ದೇವದಾಸಿ ಮಹಿಳೆಯರ ಮರುಗಣತಿ ನಡೆಸಿ

| Published : Jan 05 2025, 01:31 AM IST

ಸಾರಾಂಶ

ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಮೂಲಕವೇ ಮನೆ ಮನೆಗೆ ತೆರಳಿ ಗಣತಿ ಮಾಡುವುದು ಸೂಕ್ತ

ಗದಗ: ದೇವದಾಸಿ ಮಹಿಳೆಯರ ಮರುಗಣತಿ ಅಂಗನವಾಡಿ ಮೂಲಕ ನಡೆಸುವಂತೆ ಒತ್ತಾಯಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಜಿಲ್ಲಾ ಉಪಾಧ್ಯಕ್ಷೆ ಮರಿಯಮ್ಮ ಮುಳಗುಂದ ಮಾತನಾಡಿ, ಕಳೆದ ಎರಡು-ಮೂರು ದಶಕಗಳಿಂದ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ಹಾಗೂ ದೇವದಾಸಿ ಮಹಿಳೆಯರ ನಿರಂತರ ಮನವಿ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ದೇವದಾಸಿ ಮಹಿಳೆಯರ ಕುಟುಂಬದ ಮರುಗಣತಿಗೆ ನಡೆಸಲು ಮುಂದಾಗಿರುವುದು ಸ್ವಾಗತರ್ಹಾ.ಇದೊಂದು ಐತಿಹಾಸಿಕ ಕ್ರಮವಾಗಿದೆ. ಆದರೆ, ಮರುಗಣತಿ ದೇವದಾಸಿ ಮಹಿಳೆಯರ ಮನೆಮನೆಗೆ ತೆರಳಿ ಮಾಡುವಂತೆ ಅಗತ್ಯ ಕ್ರಮ ವಹಿಸಬೇಕು. ಈ ಹಿಂದೆ ಇಂತಹ ಗಣತಿಗಾಗಿ ತೊಡಗಿಸಿಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ನೌಕರರ ಮೂಲಕ ಗಣತಿಗೆ ಕ್ರಮ ವಹಿಸುವಂತೆ ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗುವುದು.

ಇದನ್ನು ತಾಲೂಕು ಮಟ್ಟದಲ್ಲಿ ಅಥವಾ ಗ್ರಾಪಂ ಮಟ್ಟದಲ್ಲಿ ನಡೆಸುವುದು ಸಾಧ್ಯವಿಲ್ಲ ಹಾಗೆ ಮಾಡುವುದು ತೀವ್ರ ಭ್ರಷ್ಟಾಚಾರಕ್ಕೆ ಮತ್ತು ದೇವದಾಸಿ ಮಹಿಳೆಯರಲ್ಲದ ಇತರೆ ಮಹಿಳೆಯರು ಈ ಸೌಲಭ್ಯ ಅನವಶ್ಯಕವಾಗಿ ಪಡೆಯಲು ಕಾರಣವಾಗುತ್ತದೆ.ಹಾಗಾಗಿ ಇಡೀ ದೇವದಾಸಿ ಮಹಿಳೆಯರ ಕುಟುಂಬದ ಎಲ್ಲ ಸದಸ್ಯರು ಈ ಗಣತಿಗೆ ದೊರೆಯಬೇಕಾದುದರಿಂದ ಅವರೆಲ್ಲರನ್ನು ಬೇರೊಂದು ಸ್ಥಳಗಳಿಗೆ ಕರೆಸಿ ಗಣತಿಗೆ ಮಾಡುವುದು ಆ ಕುಟುಂಬಗಳಿಗೆ ತೊಂದರೆದಾಯಕವಾಗಿದೆ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ನೀಡಿ ಅವರ ಮೂಲಕವೇ ಮನೆ ಮನೆಗೆ ತೆರಳಿ ಗಣತಿ ಮಾಡುವುದು ಸೂಕ್ತವಾಗಿದೆ. ಈ ಕುರಿತಂತೆ ಸ್ಪಷ್ಟ ನಿಲುಮೆಯಿಂದ ಸರ್ಕಾರ ಈ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ಬಾಲು ರಾಠೋಡ, ತಾಲೂಕಾಧ್ಯಕ್ಷೆ ಮಹಾದೇವಿ ದೊಡ್ಡಮನಿ, ಸತ್ಯಪ್ಪ ಕೆಂಚವ್ವ ಬುಳ್ಳಮನವರ, ಸವಿತಾ ಬಣಕಾರ, ಯಲ್ಲಪ್ಪ ಬಣಕಾರ, ಗೀತಾ ಯಳವತ್ತಿ, ಶೋಭಾ ಬಾರಿಗೀಡದ, ಶಿವಕ್ಕ ಬೇವಿನಮರದ, ಜೋತಿ ದೊಡ್ಡಮನಿ, ನಾಗಮ್ಮ ಹಾದಿಮನಿ ಹಾಗೂ ಇತರರು ಹಾಜರಿದ್ದರು.