ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವೈದ್ಯಕೀಯ ಅಧ್ಯಯನದಲ್ಲಿ ಅನಾಟಮಿ ಒಂದು ಮೂಲ ಮತ್ತು ಮಹತ್ವದ ವಿಷಯ. ಈಗ ತಂತ್ರಜ್ಞಾನದ ಪರಿಣಾಮ ಮಾನವ ದೇಹವನ್ನು ತುಂಬ ಪರಿಣಾಮಕಾರಿಯಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತಿದೆ ಎಂದು ಕಲಬುರಗಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥ ಡಾ.ರಾಜಕುಮಾರ ಕೆ.ಆರ್ ಹೇಳಿದರು.ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರೇಡಿಯೋ ಅನಾಟ-2024 ವೈದ್ಯಕೀಯ ಸಮ್ಮೇಳನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ತರಗತಿಯಲ್ಲಿ ಕಲಿಯುವುದರ ಜೊತೆಗೆ ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋವಾಗುತ್ತದೆ. ಸಮ್ಮೇಳನ ಕಲಿಕೆಗೆ ಒಂದು ವೇದಿಕೆಯಾಗಿದೆ. ಎಸ್.ನಿಜಲಿಂಗಪ್ಪ ಕಾಲೇಜಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಅತ್ಯುತ್ತಮ ವಾತಾವರಣ ಸೃಷ್ಟಿಸಲಾಗಿದೆ. ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗಾಗಿ ಸಮ್ಮೇಳನ ಆಯೋಜಿಸಿರುವುದು ಮೆಚ್ಚುವಂತಹದ್ದು. ವಿದ್ಯಾರ್ಥಿಗಳು ಇಂತಹ ಅವಕಾಶ ಸದುಪಯೋಗಿಸಿ ಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ವೈದ್ಯಕೀಯ ವಿಜ್ಞಾನದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಸಮ್ಮೇಳನ ಇದಾಗಿದೆ. ಸಮ್ಮೇಳನದಲ್ಲಿ ಹೊಸ ವಿಷಯಗಳ ಕುರಿತು ಚರ್ಚೆ ಹಾಗೂ ಸಂವಾದಗಳು ನಡೆಯಲಿವೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ಹೊಸ ಕಲಿಕೆಗೆ ಅವಕಾಶ ದೊರೆಯಲಿದೆ. ಎರಡು ದಶಕಗಳ ಹಿಂದೆ ಬಾಗಲಕೋಟೆಯಂತಹ ಸಣ್ಣ ನಗರದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸಲು ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಶ್ರಮಿಸಿದರು. ಇಂದು ನಮ್ಮ ವೈದ್ಯಕೀಯ ಕಾಲೇಜು ರಾಜ್ಯದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದು ಎನ್ನುವ ಗೌರವಕ್ಕೆ ಪಾತ್ರವಾಗಿರುವುದರ ಹಿಂದಿನ ರೂವಾರಿ ಡಾ.ವೀರಣ್ಣ ಚರಂತಿಮಠ ಎಂದರು.ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಅನಾಟಮಿ ವಿಭಾಗ ಮತ್ತು ರೇಡಿಯಾಲಜಿ ವಿಭಾಗ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿತ್ತು. ಬಾಗಲಕೋಟೆ ಮತ್ತು ಬೇರೆ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಿಂದ ಸುಮಾರು 450ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರು ಪಾಲ್ಗೊಂಡಿದ್ದರು. ಬಾಗಲಕೋಟೆ ಎಸ್.ಎನ್.ಮೆಡಿಕಲ್ ಕಾಲೇಜು, ಕಲಬುರಗಿ ಸರ್ಕಾರಿ ಮೆಡಿಕಲ್ ಕಾಲೇಜ್ ಮತ್ತು ದಾವಣಗೆರೆ ವೈದ್ಯಕೀಯ ಕಾಲೇಜಿನ ವಿಷಯ ತಜ್ಞರಿಂದ ವಿಶೇಷ ಉಪನ್ಯಾಸ ನಡೆದವು.
ಡಾ.ರಾಜಕುಮಾರ ಕೆ.ಆರ್ ಮತ್ತು ವಿಶೇಷ ಉಪನ್ಯಾಸಕರಾಗಿ ಆಹ್ವಾನಿತರಾದ ದಾವಣಗೆರೆ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂತೋಷ ಭೋಸ್ಲೆರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ಸಂಘಟನಾ ಕಾರ್ಯಾಧ್ಯಕ್ಷ ಡಾ.ಸಂಜೀವ ಕೊಳಗಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ.ಮಂಜುಳಾ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಡಾ.ಅಶ್ವಿನಿ ಮುತಾಲಿಕ ವಂದಿಸಿದರು.ವೇದಿಕೆಯಲ್ಲಿ ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಮ್.ಸಜ್ಜನ, ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಡಾ.ಸಂತೋಷ ಭೋಸ್ಲೆ, ಡಾಸಂಜೀವ ಕೊಳಗಿ, ಡಾ.ರುದ್ರೇಶ ಹಾಲವಾರ, ಡಾ.ಅಶ್ವಿನಿ ಮುತಾಲಿಕ ಮತ್ತು ಡಾ.ಲೋಹಿತ ಶಹ ಇದ್ದರು. ವಿವಿಧ ಕಾಲೇಜುಗಳಿಂದ ಆಗಮಿಸಿದ ವೈದ್ಯರು, ವಿದ್ಯಾರ್ಥಿಗಳು ಮತ್ತು ಮೆಡಿಕಲ್ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವೈದ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.
ಎಸ್.ನಿಜಲಿಂಗಪ್ಪ ವೈದ್ಯಕೀಯ ಕಾಲೇಜಲ್ಲಿ ವೈದ್ಯಕೀಯ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಪ್ರಥಮ ಸಮ್ಮೇಳನ ಇದಾಗಿದೆ. ಸಮ್ಮೇಳನದಲ್ಲಿ ಬಾಗಲಕೋಟೆ ಮತ್ತು ನೆರೆಯ ಜಿಲ್ಲೆಗಳಿಂದ ಸುಮಾರು 450 ವಿದ್ಯಾರ್ಥಿಗಳು ಭಾಗವಹಿಸಿರುವರು.ಅಶೋಕ ಸಜ್ಜನ, ಕಾರ್ಯಾಧ್ಯಕ್ಷ ವೈದ್ಯಕೀಯ ಆಡಳಿತ ಮಂಡಳಿ