ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಿಂದ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಬೇಕು ಎಂಬ ರಾಜ್ಯಸರ್ಕಾರ ಆದೇಶ ಹೊರಡಿಸಿರುವ ಕ್ರಮವನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ನಾಗರಿಕರು ತೀವ್ರವಾಗಿ ಖಂಡಿಸಿ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ಉಪತಹಸೀಲ್ದಾರ್ ಅವರ ಮುಖಾಂತರ ಸರ್ಕಾರವನ್ನು ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಶಿರಾಳಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಿಂದ ತಜ್ಞ ವೈದ್ಯರನ್ನು ವರ್ಗಾವಣೆ ಮಾಡಬೇಕು ಎಂಬ ರಾಜ್ಯಸರ್ಕಾರ ಆದೇಶ ಹೊರಡಿಸಿರುವ ಕ್ರಮವನ್ನು ಖಂಡಿಸಿ ರಾಜ್ಯ ರೈತಸಂಘ ಹಾಗೂ ನಾಗರಿಕರು ತೀವ್ರವಾಗಿ ಖಂಡಿಸಿ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ಉಪತಹಸೀಲ್ದಾರ್ ಅವರ ಮುಖಾಂತರ ಸರ್ಕಾರವನ್ನು ಆಗ್ರಹಿಸಿದೆ.ಗುರುವಾರ ರಾಜ್ಯ ರೈತಸಂಘದ ಪದಾಧಿಕಾರಿಗಳು ಹಾಗೂ ನಾಗರಿಕರು ನಾಡಕಚೇರಿಯ ಉಪತಹಸೀಲ್ದಾರ್ ಸಾಕಮ್ಮ ಅವರಿಗೆ ಮನವಿ ಮಾಡಿ, ರಾಜ್ಯ ಸರ್ಕಾರ ಇತ್ತೀಚೆಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಿಂಗಳಿಗೆ ೩೦ಕ್ಕಿಂತ ಕಡಿಮೆ ಹೆರಿಗೆ ಆಗುವ ಅಸ್ಪತ್ರೆಗಳಿಂದ ಪ್ರಸೂತಿ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರುಗಳನ್ನು ತಾಲೂಕು ಕೇಂದ್ರಗಳಿಗೆ ಸ್ಥಳಾಂತರಿಸಿ ಸಮುದಾಯ ಆಸ್ಪತ್ರೆಗಳಲ್ಲಿ ಸಾಮಾನ್ಯ ಚಿಕಿತ್ಸೆ ಕೊಡಬೇಕೆಂಬ ಆದೇಶ ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಶಿರಾಳಕೊಪ್ಪದಲ್ಲಿ ಇತ್ತೀಚೆಗೆ ಕೋಟ್ಯಾತರ ರು. ವೆಚ್ಚಮಾಡಿ ಯಡಿಯೂರಪ್ಪನವರ ಸಲಹೆಯಂತೆ ಸಂಸದರು ಹಾಗೂ ಶಾಸಕರು ೩೦ ಹಾಸಿಗೆಯಿಂದ ೫೦ ಹಾಸಿಗೆಗಳ ಸಾಮರ್ಥ್ಯಕ್ಕೆ ಹೆಚ್ಚಿಸಿ ಚಾಲನೆ ನೀಡಿದ್ದಾರೆ. ಹಾಗೆಯೇ ಸಮುದಾಯ ಅಸ್ಪತ್ರೆಗೆ ತಜ್ಞ ವೈದ್ಯರ ಸಂಖ್ಯೆ ಕಡಿಮೆ ಇದ್ದು, ಈಗಿರುವ ತಜ್ಞ ವೈದ್ಯರನ್ನು ಬೇರೆಕಡೆ ವರ್ಗಾಯಿಸಿದರೆ ಹೋರಾಟ ಮಾಡಬೇಕಾದೀತು ಎಂದು ರೈತರು ಹಾಗೂ ನಾಗರಿಕರು ಎಚರಿಸಿದ್ದಾರೆ.ಸುತ್ತಮುತ್ತಲ ತಾಲೂಕಿನ ಗ್ರಾಮಸ್ಥರಿಗೆ ಅನುಕೂಲವಾಗುವ ಈ ಆಸ್ಪತ್ರೆಗೆ ಸರಿಯಾದ ಸಿಬ್ಬಂದಿ ಒದಗಿಸಬಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಬಿಎಸ್ವೈ, ಸಂಸದ ಹಾಗೂ ಶಾಸಕರಿಗೆ ಮನವಿ: ಶಿರಾಳಕೊಪ್ಪ ಹಾಗೂ ಶಿಕಾರಿಪುರ ಎರಡು ಕಣ್ಣು ಇದ್ದಂತೆ ಎಂದು ಇಲ್ಲಿಯ ಸಮುದಾಯ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪನವರು ,ಸಂಸದ ರಾಘವೇಂದ್ರ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶಿರಾಳಕೊಪ್ಪ ಸಮುದಾಯ ಅಸ್ಪತ್ರೆಗಳ ಸಮಸ್ಯೆ ಬಗ್ಗೆ ಕ್ರಮ ಕೈಗೊಂಡು ಈ ಭಾಗದ ರೈತರಿಗೆ ಹಾಗೂ ನಾಗರಿಕರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ರೈತ ನಾಯಕರಾದ ಈರಣ್ಣ ಪ್ಯಾಟಿ, ರಾಜಣ್ಣ ಮುಗಳಿಕೊಪ್ಪ, ರಾಜಣ್ಣ ತಾಳಗುಂದ, ನಾಗರೀಕ ಸಮಿತಿ ಅಧ್ಯಕ್ಷ ಮಂಜಣ್ಣ, ವೀರಭದ್ರಪ್ಪ, ನವೀದ ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.