ಹಣ ಮಂಜೂರು ಆಗಿದ್ದು, ರಾಯಚೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ, ಶೀಘ್ರದಲ್ಲಿ ಇಲ್ಲಿ ಕಾಮಗಾರಿ ಆರಂಭವಾಗಲಿದೆ. ನಗರದ ಒಳಗಿರುವ ಪೊಲೀಸ್ ಠಾಣೆಯನ್ನು ನಗರದ ಹೊರಗಿನ ಪ್ರದೇಶದಲ್ಲಿ ಉನ್ನತೀಕರಿಸಲಾಗುವುದು ಎಂದು ಭರವಸೆ ನೀಡಿದರು.ಪುರಸಭೆ ಅಧ್ಯಕ್ಷೆ ಜಯಶ್ರೀ ಪೊಲೀಸ್ ಪಾಟೀಲ್, ಉಪಾಧ್ಯಕ್ಷೆ ರೇಣುಕಾ ಪಡಿಗೆ, ಕಲಬುರಗಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ನರಸಿಂಹರಡ್ಡಿ ಎನ್, ಯಾದಗಿರಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ ಕುಮಾರ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪುರಸಭೆ ಕಿರಿಯ ಅಭಿಯಂತರರು, ಅಬ್ದುಲ್ ಅಲೀಮ್ , ತಹಸೀಲ್ದಾರ ಶಾಂತಗೌಡ ಬಿರದಾರ, ತಾಲೂಕಯ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಪಾಟೀಲ, ಸಿಡಿಪಿಒ ಶರಣಬಸಪ್ಪ, ಪಿಐ ವೀರಣ್ಣ ಹೊಸಮನಿ,ಜೆಡಿಎಸ್ ಜಿಲಾಧ್ಯಕ್ಷ ಸುಭಾಷ ಕಟಕಟೆ ಸೇರಿದಂತೆ ಪುರಸಭೆ ಸದಸ್ಯರು, ಕಾರ್ಯಕರ್ತರು ಇದ್ದರು.