ಸಾರಾಂಶ
ಧಾರವಾಡ:
ವಿದ್ಯಾರ್ಥಿಗಳು ಸತತ ಅಧ್ಯಯನದಿಂದ ಸಹಜವಾಗಿ ಏಕಾಗ್ರತೆ ಸಾಧಿಸಬಹುದು. ಅಧ್ಯಯನಶೀಲರಾದಾಗ ಚಂಚಲ ಚಿತ್ತವಾದ ಮನಸ್ಸನ್ನು ಹತೋಟಿಯಲ್ಲಿರಿಸಿಕೊಂಡು ಅಧ್ಯಯನ ಮಾಡಿದರೆ, ಜೀವನದಲ್ಲಿ ಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದೆಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಮಾಳಮಡ್ಡಿಯ ಕೆ.ಇ. ಬೋರ್ಡ್ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಧ್ಯಯನದಲ್ಲಿ ಏಕಾಗ್ರತೆ ಸಾಧಿಸುವುದು ಹೇಗೆ?’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರುವಿದ್ಯಾರ್ಥಿಗಳು ಅಭ್ಯಾಸ ಮಾಡುವಾಗ ಶ್ರದ್ಧೆ ಹಾಗೂ ಆತ್ಮವಿಶ್ವಾಸ ಹೊಂದಿರಬೇಕು. ಖಂಡಿತ ಹೆಚ್ಚು ಅಂಕ ಗಳಿಸುತ್ತೇನೆಂಬ ಛಲದೊಂದಿಗೆ ಓದಬೇಕು. ಸಮಯದ ಸದ್ಬಳಕೆ ಮಾಡಿಕೊಂಡು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು. ಗುಂಪು ಚರ್ಚೆಯ ಅಧ್ಯಯನ ನಿಮ್ಮಲ್ಲಿ ಏಕಾಗ್ರತೆ ಮೂಡಿಸುತ್ತದೆ. ಪರೀಕ್ಷೆಗಳ ಬಗ್ಗೆ ವಿನಾಕಾರಣ ಸಂಶಯ ಹಾಗೂ ಭಯಪಡಬಾರದು. ಇವು ನಿಮ್ಮನ್ನು ನಿಶಕ್ತರನ್ನಾಗಿ ಮಾಡುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೆಇ ಬೋರ್ಡ್ ಪ್ರೌಢಶಾಲೆ ಈ ನಾಡಿನ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ೧೫೦ ವರ್ಷಗಳಿಂದ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಲ್ಲಿ ಅಧ್ಯಯನ ಮಾಡಿದ ಸಹಸ್ರಾರು ವಿದ್ಯಾರ್ಥಿಗಳು ಈ ನಾಡಿನ ಮಹಾನ್ ಸಾಧಕರಾಗಿದ್ದಾರೆ. ಒಂದು ಕಾಲಕ್ಕೆ ಈ ಶಾಲೆ ರ್ಯಾಂಕ್ಗಳ ಶಾಲೆ ಎಂದೇ ಪ್ರಸಿದ್ಧಿ ಪಡೆದಿತ್ತು ಎಂದ ಅವರು, ವಿದ್ಯಾರ್ಥಿಗಳು ನಿಮ್ಮ ತಂದೆ-ತಾಯಿ ನಿಮಗಾಗಿ ತಮ್ಮ ವೈಯಕ್ತಿಕ ಸುಖ, ತ್ಯಾಗ ಮಾಡುತ್ತಿರುವುದನ್ನು ಒಮ್ಮೆ ಸ್ಮರಿಸಿಕೊಂಡರೆ ನೀವು ಸಾಧಕರಾಗಬಹುದು ಎಂದು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಕೆಇ ಬೋರ್ಡ್ ಕಾರ್ಯದರ್ಶಿ ಡಿ.ಎಸ್. ರಾಜಪುರೋಹಿತ ಮಾತನಾಡಿ, ಏಕೀಕರಣಕ್ಕೆ ಬುನಾದಿ ಹಾಕಿದ್ದೆ ಕರ್ನಾಟಕ ವಿದ್ಯಾವರ್ಧಕ ಸಂಘವಾಗಿದ್ದು ಪರೀಕ್ಷಾ ಪರಿಣಾಮ ಸುಧಾರಣೆಗೆ ಸಂಘದ ಪ್ರಯತ್ನ ದೊಡ್ಡದು. ಪಿಯುಸಿ, ಎಸ್ಎಸ್ಎಲ್ಸಿ ನಿಮ್ಮ ವಿದ್ಯಾರ್ಥಿ ಜೀವನದ ಮಹತ್ವದ ತಿರುವಾಗಿದ್ದು ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ನಿಮ್ಮ ಯಶಸ್ಸಿನ ಹಿಂದೆ ನಿಮ್ಮ ಗುರುಗಳು, ಪಾಲಕರ ಸಹಕಾರಯುತ ಪ್ರಯತ್ನ ದೊಡ್ಡದು ಎಂದರು.
ಡಿಮ್ಹಾನ್ಸ್ ಮನೋ ಆರೋಗ್ಯ ಸಮಾಜ ಕಾರ್ಯಕರ್ತರಾದ ಪ್ರಶಾಂತ ಪಾಟೀಲ, ಪರೀಕ್ಷೆಗಾಗಿ ವಿದ್ಯಾರ್ಥಿಗಳು ಹೇಗೆ ಸಿದ್ಧರಾಗಬೇಕೆಂದು ಉಪನ್ಯಾಸ ನೀಡಿದರು. ಮಕ್ಕಳು ಸಂವಾದ ಕಾರ್ಯಕ್ರಮದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಂಡರು.ಮುಖ್ಯಾಧ್ಯಾಪಕರಾದ ಎನ್.ಎಸ್. ಗೋವಿಂದರಡ್ಡಿ ಸ್ವಾಗತಿಸಿದರು. ಶಿಕ್ಷಣ ಮಂಟಪ ಸಂಚಾಲಕ ವೀರಣ್ಣ ಒಡ್ಡೀನ ಪ್ರಸ್ತಾವಿಸಿದರು. ಸಂಗಮೇಶ ಹಡಪದ ನಿರೂಪಿಸಿದರು. ಪ್ರಕಾಶ ಕವಲಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಂ.ವ್ಹಿ. ಕವಳಿ, ಅಭಿನಂದನ. ಎಸ್.ಡಿ. ಜಹಗೀರದಾರ, ವಿಜಯಲಕ್ಷ್ಮಿಕಲ್ಯಾಣಶೆಟ್ಟರ, ಮಹಾಂತೇಶ ಎಸ್. ನರೇಗಲ್, ಸೇರಿದಂತೆ, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಇದ್ದರು.