ಶಿಗ್ಗಾಂವಿಯಲ್ಲಿ ನೀರಿನ ಸಮಸ್ಯೆ-ಶಾಸಕ ಪಠಾಣ ಹೇಳಿಕೆಗೆ ಖಂಡನೆ

| Published : Dec 19 2024, 12:34 AM IST

ಶಿಗ್ಗಾಂವಿಯಲ್ಲಿ ನೀರಿನ ಸಮಸ್ಯೆ-ಶಾಸಕ ಪಠಾಣ ಹೇಳಿಕೆಗೆ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ಪುರಸಭೆ ವ್ಯಾಪ್ತಿಯಲ್ಲಿ 15 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದು ಶಾಸಕ ಯಾಸೀರ್‌ಖಾನ್ ಪಠಾಣ ಅವರು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದು, ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಅಧಿವೇಶನದಲ್ಲಿ ಅವರು ತಪ್ಪು ಮಾಹಿತಿ ನೀಡಿರುವುದನ್ನು ಖಂಡಿಸುತ್ತೇವೆ ಎಂದು ಶಿಗ್ಗಾಂವಿ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಹೇಳಿದರು.

ಶಿಗ್ಗಾಂವಿ: ಶಿಗ್ಗಾಂವಿ ಪುರಸಭೆ ವ್ಯಾಪ್ತಿಯಲ್ಲಿ 15 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದು ಶಾಸಕ ಯಾಸೀರ್‌ಖಾನ್ ಪಠಾಣ ಅವರು ಬೆಳಗಾವಿ ಅಧಿವೇಶನದಲ್ಲಿ ಹೇಳಿದ್ದು, ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಅಧಿವೇಶನದಲ್ಲಿ ಅವರು ತಪ್ಪು ಮಾಹಿತಿ ನೀಡಿರುವುದನ್ನು ಖಂಡಿಸುತ್ತೇವೆ ಎಂದು ಶಿಗ್ಗಾಂವಿ ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯಲ್ಲಿ ಈಗಾಗಲೇ 5-6 ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಮೂರು ದಿನಗಳಿಗೊಮ್ಮೆ ನೀರು ಕೊಡಲು ಸಾಧ್ಯವಿದೆ. ಆದರೆ ಪಟ್ಟಣದಲ್ಲಿ ಹಳೆಯ ಪೈಪ್‌ಲೈನ್‌ ಇರುವುದರಿಂದ ಕೊಡುತ್ತಿಲ್ಲ. ನೀರು ಸಂಗ್ರಹಕ್ಕೆ 6ನೇ ವಾರ್ಡ್‌ನಲ್ಲಿ ಬೃಹತ್‌ ಟ್ಯಾಂಕ್‌ ನಿರ್ಮಿಸಲಾಗುತ್ತಿದೆ. ತಾಪಂ ಆವರಣದಲ್ಲಿಯೂ ಟ್ಯಾಂಕ್‌ ನಿರ್ಮಾಣವಾಗುತ್ತಿದೆ. ಪ್ರತಿ ವಾರ್ಡ್‌ನಲ್ಲಿಯೂ ಹೊಸ ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಈಗಾಗಲೇ ೭-೮ ವಾರ್ಡ್‌ಗಳಲ್ಲಿ ಕಾಮಗಾರಿ ಮುಕ್ತಾಯವಾಗಿದೆ. ಉಳಿದ ವಾರ್ಡ್‌ನಲ್ಲಿಯೂ ಪ್ರಗತಿಯ ಹಂತದಲ್ಲಿದೆ ಎಂದು ವಿವರಿಸಿದರು.

ಶಿಗ್ಗಾಂವಿ ಪಟ್ಟಣಕ್ಕೆ ₹೬೫.35 ಕೋಟಿ ಬಿಡುಗಡೆ ಮಾಡಿದ್ದು, ಇದರಿಂದ ನಿರಂತರ ನೀರು ಪೂರೈಸುವ ಉದ್ದೇಶ ಹೊಂದಲಾಗಿದೆ. ಶಿಗ್ಗಾಂವಿ ಪಟ್ಟಣದಲ್ಲಿ ೩೫ ಸಾವಿರ ಜನಸಂಖ್ಯೆ ಇದ್ದು, ಅಧಿವೇಶನದಲ್ಲಿ ಶಾಸಕ ಪಠಾಣ ಅವರು ತಪ್ಪು ಮಾಹಿತಿ ನೀಡಿದ್ದಾರೆ. ಸಭೆ ನಡೆಸಿ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಶಿಗ್ಗಾಂವಿ ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿದ್ದು, ಮೂಲಸೌಕರ್ಯ ಅಭಿವೃದ್ಧಿಗೆ ತಕ್ಷಣ ಅನುದಾನ ಬಿಡುಗಡೆ ಮಾಡಿ, ಬಾಕಿ ಉಳಿದ ಕೆಲಸ ಪ್ರಾರಂಬಿಸುವುದು ಅವಶ್ಯವಾಗಿದೆ ಎಂದರು.

ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಶ್ರೀಕಾಂತ ಬುಳ್ಳಕ್ಕನವರು ಮಾತನಾಡಿ, ಶಿಗ್ಗಾಂವಿ, ಸವಣೂರ, ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ನಗರೋತ್ಥಾನ ಕಾಮಗಾರಿ ನಡೆಯುತ್ತಿಲ್ಲ. ಅದನ್ನು ಹೇಳದೆ ಅಧಿವೇಶನದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುವುದು ಖಂಡನೀಯ. ಸ್ಥಳೀಯವಾಗಿ ಮಾಹಿತಿ ಪಡೆದು ಮಾತನಾಡುವುದು ಅವಶ್ಯ ಎಂದರು.

ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಸುಭಾಸ ಚವ್ಹಾಣ ಮಾತನಾಡಿ, ಅಧಿವೇಶನದಲ್ಲಿ ಪ್ರಸ್ತಾಪ ಮಾಡುವಾಗ ಶಾಸಕರು ಸರಿಯಾದ ಅಂಕಿ-ಅಂಶಗಳನ್ನು ಪಡೆಯಬೇಕು. ಇಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅನುದಾನವಿಲ್ಲದೆ ಗುತ್ತಿಗೆದಾರರು ಕೆಲಸ ನಿಲ್ಲಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿದೆ. ಅದರ ಕುರಿತು ಗಮನಹರಿಸುವುದನ್ನು ಬಿಟ್ಟು ಇಲ್ಲದ ನೀರಿನ ಸಮಸ್ಯೆ ಮಾತನಾಡಿದ್ದು ಸರಿಯಾದ ಕ್ರಮವಲ್ಲ ಎಂದರು.

ಪುರಸಭೆಯ ಉಪಾಧ್ಯಕ್ಷೆ ಶಾಂತಾಬಾಯಿ ಸುಬೇದಾರ, ಮಾಜಿ ಅಧ್ಯಕ್ಷ ಸದಸ್ಯ ಪರಶುರಾಮ ಸೋನ್ನದ, ಮಂಜುನಾಥ ಬ್ಯಾಹಟ್ಟಿ, ದಯಾನಂದ ಅಕ್ಕಿ ಇದ್ದರು.