ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಯವರು, ಪಿಡಿಒಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ಪರಿಸರ ಅಭಿಯಂತರರು ಸೇರಿದಂತೆ ಸಾರ್ವಜನಿಕರು ಡೆಂಘೀ ನಿಯಂತ್ರಣ ಕಾರ್ಯಗಳಲ್ಲಿ ಕಡ್ಡಾಯವಾಗಿ ತೊಡಗಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಾಕೀತು ಮಾಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಡೆಂಘೀ ನಿಯಂತ್ರಣ ಟಾಸ್ಕ್ಪೋರ್ಸ್ ಸಭೆಯಲ್ಲಿ ಅವರು ಮಾತನಾಡಿ, ಜಿಲ್ಲೆ ಯಲ್ಲಿ ಡೆಂಗಿ ನಿಯಂತ್ರಣ ಕಾರ್ಯಗಳನ್ನು ತೀವ್ರಗೊಳಿಸಿ, ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಆದ್ಯತೆ ಮೇರೆಗೆ ಡೆಂಘೀ ನಿಯಂತ್ರಣ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದರು.
ಪ್ರತಿವಾರ ಜಿಲ್ಲಾ ಮಟ್ಟದ ಟಾಸ್ಕ್ಪೋರ್ಸ್ ಸಭೆ ನಡೆಸಿ, ಡೆಂಘೀ ನಿಯಂತ್ರಣವನ್ನು ಪರಿಣಾಮಕಾರಿಗೊಳಿಸಲಾಗುವುದು. ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಹೆಚ್ಚು ಡೆಂಗಿ ಪ್ರಕರಣಗಳು ಕಂಡು ಬರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಲಾರ್ವಾ ಉತ್ಪತ್ತಿ ತಾಣಗಳನ್ನು ನಾಶಪಡಿಸಬೇಕು. ಪ್ರತಿ ಶುಕ್ರವಾರ ನೀರು ಸಂಗ್ರಹಿಸುವ ಪರಿಕರಗಳನ್ನು ಖಾಲಿ ಮಾಡಿ, ಸ್ವಚ್ಚಗೊಳಿಸಿ, ಒಣಗಿಸಿ ಮತ್ತೆ ನೀರು ತುಂಬುವ ಮೂಲಕ ಶುಷ್ಕದಿನ ಆಚರಿಸಬೇಕು ಎಂದು ಸೂಚಿಸಿದರು.ಡೆಂಘೀ ಪ್ರಕರಣ ಹೆಚ್ಚು ಇರುವ ಶಿವಮೊಗ್ಗ, ಶಿಕಾರಿಪುರ ಮತ್ತು ಸಾಗರ ತಾಲೂಕುಗಳಲ್ಲಿ ತೀವ್ರತರವಾಗಿ ಡೆಂಗಿ ನಿಯಂತ್ರಣ ಕಾರ್ಯವಾಗಬೇಕು. ಮಳೆ ಕಡಿಮೆ ಆಗುತ್ತಿದ್ದಂತೆ ಡೆಂಘೀ ಪ್ರಮಾಣ ಹೆಚ್ಚಾಗುತ್ತದೆ. ಆದ್ದರಿಂದ ಹೆಚ್ಚು ಎಚ್ಚರಿಕೆ ವಹಿಸಬೇಕು. ಡೆಂಘೀ ಪ್ರಕರಣ ಹೆಚ್ಚು ಇರುವೆಡೆ ಮನೆಯೊಳಗೆ ಸಹ ಫಾಗಿಂಗ್ಗೆ ವ್ಯವಸ್ಥೆ ಮಾಡಬೇಕು. ಸ್ಥಳೀಯ ಸಂಸ್ಥೆಗಳು ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಫಾಗಿಂಗ್ ಮಷೀನ್ ಸಿದ್ಧವಿರಿಸಿಕೊಳ್ಳಬೇಕು. ಪ್ರತಿ ಶುಕ್ರವಾರ ಸೊಳ್ಳೆ ನಿರ್ಮೂಲನೆ ದಿನವನ್ನು ಪರಿಣಾಮಕಾರಿಗೊಳಿಸಬೇಕು. 2 ಕ್ಕಿಂತ ಹೆಚ್ಚು ಡೆಂಘೀ ಪ್ರಕರಣ ಪತ್ತೆಯಾದ ಪ್ರದೇಶವನ್ನು ಡೆಂಘೀ ಹಾಟ್ಸ್ಪಾಟ್ ಎಂದು ಗುರುತಿಸಿ ನಾಲ್ಕು ವಾರಗಳ ಕಾಲ ಆ ಪ್ರದೇಶವಸನ್ನು ಫಾಗಿಂಗ್ ಮಾಡಿಸಬೇಕು ಎಂದು ಸೂಚನೆ ನೀಡಿದರು.
ಶಾಲೆಗಳ ಸುತ್ತಮುತ್ತ ಸಹ ಲಾರ್ವಾ ಉತ್ಪತ್ತಿ ತಾಣ ನಾಶಪಡಿಸುವ ಕೆಲಸವಾಗಬೇಕು. ಶಾಲೆಗಳ ಒಳಗೆ ಸಹ ಫಾಗಿಂಗ್ ಆಗಬೇಕು. ಆರೋಗ್ಯ ಇಲಾಖೆಯಿಂದ ಸಮೀಕ್ಷೆ ನಡೆಸಿ 5 ಸಾವಿರ ಸೊಳ್ಳೆ ನಿವಾರಕ ಡೆಪಾ ಆಯಿಲ್ ನೀಡಲಾಗಿದ್ದು, ಪ್ರತಿ ಶಾಲೆಯಲ್ಲಿ ಓರ್ವ ಶಿಕ್ಷಕ ಡೆಂಘೀ ನಿರ್ವಹಣೆಗೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಅವರು ವಿದ್ಯಾರ್ಥಿಗಳಿಗೆ ಡೆಂಘೀ ಕುರಿತು ಅರಿವು ಮತ್ತು ಸೊಳ್ಳೆ ನಿವಾರಕಗಳನ್ನು ಹಚ್ಚಿಕೊಳ್ಳುವ ಬಗೆಯನ್ನು ತಿಳಿಸಿಕೊಡಬೇಕು ಎಂದರು.ಜಿಲ್ಲಾ ಪಂಚಾಯತ್ ಸಿಇಒ ಎನ್.ಹೇಮಂತ್ ಮಾತನಾಡಿ, ಡೆಂಘೀ ನಿಯಂತ್ರಣ ಕಾರ್ಯದಲ್ಲಿ ಎಲ್ಲ ಸ್ಥಳೀಯ ಸಂಸ್ಥೆಯ ನೌಕರರು, ಆರೋಗ್ಯ ಕಾರ್ಯಕರ್ತರು ಭಾಗಿಯಾಗಬೇಕು. ಆರೋಗ್ಯ ಇಲಾಖೆಯವರು ಪ್ರತಿ ದಿನ ಸಂಜೆ ನನಗೆ ಡೆಂಘೀ ಕುರಿತಾದ ದೈನಂದಿನ ವರದಿಯನ್ನು ನೀಡಬೇಕೆಂದು ಸೂಚಿಸಿದರು.
ವೈದ್ಯ ವಿದ್ಯಾರ್ಥಿಗಳಿಗೆ ಡೆಂಘೀ : ಸಿಮ್ಸ್ ಮೆಡಿಕಲ್ ಕಾಲೇಜಿನ 4 ವಿದ್ಯಾರ್ಥಿಗಳು ಡೆಂಗಿ ಪಾಸಿಟಿವ್ ಇದ್ದು, ಕಾಲೇಜು ಮತ್ತು ಹಾಸ್ಟೆಲ್ಗಳಲ್ಲಿ ಲಾರ್ವಾ ಉತ್ಪತ್ತಿ ತಾಣ ನಾಶ ಮತ್ತು ಫಾಗಿಂಗ್ ಮಾಡಿಸಬೇಕು ಎಂದು ಸಿಮ್ಸ್ ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಡಿಎಚ್ಒ ಡಾ.ನಟರಾಜ್, ವಿವಿಧ ಕಾರ್ಯಕ್ರಮಾಧಿಕಾರಿಗಳು, ಟಿಎಚ್ಒ ಡಾ.ಚಂದ್ರಶೇಖರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು. 457 ಡೆಂಘೀ ಪ್ರಕರಣ ಪತ್ತೆ: ಡಾ.ಗುಡುದಪ್ಪ ಕಳೆದ ಜನವರಿ 1 ರಿಂದ ಆ.2 ರವರೆಗೆ ವರದಿಯಾದ ಪ್ರಕರಣಗಳಲ್ಲಿ ಭದ್ರಾವತಿ ತಾಲೂಕಿನಲ್ಲಿ 476 ರಕ್ತದ ಮಾದರಿ ಪರೀಕ್ಷೆಯಲ್ಲಿ 34 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಪಾಸಿಟಿವಿಟಿ ರೇಟ್ ಶೇ.7, ಹೊಸನಗರದಲ್ಲಿ 582 ಪರೀಕ್ಷೆಯಲ್ಲಿ 37 ಪಾಸಿಟಿವ್ ಇದ್ದು ,ಶೇ.6 ಪಾಸಿಟಿವಿಟಿ, ಸಾಗರದಲ್ಲಿ 568 ಪರೀಕ್ಷೆಯಲ್ಲಿ 48 ಪಾಸಿಟಿವ್ ಬಂದಿದ್ದು ಶೇ.8 ಪಾಸಿಟಿವಿಟಿ, ಶಿಕಾರಿಪುರದಲ್ಲಿ 625 ಪರೀಕ್ಷೆಯಲ್ಲಿ 104 ಪಾಸಿಟಿವ್ ಬಂದಿದ್ದು ಶೇ.16.64, ಶಿವಮೊಗ್ಗದಲ್ಲಿ 708 ಪರೀಕ್ಷೆಯಲ್ಲಿ 153 ಪಾಸಿಟಿವ್ ಪ್ರಕರಣ ಬಂದಿದ್ದು ಶೇ.21.61, ಸೊರಬದಲ್ಲಿ 681 ಪರೀಕ್ಷೆಯಲ್ಲಿ 46 ಪಾಸಿಟಿವ್ ಪ್ರಕರಣ ಬಂದಿದ್ದು, ಶೇ.7 ಪಾಸಿಟಿವಿಟಿ ಮತ್ತು ತೀರ್ಥಹಳ್ಳಿಯಲ್ಲಿ 473 ಪರೀಕ್ಷೆಯಲ್ಲಿ 35 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಶೇ.7 ಪಾಸಿಟಿವಿಟಿ ಇದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 7 ಹಾಗೂ ಈವರೆಗೆ 457 ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಇಬ್ಬರು ಸಾವನ್ನಪಿದ್ದಾರೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಮಾಹಿತಿ ನೀಡಿದರು.