ಸಾರಾಂಶ
ಹರಪನಹಳ್ಳಿ: ರಾಜ್ಯದಲ್ಲಿ ವಕ್ಫ್ ಬೋರ್ಡ್ನಿಂದ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಬಿಜೆಪಿ ಮಂಡಲ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಲಾಯಿತು.ಕೊಟ್ಟೂರು ರಸ್ತೆಯ ಬಿಜೆಪಿ ಕಚೇರಿಯಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ತಾಲೂಕು ಆಡಳಿತ ಸೌಧದಲ್ಲಿ ಬಹಿರಂಗ ಸಭೆ ನಡೆಸಿದರು.
ಪ್ರದಾನಿ ನರೇಂದ್ರ ಮೋದಿಯವರು ದೇಶದ ಜನತೆಯ ಹಿತದೃಷ್ಟಿಯಿಂದ ಹಾಗೂ ವಕ್ಫ್ ಮಂಡಳಿಯಲ್ಲಿ ಆಗುತ್ತಿದ್ದ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡಿಸಿದೆ. ಇದು ಜಂಟಿ ಪಾರ್ಲಿಮೆಂಟರಿ ಬೋರ್ಡಿನ ಪರಿಶೀಲನೆಯಲ್ಲಿದ್ದು, ಈ ತಿದ್ದುಪಡಿ ಜಾರಿಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ವಕ್ಫ್ ಬೋರ್ಡ್ ಕೈಚಳಕ ತೋರಿಸುತ್ತಿದೆ ಎಂದು ಕಾರ್ಯಕರ್ತರು ಆರೋಪಿಸಿದರು.ರಾಜ್ಯದಲ್ಲಿ ನಡೆಯುತ್ತಿರುವ ಇಂತಹ ಎಲ್ಲ ಕೃತ್ಯಗಳಿಗೆ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ ಅಹ್ಮದ್ ನೇರವಾಗಿ ಕುಮ್ಮಕ್ಕು ಕೊಡುತ್ತಿರುವುದು ಇಡೀ ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ದೂರಿದರು.
ರಾಜ್ಯದ ಮಠ- ಮಾನ್ಯಗಳು ಸೇರಿದಂತೆ ವಿವಿಧ ಆಸ್ತಿ ಪಾಸ್ತಿಗಳು ವಕ್ಫ್ ಬೋರ್ಡಿಗೆ ಸೇರಿದ್ದು ಎಂದು ಹೇಳುತ್ತಾ ನೋಟಿಸ್ ಕೊಡಿಸುತ್ತಿದ್ದಾರೆ ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲಹಳ್ಳಿ ಲಕ್ಷ್ಮಣ, ಬಾಗಳಿ ಕೊಟ್ರೇಶಪ್ಪ, ತಾಪಂ ಮಾಜಿ ಉಪಾದ್ಯಕ್ಷ ಮಂಜನಾಯ್ಕ, ಉದಯಕುಮಾರ, ತಾಪಂ ಮಾಜಿ ಸದಸ್ಯ ಹುಣಸಿಹಳ್ಳಿ ಪ್ರಕಾಶ, ಓಂಕಾರಗೌಡ, ಕಣವಿಹಳ್ಳಿ ಮಂಜುನಾಥ, ಮಹೇಶ ಜವಳಿ, ಊಟೇರ ರವಿ, ಶ್ರೀಧರ, ಲಿಂಬ್ಯಾನಾಯ್ಕ, ತೆಲಿಗಿ ಅಂಜಿನಪ್ಪ, ಗಂಗಪ್ಪ, ಶ್ರೀಪತಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನ ಮಲ್ಲಿಕಾರ್ಜುನ, ಮಮತಾ, ಕಡತಿ ರಮೇಶ, ದ್ಯಾಮಜ್ಜ, ಸಂಗಮೇಶ ಕಡಕಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹರಪನಹಳ್ಳಿಯಲ್ಲಿ ವಕ್ಫ್ ಬೋರ್ಡ್ ಗೊಂದಲ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.