ಅನುಮಾನಾಸ್ಪದಗಳಿಗೆ ಅವಕಾಶ ನೀಡದೇ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಮುಂಬರುವ ಬಾಗಲಕೋಟೆ ಉಪಚುನಾಣೆಯನ್ನು ನಡೆಸುವ ಕಾರ್ಯವಾಗಬೇಕು ಎಂದು ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ನಿಯಮಾವಳಿ ವೀಕ್ಷಕರಾದ ರಾಮಪ್ರಶಾಂತ ಮನೋಹರ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಅನುಮಾನಾಸ್ಪದಗಳಿಗೆ ಅವಕಾಶ ನೀಡದೇ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಮುಂಬರುವ ಬಾಗಲಕೋಟೆ ಉಪಚುನಾಣೆಯನ್ನು ನಡೆಸುವ ಕಾರ್ಯವಾಗಬೇಕು ಎಂದು ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ನಿಯಮಾವಳಿ ವೀಕ್ಷಕರಾದ ರಾಮಪ್ರಶಾಂತ ಮನೋಹರ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಸಂಬಂಧಿಸಿದಂತೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆ ಕುರಿತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಚುನಾವಣೆ ನಡೆದರೂ ಸಹ ಚುನಾವಣೆ ಪ್ರಕ್ರಿಯೆ ಜಾಗೃತೆಯಿಂದ ನಿರ್ವಹಿಸಬೇಕಾಗುತ್ತದೆ. ಮತದಾರರ ಪಟ್ಟಿ ತಯಾರಿಸುವುದರಿಂದಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದಂತೆ.ಲೋಪದೋಷಗಳಿದ್ದಲ್ಲಿ ಪ್ರಾರಂಭದಲ್ಲಿಯೇ ರಾಜಕೀಯ ಪಕ್ಷಗಳು ಗಮನಕ್ಕೆ ತರುವ ಕೆಲಸ ಮಾಡಿದಲ್ಲಿ ಅಂತಹ ದೋಷಗಳನ್ನು ಸರಿಪಡಿಸಿ ಚುನಾವಣೆಯನ್ನು ಸುಗಮವಾಗಿ ಮುಗಿಸಲು ಸಾಧ್ಯವಾಗುತ್ತದೆ. ಅಂತಹ ಯಾವುಧೆ ಲೋಪಗಳಿದ್ದಲ್ಲಿ ತಕ್ಷಣ ಸೂಚಿಸುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು.
ಜ.3 ರಿಂದ 31ರವೆರೆಗೆ ಫಾರಂ 6ಕ್ಕೆ ಸಂಬಂಧಿಸಿದಂತೆ 4703, ಫಾರಂ 7 ರಡಿ 1821, ಫಾರಂ 8ರ ತಿದ್ದುಪಡಿಗೆ ಸಂಬಂಧಿಸಿದಂತೆ 5700 ಹಾಗೂ ಫಾರಂ 8ರಡಿ ವರ್ಗಾವಣೆಗೆ ಸಂಬಂಧಿಸಿದಂತೆ 313 ಸೇರಿ ಒಟ್ಟಾರೆ 12537 ಫಾರಂಗಳು ಸ್ವೀಕೃತವಾಗಿವೆ. ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲು ಫೆ.7ರವರೆಗೆ ಕಾಲಾವಕಾಶವಿದೆ. ಈಗಾಗಲೇ ಬಿಎಲ್ಓ ಗಳಿಗೆ ತರಬೇತಿ ನೀಡಲಾಗಿದ್ದು, ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿದೆ. ಫಾರಂ 6 ಮತ್ತು 7ಕ್ಕೆ ಸಂಬಂಧಿಸಿದ ಆಕ್ಷೇಪಣೆಗಳು ಅಥವಾ ಬೇರೆ ಮತಕ್ಷೇತ್ರದವರು ಇಲ್ಲಿಗೆ ಬರುವ ಸಂಭವನೀಯತೆ ಇದ್ದಲ್ಲಿ ರಾಜಕೀಯ ಪಕ್ಷಗಳು ತಿಳಿಸಬೇಕು. ಎಲ್ಲವನ್ನೂ ಸರಿಪಡಿಸಿ ಫೆ.14ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಈ ಸಂಧರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಪ್ರತಿನಿಧಿಗಳ ಸಹಕಾರ ಮುಖ್ಯವಾಗಿದ್ದು, ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಬಾಗಲಕೋಟ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರ ವಾಸುದೇವ ಸ್ವಾಮಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.