ಕೇಂದ್ರ ಸರ್ಕಾರ ಜಾರಿಗೆ ತಂದ ಆದಾಯ ತೆರಿಗೆ ಕಾಯ್ದೆ-2025ರ ಹೊಸ ನಿಯಮಗಳು ಮತ್ತು ಬದಲಾವಣೆ ಕುರಿತಂತೆ ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು, ಉದ್ಯಮಿಗಳು, ವರ್ತಕರು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಎರಡು ದಿನಗಳ ಲಕ್ಷ್ಯ-2026 ಸಮಾವೇಶವನ್ನು ಜೂ.12 ಮತ್ತು 13ರಂದು ನಗರದ ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ಹಮ್ಮಿಕೊಳ್ಳಲಾಗಿದೆ.

- ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ಲಕ್ಷ್ಯ-2026 ಆಯೋಜನೆ: ಸುಧೀಂದ್ರ ರಾವ್‌ । - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಸರ್ಕಾರ ಜಾರಿಗೆ ತಂದ ಆದಾಯ ತೆರಿಗೆ ಕಾಯ್ದೆ-2025ರ ಹೊಸ ನಿಯಮಗಳು ಮತ್ತು ಬದಲಾವಣೆ ಕುರಿತಂತೆ ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು, ಉದ್ಯಮಿಗಳು, ವರ್ತಕರು, ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಎರಡು ದಿನಗಳ ಲಕ್ಷ್ಯ-2026 ಸಮಾವೇಶವನ್ನು ಜೂ.12 ಮತ್ತು 13ರಂದು ನಗರದ ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ಹಮ್ಮಿಕೊಳ್ಳಲಾಗಿದೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಚ್.ಟಿ.ಸುಧೀಂದ್ರ ರಾವ್‌ ಮಾಹಿತಿ ನೀಡಿ, ಜೂ.12ರ ಬೆಳಗ್ಗೆ 9.45ಕ್ಕೆ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಶಿಶಿರ್‌ ದಮಿಜಾ, ಪ್ರಧಾನ ಆಯುಕ್ತರಾದ ಅಮೃತಾ ರಾಜನ್‌, ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್.ವೀರಣ್ಣ, ಹೆಚ್ಚುವರಿ ಆಯುಕ್ತ ಡಿ.ಎಸ್. ಕಾರ್ತಿಕ್‌ ಭಾಗವಹಿಸಲಿದ್ದಾರೆ. ಎಚ್.ಟಿ. ಸುಧೀಂದ್ರ ರಾವ್ ಅಧ್ಯಕ್ಷತೆ ವಹಿಸುವರು ಎಂದರು.

ಆದಾಯ ತೆರಿಗೆ ಕಾಯ್ದೆ 1961ರ ಬದಲಾಗಿ ಆದಾಯ ತೆರಿಗೆ ಕಾಯ್ದೆ 2025 ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಹೊಸ ಕಾಯ್ದೆಯು 1.4.2026ರಿಂದಲೇ ಅನುಷ್ಠಾನಗೊಂಡಿದೆ. ಹೊಸ ಕಾಯ್ದೆಯಲ್ಲಿ ಆದ ಬದಲಾವಣೆಗಳು, ಇನ್‌ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲಿಂಗ್ ಮತ್ತು ಫೈನಾನ್ಸ್ ಸ್ಟೇಟ್‌ಮೆಂಟ್‌ಗಳ ಸಲ್ಲಿಕೆ ಬಗ್ಗೆ ವೃತ್ತಿ ಬಾಂಧವರಿಗೆ ಮಾಹಿತಿ ನೀಡಲು ಲಕ್ಷ್ಯ-2026 ಹೆಸರಿನ ಸಮಾವೇಶ ಎರಡು ದಿನ ನಡೆಯಲಿದೆ. ಎರಡೂ ದಿನ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ, ಧಾರವಾಡ ಜಿಲ್ಲೆಗಳ ನೂರಾರು ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಉನ್ನತ ಅಧಿಕಾರಿಗಳು ಹೊಸ ತೆರಿಗೆ ನಿಯಮಗಳ ಬಗ್ಗೆ ಮಾತನಾಡಲಿದ್ದಾರೆ. ಇಲಾಖೆ ಅಧಿಕಾರಿಗಳಾದ ಡಿ.ಎಸ್.ಕಾರ್ತಿಕ್‌, ದಾವಣಗೆರೆ ಅಧಿಕಾರಿಗಳು ಭಾಗವಹಿಸುವರು. ಜೂ.13ರಂದು ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ದಕ್ಷಿಣ ಶಾಸಕ ಸಮರ್ಥ ಎಂ.ಶಾಮನೂರು, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ದೂಡಾ ಮಾಜಿ ಅಧ್ಯಕ್ಷ ಕೆ.ಎಂ.ಸುರೇಶ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಎರಡೂ ದಿನದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಬಿ.ಆರ್.ಶಂಕರ, ನಂಜುಂಡಿ, ನಾಗರಾಜ ದ್ಯಾವನಕೊಪ್ಪ, ರಾಷ್ಟ್ರೀಯ ಸಮಿತಿಯ ಪಾರ್ಥಸಾರಥಿ, ಆಲ್‌ ಇಂಡಿಯಾ ಫೆಡರೇಷನ್ ಆಫ್ ಟ್ಯಾಕ್ಸ್ ಪ್ರಾಕ್ಟೀಷನರ್ಸ್‌ ಸೌಥ್‌ ಝೋನ್ ಅಧ್ಯಕ್ಷ ಜಿ.ಎಂ.ಭಟ್‌, ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಸಮಾವೇಶಕ್ಕಾಗಿ ಸಂಘದ ಪದಾಧಿಕಾರಿಗಳು ಸೇರಿ ಒಟ್ಟು 17 ಪ್ರಮುಖರ ತಂಡವು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ತೆರಿಗೆ ಸಲಹೆಗಾರರ ಸಂಘವು ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ, ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟ- ದಕ್ಷಿಣ ವಲಯದ ಸಹಯೋಗದಲ್ಲಿ ಸಮಾವೇಶ ಆಯೋಜಿಸಿದೆ ಎಂದು ಎಂದು ಎಚ್.ಟಿ. ಸುಧೀಂದ್ರ ರಾವ್‌ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಿ.ಆರ್.ಶಂಕರ್, ಉಪಾಧ್ಯಕ್ಷ ಎಚ್.ಬಿ.ಸುರೇಶ, ಕಾರ್ಯದರ್ಶಿ ಜಿ.ಮಹಾಂತೇಶ, ಕೆ.ಸಿ. ನಾಗರಾಜ, ಕೆ.ಎಸ್. ಶಿವಕುಮಾರಪ್ಪ, ಎಂ.ಎಸ್. ಮೃತ್ಯುಂಜಯ, ಸಿ.ಚಂದ್ರಪ್ಪ, ಎಚ್.ಬಿ.ಸುರೇಶ, ಬಿ.ಆರ್. ಬಸವರಾಜ, ಬಿ.ಎನ್. ರೇವಣಸಿದ್ದಪ್ಪ, ಪ್ರಸನ್ನಕುಮಾರ ಶರ್ಮ ಇತರರು ಇದ್ದರು.

- - -

-10ಕೆಡಿವಿಜಿ3: ದಾವಣಗೆರೆಯಲ್ಲಿ ಬುಧವಾರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಚ್.ಟಿ.ಸುಧೀಂದ್ರ ರಾವ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.